AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಷ್ಣೋಯಿ ಸಮುದಾಯ ನಾಯಕರನ್ನು ಭೇಟಿಯಾಗಲು ಚೆಕ್ ಬುಕ್ ತಂದಿದ್ದ ಸಲ್ಮಾನ್ ಖಾನ್

ಕೃಷ್ಣಮೃಗವನ್ನು ಕೊಂದ ಆರೋಪ ಸಲ್ಮಾನ್ ಖಾನ್ ಮೇಲಿದೆಯಾದ್ದರಿಂದ ಬಿಷ್ಣೋಯಿ ಸಮುದಾಯ ಸಲ್ಮಾನ್ ಖಾನ್ ವಿರುದ್ಧ ದಶಕಗಳಿಂದಲೂ ಹೋರಾಡುತ್ತಿದೆ. ಲಾರೆನ್ಸ್ ಬಿಷ್ಣೋಯಿ ಸಹ ಇದೇ ಕಾರಣಕ್ಕೆ ಸಲ್ಮಾನ್ ಖಾನ್ ಅನ್ನು ಕೊಲ್ಲುವ ಯತ್ನ ಮಾಡುತ್ತಿದ್ದಾರೆ. ಆದರೆ ಹಿಂದೊಮ್ಮೆ ಸಲ್ಮಾನ್ ಖಾನ್ ಬಿಷ್ಣೋಯಿ ಸಮುದಾಯದೊಂದಿಗೆ ಸಂಧಾನಕ್ಕೆ ಯತ್ನಿಸಿದ್ದರು ಎಂದು ಲಾರೆನ್ಸ್ ಬಿಷ್ಣೋಯಿಯ ಸಹೋದರ ಹೇಳಿದ್ದಾರೆ.

ಬಿಷ್ಣೋಯಿ ಸಮುದಾಯ ನಾಯಕರನ್ನು ಭೇಟಿಯಾಗಲು ಚೆಕ್ ಬುಕ್ ತಂದಿದ್ದ ಸಲ್ಮಾನ್ ಖಾನ್
ಮಂಜುನಾಥ ಸಿ.
|

Updated on: Oct 24, 2024 | 3:05 PM

Share

ಸಲ್ಮಾನ್ ಖಾನ್​ಗೆ ಜೀವ ಬೆದರಿಕೆ ಇದೆ. ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್ ಅನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಇತ್ತೀಚೆಗಷ್ಟೆ ಸಲ್ಮಾನ್ ಖಾನ್​ರ ಆಪ್ತ ಮಿತ್ರ ಬಾಬಾ ಸಿದ್ಧಿಕಿಯನ್ನು ಬಿಷ್ಣೋಯಿಯ ಸಹಚರರು ಕೊಂದಿದ್ದಾರೆ. ಸಲ್ಮಾನ್ ಖಾನ್, ಬಿಷ್ಣೋಯಿ ಸಮುದಾಯದವರು ದೇವರೆಂದೇ ಪರಿಗಣಿಸುವ ಕೃಷ್ಣಮೃಗವನ್ನು ಕೊಂದ ಆರೋಪ ಹೊತ್ತಿದ್ದು, ಇದೇ ಕಾರಣಕ್ಕೆ ಬಿಷ್ಣೋಯಿ ಸಮುದಾಯದವರು ಸಲ್ಮಾನ್ ಖಾನ್ ಅನ್ನು ದ್ವೇಷಿಸುತ್ತಾರೆ. ಲಾರೆನ್ಸ್ ಬಿಷ್ಣೋಯಿ ಸಹ ಇದೇ ಕಾರಣಕ್ಕೆ ಸಲ್ಮಾನ್ ಖಾನ್ ಅನ್ನು ಕೊಲ್ಲುವ ಪ್ರಯತ್ನದಲ್ಲಿದ್ದಾನೆ.

ಲಾರೆನ್ಸ್ ಬಿಷ್ಣೋಯಿಯ ಹತ್ತಿರದ ಸಂಬಂಧಿ ರಮೇಶ್ ಬಿಷ್ಣೋಯಿ ವ್ಯಕ್ತಿಯೊಬ್ಬ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದು, ಹಿಂದೊಮ್ಮೆ ಸಲ್ಮಾನ್ ಖಾನ್, ಬಿಷ್ಣೋಯಿ ಸಮುದಾಯದೊಟ್ಟಿಗೆ ಸಂಧಾನಕ್ಕೆ ಬಂದಿದ್ದರು ಎಂದಿದ್ದಾರೆ. ಎನ್​ಡಿಟಿವಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ರಮೇಶ್ ಬಿಷ್ಣೋಯಿ, ‘ನಮ್ಮ ಸಮುದಾಯಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು, ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದವರು ನಮ್ಮ ಸಮುದಾಯದ ಧಾರ್ಮಿಕ ಭಾವನೆಗಳ ಜೊತೆಗೆ ಆಟವಾಡುತ್ತಿದ್ದಾರೆ. ನಮ್ಮ ಭಾವನೆಗಳನ್ನು ಹಾಸ್ಯ ಮಾಡುತ್ತಿದ್ದಾರೆ’ ಎಂದಿದ್ದಾರೆ.

‘ಬಿಷ್ಣೋಯಿ ಮತ್ತು ಆತನ ಸಹಚರರು ಹಣಕ್ಕಾಗಿ ಮಗನನ್ನು ಕೊಲ್ಲುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಸಲ್ಮಾನ್ ಖಾನ್​ರ ತಂದೆ ಸಲೀಂ ಖಾನ್ ಮಾಡಿರುವ ಆರೋಪಕ್ಕೆ ಉತ್ತರಿಸಿರುವ ರಮೇಶ್ ಬಿಷ್ಣೋಯಿ, ‘ಸಲ್ಮಾನ್ ಖಾನ್ ಒಮ್ಮೆ ಸಂಧಾನಕ್ಕೆ ಬಂದಾಗ ಚೆಕ್ ಬುಕ್ ತಂದಿದ್ದ, ನಿಮಗೆ ಬೇಕೆನ್ನುವಷ್ಟು ಹಣವನ್ನು ಬರೆದುಕೊಳ್ಳಿ ಎಂದಿದ್ದ ಆದರೆ ನಾವು ಹಣಕ್ಕೆ ಆಸೆ ಬಿದ್ದಿರಲಿಲ್ಲ. ಹಣಕ್ಕಾಗಿ ಮಾಡುವವರಾಗಿದ್ದರೆ ಅಂದೇ ಹಣ ಪಡೆದುಕೊಂಡಿರುತ್ತಿದ್ದೆವು’ ಎಂದಿದ್ದಾರೆ ರಮೇಶ್ ಬಿಷ್ಣೋಯಿ.

ಇದನ್ನೂ ಓದಿ:ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೇಳೋದೇನು?

‘ಈ ವಿಷಯದಲ್ಲಿ (ಸಲ್ಮಾನ್ ಖಾನ್​ರ ಕೊಲ್ಲುವ ಪ್ರಯತ್ನ)ದಲ್ಲಿ ಲಾರೆನ್ಸ್ ಬಿಷ್ಣೋಯಿಗೆ ಇಡೀ ಬಿಷ್ಣೋಯಿ ಸಮುದಾಯ ಬೆಂಬಲ ನೀಡುತ್ತದೆ. ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಕೊಂದಾಗ ನಮ್ಮ ಇಡೀ ಸಮುದಾಯದ ಆಘಾತಕ್ಕೆ ಒಳಗಾಗಿದ್ದು, ಸಿಟ್ಟಿನಿಂದ ಕುದಿದು ಹೋಗಿದ್ದರು. ನಮಗೆ ಪ್ರಕೃತಿ ಮತ್ತು ಪ್ರಾಣಿಗಳೇ ದೇವರುಗಳು. ನಮ್ಮ 363 ಮಂದಿ ಪೂರ್ವಿಕರು ಮರ ಹಾಗೂ ಪ್ರಾಣಿಗಳಿಗಾಗಿ ಜೀವದಾನ ಮಾಡಿದ್ದಾರೆ’ ಎಂದಿದ್ದಾರೆ ರಮೇಶ್ ಬಿಷ್ಣೋಯಿ.

ಲಾರೆನ್ಸ್ ಬಿಷ್ಣೋಯಿ ಒಬ್ಬ ಪಾತಕಿ, ಆತನ ವಿರುದ್ಧ ಕೊಲೆ, ಹಣ ಸುಲಿಗೆ ಇನ್ನಿತರೆ ಆರೋಪಗಳು ಇವೆಯಲ್ಲ ಎಂಬ ಪ್ರಶ್ನೆಗೆ, ‘ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ಸಲ್ಮಾನ್ ಖಾನ್​ಗೆ ಐದು ವರ್ಷ ಶಿಕ್ಷೆ ಆಗಿದೆ. ಅದೇ ಲಾರೆನ್ಸ್ ವಿರುದ್ಧ ಈ ವೆರಗೆ ಯಾವುದೇ ಆರೋಪ ಸಾಬೀತಾಗಿಲ್ಲ. ಹಾಗಾಗಿ ಬಿಷ್ಣೋಯಿ ಪಾತಕಿ ಎಂದು ನಾನು ಒಪ್ಪುವುದಿಲ್ಲ ಮತ್ತು ಲಾರೆನ್ಸ್ ಬಿಷ್ಣೋಯಿಗೆ ಇಡೀ ಬಿಷ್ಣೋಯಿ ಸಮುದಾಯದ ಬೆಂಬಲ ಇದೆ. ಲಾರೆನ್ಸ್ ಬಿಷ್ಣೋಯಿ ಅವರದ್ದು ಶ್ರೀಮಂತ ಕುಟುಂಬ. ಅವರಿಗೆ 110 ಎಕರೆ ಜಮೀನಿದೆ, ಆತನಿಗೆ ಹಣಕ್ಕಾಗಿ ಇನ್ನೊಬ್ಬರಿಗೆ ಬೇಡಿಕೆ ಇಡುವ ಅಗತ್ಯ ಇಲ್ಲ. ನಮ್ಮ ಅಣ್ಣನ ಹೆಸರು ಕೆಡಿಸಲು ಬೇರೆಯವರು ಹೀಗೆ ಹಣಕ್ಕಾಗಿ ಬೇಡಿಕೆ ಇಟ್ಟಿರಬಹುದು’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ