‘ಆಖ್ರಿ ಸವಾಲ್’ ವೀಕ್ಷಕರಿಗೆ ಭರ್ಜರಿ ಆಫರ್: ಒಂದು ಟಿಕೆಟ್ ಕೊಂಡರೆ ಮತ್ತೊಂದು ಉಚಿತ

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಅಭಿಜೀತ್ ಮೋಹನ್ ವಾರಂಗ್ ನಿರ್ದೇಶನದ ‘ಆಖ್ರಿ ಸವಾಲ್’ ಚಿತ್ರದಲ್ಲಿ ಸಂಜಯ್ ದತ್, ಅಮಿತ್ ಸಾಧ್, ಸಮೀರಾ ರೆಡ್ಡಿ, ತ್ರಿಧಾ ಚೌಧರಿ, ನೀತು ಚಂದ್ರ ಮತ್ತು ನಮಾಶಿ ಚಕ್ರವರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರೇಕ್ಷಕರಿಗಾಗಿ ಚಿತ್ರದ ನಿರ್ಮಾಪಕರು ‘ಬೈ ಒನ್ ಗೆಟ್ ಒನ್ ಫ್ರೀ’ ಆಫರ್ ನೀಡಿದ್ದಾರೆ.

‘ಆಖ್ರಿ ಸವಾಲ್’ ವೀಕ್ಷಕರಿಗೆ ಭರ್ಜರಿ ಆಫರ್: ಒಂದು ಟಿಕೆಟ್ ಕೊಂಡರೆ ಮತ್ತೊಂದು ಉಚಿತ
Aakhri Sawal Movie Poster

Updated on: May 19, 2026 | 1:05 PM

ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಬಾಲಿವುಡ್‌ನ ಬಹುಚರ್ಚಿತ ‘ಆಖ್ರಿ ಸವಾಲ್’ (Aakhri Sawal) ಚಿತ್ರದ ನಿರ್ಮಾಪಕರು ಪ್ರೇಕ್ಷಕರಿಗೆ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದ್ದಾರೆ. ಸಿನಿಮಾಪ್ರೇಮಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳತ್ತ ಸೆಳೆಯುವ ಉದ್ದೇಶದಿಂದ ಚಿತ್ರದ ನಿರ್ಮಾಪಕ ನಿಖಿಲ್ ನಂದಾ ಅವರು ‘ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಟಿಕೆಟ್ ಉಚಿತ’ (Buy 1 Get 1 Free) ಎಂಬ ವಿಶೇಷ ಪ್ರಚಾರದ ಆಫರ್ ಪರಿಚಯಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸಿನಿಮಾ ಪ್ರೇಕ್ಷಕರು ಟಿಕೆಟ್ ಬುಕ್ ಮಾಡುವಾಗ AAKHRISAWAL ಎಂಬ ಪ್ರೋಮೋ ಕೋಡ್ ಬಳಸುವ ಮೂಲಕ ಈ ಕೊಡುಗೆಯ ಲಾಭವನ್ನು ಪಡಕೊಳ್ಳಬಹುದಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ನಿರ್ಮಾಪಕ ನಿಖಿಲ್ ನಂದಾ, ‘ಒಂದು ಪ್ರಶ್ನೆ. ಒಂದು ಟಿಕೆಟ್. ಡಬಲ್ ಥ್ರಿಲ್. ಚಿತ್ರಮಂದಿರದ ಸೀಟುಗಳು ಭರ್ತಿಯಾಗುವ ಮುನ್ನವೇ ನಿಮ್ಮ ಆಫರ್ ಪಡೆದುಕೊಳ್ಳಿ. ನಿಮ್ಮವರ ಜೊತೆ ಬಂದು ಈ ನಿಗೂಢ ರಹಸ್ಯವನ್ನು ಒಟ್ಟಿಗೆ ವೀಕ್ಷಿಸಿ’ ಎಂದು ಬರೆದುಕೊಂಡಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಐತಿಹಾಸಿಕ ಮತ್ತು ರಾಜಕೀಯ ಹಿನ್ನೆಲೆಯನ್ನು ಒಳಗೊಂಡಿರುವ ಕಾರಣದಿಂದಾಗಿ, ಈ ಚಿತ್ರದ ಟ್ರೇಲರ್ ಬಿಡುಗಡೆಯಾದ ದಿನದಿಂದಲೇ ಭಾರಿ ಕುತೂಹಲ ಮೂಡಿಸಿತ್ತು. ತನಿಖಾ ಶೈಲಿಯ ಕಥಾಹಂದರ ಹೊಂದಿರುವ ಈ ಚಿತ್ರವು ಇತ್ತೀಚೆಗೆ ಹಲವು ಗಣ್ಯರ ವಿಶೇಷ ಪ್ರದರ್ಶನಗಳ ಮೂಲಕ ಗಮನ ಸೆಳೆದಿದೆ.

ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಈ ಚಿತ್ರದ ವಿಶೇಷ ಪ್ರದರ್ಶನವನ್ನು ವೀಕ್ಷಿಸಿದ್ದಾರೆ. ದೆಹಲಿಯಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ ಭಾಗವಹಿಸಿದ್ದ ಪ್ರಮುಖ ರಾಜಕೀಯ ಮುಖಂಡರಾದ ರೇಖಾ ಗುಪ್ತಾ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲದೇ, ಈ ಚಿತ್ರದ ವಿಶೇಷ ಪ್ರದರ್ಶನವೊಂದು ರಾಷ್ಟ್ರಪತಿ ಭವನದಲ್ಲೂ ಆಯೋಜನೆಗೊಂಡಿತ್ತು ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಆರ್​ಎಸ್​ಎಸ್ ಸಿನಿಮಾ: ವಿವಾದದ ನಡುವೆಯೂ ರಾಷ್ಟ್ರಪತಿ ಭವನದಲ್ಲಿ ‘ಆಖ್ರಿ ಸವಾಲ್’ ಪ್ರದರ್ಶನ?

ಚಿತ್ರವು ಒಂದು ಕಡೆ ಪ್ರಶಂಸೆ ಪಡೆಯುತ್ತಿದ್ದರೆ, ಮತ್ತೊಂದು ಕಡೆ ವಿವಾದಗಳನ್ನೂ ಎದುರಿಸಿದೆ. ಯುಎಇ (UAE) ಸೆನ್ಸಾರ್ ಮಂಡಳಿಯು ಈ ಚಿತ್ರದ ಹಲವು ದೃಶ್ಯಗಳಿಗೆ ಕತ್ತರಿ ಹಾಕಲು ಮತ್ತು ಬದಲಾವಣೆ ಮಾಡಲು ಸೂಚಿಸಿತ್ತು. ಆದರೆ ಚಿತ್ರದ ಮೂಲ ಕಥೆಗೆ ಧಕ್ಕೆಯಾಗಬಾರದು ಎಂದು ನಿರ್ಮಾಪಕರು ಆ ಬದಲಾವಣೆಗಳನ್ನು ಮಾಡಲು ನಿರಾಕರಿಸಿದ್ದರಿಂದ ಯುಎಇನಲ್ಲಿ ಈ ಚಿತ್ರದ ಬಿಡುಗಡೆಗೆ ಅನುಮತಿ ಸಿಕ್ಕಿಲ್ಲ. ಇದರ ಜೊತೆಗೆ ಚಿತ್ರದ ಕೆಲವು ಅಂಶಗಳ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೂಡ ದಾಖಲಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us