ಆರ್ಎಸ್ಎಸ್ ಸಿನಿಮಾ: ವಿವಾದದ ನಡುವೆಯೂ ರಾಷ್ಟ್ರಪತಿ ಭವನದಲ್ಲಿ ‘ಆಖ್ರಿ ಸವಾಲ್’ ಪ್ರದರ್ಶನ?
ಸಂಜಯ್ ದತ್ ನಟನೆಯ ‘ಆಖ್ರಿ ಸವಾಲ್’ ಸಿನಿಮಾದಲ್ಲಿ ಆರ್ಎಸ್ಎಸ್ ಕುರಿತ ಕಥೆ ಇದೆ. ಬಿಡುಗಡೆಗೂ ಮುನ್ನ ಸಾಕಷ್ಟು ವಿವಾದ ಶುರುವಾಗಿದೆ. ಈ ನಡುವೆ ರಾಷ್ಟ್ರಪತಿ ಭವನದಲ್ಲಿ ಈ ಸಿನಿಮಾದ ವಿಶೇಷ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪ್ರದರ್ಶನದ ವಿವರಗಳನ್ನು ಗೌಪ್ಯವಾಗಿ ಇಡಲಾಗಿದೆ.

ಬಾಲಿವುಡ್ನ ಹಿರಿಯ ನಟ ಸಂಜಯ್ ದತ್ ಅಭಿನಯದ ‘ಆಖ್ರಿ ಸವಾಲ್’ (Aakhri Sawal) ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅದರ ನಡುವೆ ಈ ಸಿನಿಮಾಗೆ ಸಂಬಂಧಿಸಿದಂತೆ ದೊಡ್ಡ ಬೆಳವಣಿಗೆಯೊಂದು ಮುನ್ನಲೆಗೆ ಬಂದಿದೆ. ಹಲವು ವಿವಾದಗಳ ಸುಳಿಯಲ್ಲಿ ಸಿಲುಕಿರುವ ಈ ಚಿತ್ರಕ್ಕೆ ಇಂದು (ಮೇ 17) ರಾಷ್ಟ್ರಪತಿ ಭವನದಲ್ಲಿ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಕಳೆದ ಕೆಲವು ದಿನಗಳಿಂದ ‘ಆಖ್ರಿ ಸವಾಲ್’ ಸಿನಿಮಾ ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಿಷೇಧ ಹೇರಿದೆ ಎಂಬ ವರದಿಗಳು ಬಂದ ಬೆನ್ನಲ್ಲೇ, ಭಾರತದಲ್ಲೂ ಚಿತ್ರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ ಎನ್ನಲಾಗಿದೆ. ಹೀಗೆ ಚಿತ್ರದ ಸುತ್ತ ಸಾಲು ಸಾಲು ಕಾನೂನು ಸಂಕಷ್ಟ ಮತ್ತು ಸೆನ್ಸಾರ್ಶಿಪ್ ವಿವಾದಗಳು ಎದ್ದಿದ್ದರೂ, ಚಿತ್ರತಂಡ ಮಾತ್ರ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಭರ್ಜರಿ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ.
ಮೂಲಗಳ ಪ್ರಕಾರ, ರಾಷ್ಟ್ರಪತಿ ಭವನದಲ್ಲಿ ಈ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲು ಕಳೆದ ಕೆಲವು ದಿನಗಳಿಂದ ರಹಸ್ಯವಾಗಿ ಸಿದ್ಧತೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಈ ಪ್ರದರ್ಶನದಲ್ಲಿ ಭಾಗವಹಿಸಲಿರುವ ಗಣ್ಯರ ಪಟ್ಟಿ ಮತ್ತು ಅತಿಥಿಗಳ ವಿವರಗಳನ್ನು ಸದ್ಯಕ್ಕೆ ಅತ್ಯಂತ ಗೌಪ್ಯವಾಗಿ ಇಡಲಾಗಿದೆ. ಆದಾಗ್ಯೂ, ರಾಷ್ಟ್ರಪತಿ ಭವನದಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದು ಚಿತ್ರರಂಗ ಹಾಗೂ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
ಒಂದು ಗಂಭೀರ ಸಾಮಾಜಿಕ ಸಮಸ್ಯೆಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಸಂಜಯ್ ದತ್ ಜೊತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಸಿನಿಮಾದ ವಿವಾದಾತ್ಮಕ ಕಥಾವಸ್ತು ಹಾಗೂ ರಾಜಕೀಯ ಪ್ರೇರಿತ ಸಂಭಾಷಣೆಗಳೇ ಚಿತ್ರದ ಮೇಲಿನ ಕುತೂಹಲಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಚಿತ್ರರಂಗದ ವಿಶ್ಲೇಷಕರ ಪ್ರಕಾರ, ರಾಷ್ಟ್ರಪತಿ ಭವನದ ಪ್ರದರ್ಶನವು ಚಿತ್ರದ ಭವಿಷ್ಯಕ್ಕೆ ದೊಡ್ಡ ತಿರುವು ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಆರ್ಎಸ್ಎಸ್ ಕುರಿತ ‘ಆಖ್ರಿ ಸವಾಲ್’ ಸಿನಿಮಾ ಟೀಸರ್; ಈ ಚಿತ್ರದಲ್ಲಿದೆ ವಿವಾದಿತ ಕಥೆ
ಒಂದೆಡೆ ಚಿತ್ರಕ್ಕೆ ವಿದೇಶದಲ್ಲಿ ನಿಷೇಧ ಹಾಗೂ ಸ್ವದೇಶದಲ್ಲಿ ಕಾನೂನು ಸಂಕಷ್ಟ ಎದುರಾಗಿದ್ದರೆ, ಮತ್ತೊಂದೆಡೆ ದೇಶದ ಪ್ರಮುಖ ವೇದಿಕೆಯಲ್ಲಿ ಹೈ-ಪ್ರೊಫೈಲ್ ಪ್ರದರ್ಶನ ಕಾಣುತ್ತಿರುವುದು ಪ್ರೇಕ್ಷಕರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಸದ್ಯಕ್ಕೆ ಚಿತ್ರದ ನಿರ್ಮಾಪಕರು ಯುಎಇ ಬ್ಯಾನ್ ಮತ್ತು ಪಿಐಎಲ್ ವಿವಾದಗಳ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ‘ಆಖ್ರಿ ಸವಾಲ್’ ಕುರಿತ ಚರ್ಚೆಗಳು ಜೋರಾಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





