‘ಧುರಂಧರ್’ ಸಿನಿಮಾದಲ್ಲಿ ಕಥೆಯೇ ಇಲ್ಲ: ಸೂಪರ್ ಹಿಟ್ ಚಿತ್ರವನ್ನು ಟೀಕಿಸಿದ ನಿರ್ದೇಶಕ

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಸಿನಿಮಾ ಬಗ್ಗೆ ಈ ಮೊದಲು ಕೂಡ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ನಿರ್ದೇಶಕ ತಿಗ್ಮಾಂಶು ಧುಲಿಯಾ ಟೀಕಿಸಿದ್ದಾರೆ. ಈ ಸಿನಿಮಾದಲ್ಲಿ ಕಥೆಯೇ ಇಲ್ಲ ಎಂದು ಅವರು ವಾದ ಮಾಡಿದ್ದಾರೆ. ಆದರೆ ಅವರ ಈ ಮಾತಿಗೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ.

‘ಧುರಂಧರ್’ ಸಿನಿಮಾದಲ್ಲಿ ಕಥೆಯೇ ಇಲ್ಲ: ಸೂಪರ್ ಹಿಟ್ ಚಿತ್ರವನ್ನು ಟೀಕಿಸಿದ ನಿರ್ದೇಶಕ
Ranveer Singh

Updated on: Sep 08, 2026 | 9:46 PM

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾಗಳು ಒಟ್ಟು ಸೇರಿ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 3 ಸಾವಿರ ಕೋಟಿಗೂ ಅಧಿಕ ಗಳಿಕೆ ಕಂಡು ಹೊಸ ಇತಿಹಾಸ ನಿರ್ಮಿಸಿವೆ. ಆದರೆ, ಖ್ಯಾತ ನಿರ್ದೇಶಕ ತಿಗ್ಮಾಂಶು ಧುಲಿಯಾ ಅವರು ಈ ಸಿನಿಮಾದ ಯಶಸ್ಸು ಮತ್ತು ಅದರ ಕಥಾವಸ್ತುವಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಧುರಂಧರ್ ಚಿತ್ರದಲ್ಲಿ ಯಾವುದೇ ಕಥೆಯೇ ಇಲ್ಲ’ ಎಂದು ಹೇಳಿದ್ದಾರೆ.

‘ದಿ ವೈರ್’ ಆಯೋಜಿಸಿದ್ದ ‘ಮಾಧ್ಯಮ ಮತ್ತು ಚಲನಚಿತ್ರ ರಂಗದ ಪ್ರಸ್ತುತ ಸ್ಥಿತಿ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ತಿಗ್ಮಾಂಶು ಧುಲಿಯಾ, ಬಾಲಿವುಡ್‌ನಲ್ಲಿ ಕಥೆ ಹೇಳುವ ಶೈಲಿ ನಶಿಸಿಹೋಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ವೇಳೆ ಅವರು ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾಗಳನ್ನು ಉದಾಹರಣೆಯಾಗಿ ತೆಗೆದುಕೊಂಡರು.

‘ಯಾರಾದರೂ ನಿಮ್ಮ ಬಳಿ ಧುರಂಧರ್ ಸಿನಿಮಾದ ಕಥೆ ಏನು ಎಂದು ಕೇಳಿದರೆ, ನಿಮಗೆ ಹೇಳಲು ಏನೂ ಇರುವುದಿಲ್ಲ. ಒಬ್ಬ ನಾಯಕ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಸರ್ವನಾಶ ಸೃಷ್ಟಿಸುತ್ತಾನೆ. ಇದೂ ಒಂದು ಕಥೆಯೇ? ಸಿನಿಮಾಗಳಲ್ಲಿ ಕಥೆಗಳೇ ಇಲ್ಲದಂತಾಗಿದೆ. ಕಥೆ ಹೇಳುವ ನಿರ್ದೇಶಕರು ಇಲ್ಲವಾಗುತ್ತಿದ್ದಾರೆ ಮತ್ತು ನೈಜ ಕಥೆಗಳನ್ನು ಹೇಳಲು ಬಯಸುವವರಿಗೆ ಅವಕಾಶ ಸಿಗುತ್ತಿಲ್ಲ. ಒಂದೇ ಮಾದರಿಯ ಸಿನಿಮಾಗಳನ್ನು ಎಲ್ಲರೂ ಅನುಕರಿಸುತ್ತಿದ್ದಾರೆ’ ಎಂದು ತಿಗ್ಮಾಂಶು ವಾಗ್ದಾಳಿ ನಡೆಸಿದ್ದಾರೆ.

ಚಿತ್ರರಂಗದಲ್ಲಿ ಕಥೆಗಳ ಕೊರತೆಗೆ ಬಂಡವಾಳಶಾಹಿತ್ವವೇ ಕಾರಣ ಎಂದ ಅವರು, ‘ಅತಿಯಾದ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಎಲ್ಲವೂ ಒಂದೇ ರೀತಿ ಕಾಣಲು ಪ್ರಾರಂಭಿಸುತ್ತದೆ. ಇಂದಿನ ಫ್ಯಾಷನ್ ನೋಡಿ, ಎಲ್ಲರ ಹೇರ್‌ಸ್ಟೈಲ್ ಒಂದೇ ರೀತಿ ಇರುತ್ತದೆ. ನಗರಗಳು ಸಹ ತಮ್ಮ ಪ್ರತ್ಯೇಕತೆಯನ್ನು ಕಳೆದುಕೊಂಡು ಒಂದೇ ರೀತಿ ಕಾಣುತ್ತಿವೆ. ನನ್ನ ಹುಟ್ಟೂರು ಅಲಹಾಬಾದ್ ತನ್ನದೇ ಆದ ವಿಶಿಷ್ಟತೆಗೆ ಹೆಸರಾಗಿತ್ತು. ಆದರೆ ಈಗ ಅದು ಉಳಿದ ನಗರಗಳಂತೆ ಮಾಲ್ ಮತ್ತು ಕಾರುಗಳಿಂದ ತುಂಬಿಹೋಗಿದೆ. ಇಂತಹ ವ್ಯವಸ್ಥೆಯು ವ್ಯಕ್ತಿತ್ವ ಹಾಗೂ ಸೃಜನಶೀಲತೆಯನ್ನು ನಾಶಪಡಿಸುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಬಳಿಕ ರಣ್ವೀರ್ ಹೊಸ ಸಿನಿಮಾ ಶೂಟಿಂಗ್ ಆರಂಭ: ಯಾವುದದು?

ತಿಗ್ಮಾಂಶು ಧುಲಿಯಾ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು, ‘ಮತ್ತೊಬ್ಬ ಅಸೂಯೆ ಪಡುವ ನಿರ್ದೇಶಕ ಹೊರಬಂದಿದ್ದಾನೆ’ ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬರು ‘ಇದು ಅಸೂಯೆಯ ಪರಮಾವಧಿ’ ಎಂದು ಟೀಕಿಸಿದ್ದಾರೆ. ಈ ಟೀಕೆಗಳಿಗೆ ತಿಗ್ಮಾಂಶು ಅವರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us