ನಟ ಶಾರುಖ್ ಖಾನ್ಗೆ ರಾಷ್ಟ್ರ ಪ್ರಶಸ್ತಿ; ಹಿರಿಯ ನಟಿ ಊರ್ವಶಿ ಅಸಮಾಧಾನ
71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು ಘೋಷಣೆ ಆದಾಗಿನಿಂದ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ‘ಜವಾನ್’ ಚಿತ್ರದ ನಟನೆಗಾಗಿ ಶಾರುಖ್ ಖಾನ್ ಅವರಿಗೆ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ನೀಡಿದ್ದು ಹಲವರಿಗೆ ಸರಿ ಎನಿಸಿಲ್ಲ. ನಟಿ ಊರ್ವಶಿ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಆಯ್ಕೆಗೆ ಮಾನದಂಡ ಏನು ಎಂದು ಅವರು ಪ್ರಶ್ನೆ ಎತ್ತಿದ್ದಾರೆ.

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು ಇದೇ ಮೊದಲ ಬಾರಿಗೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2023ರಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಘೋಷಣೆ ಆಯಿತು. ‘ಜವಾನ್’ ಸಿನಿಮಾದ ಅಭಿನಯದಕ್ಕಾಗಿ ಶಾರುಖ್ ಖಾನ್ ಅವರು ‘ಬೆಸ್ಟ್ ಆ್ಯಕ್ಟರ್ ನ್ಯಾಷನಲ್ ಅವಾರ್ಡ್’ (Best Actor National Award) ಪಡೆದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಆದರೆ ಶಾರುಖ್ ಖಾನ್ ಅವರಿಗೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ನೀಡಿದ್ದನ್ನು ಕೆಲವರು ಪ್ರಶ್ನಿಸಿದ್ದಾರೆ. ಹಿರಿಯ ನಟಿ ಊರ್ವಶಿ (Urvashi) ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಲಯಾಳಂ ಭಾಷೆಯ ‘ಪೂಕಾಲಂ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ವಿಜಯ ರಾಘವನ್ ಅವರಿಗೆ ‘ಅತ್ಯುತ್ತಮ ಪೋಷಕ ನಟ’ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ಅಲ್ಲದೇ, ಮಲಯಾಳಂನ ‘ಉಳ್ಳೋಳುಕ್ಕು’ ಸಿನಿಮಾದ ನಟನೆಗಾಗಿ ಊರ್ವಶಿ ಅವರು ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜ್ಯೂರಿ ತಂಡದವರು ಶಾರುಖ್ ಖಾನ್ ಅವರನ್ನು ಅತ್ಯುತ್ತಮ ನಟನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಮಾನದಂಡ ಏನು ಎಂದು ಊರ್ವಶಿ ಅವರು ಪ್ರಶ್ನಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಊರ್ವಶಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ವಿಜಯ ರಾಘವನ್ ಎಂಥ ಶ್ರೇಷ್ಠ ನಟ. ಶಾರುಖ್ ಖಾನ್ ಮತ್ತು ವಿಜಯ ರಾಘವನ್ ನಡುವೆ ಜೂರಿಗಳು ಏನನ್ನು ಪರಿಗಣಿಸಿದರು? ಒಬ್ಬರು ಪೋಷಕ ನಟನಾದರೆ, ಇನ್ನೊಬ್ಬರು ಅತ್ಯುತ್ತಮ ನಟ ಆಗಿದ್ದು ಹೇಗೆ? ಇದಕ್ಕೆ ಮಾನದಂಡಗಳೇನು’ ಎಂದು ಊರ್ವಶಿ ಕೇಳಿದ್ದಾರೆ.
‘ನಾವು ಈ ರೀತಿಯ ಪ್ರಶ್ನೆಗಳನ್ನು ಕೇಳಬೇಕು. ನಾವು ಕೂಡ ತೆರಿಗೆ ಕಟ್ಟುತ್ತೇವೆ. ವಿಜಯ ರಾಘವನ್ ಅವರಿಗೆ ಚಿತ್ರರಂಗದಲ್ಲಿ ದಶಕಗಳ ಅನುಭವ ಇದೆ. ಅವರು ಮಾಡಿದ ಸಿನಿಮಾ ಬಿಗ್ ಬಜೆಟ್ನದ್ದಲ್ಲ. ಬೇರೆ ಭಾಷೆಯವರು ಮಾಡುವ ರೀತಿ 250 ದಿನ ಚಿತ್ರೀಕರಣ ಮಾಡುವಂಥದ್ದೂ ಅಲ್ಲ’ ಎಂದಿದ್ದಾರೆ ಊರ್ವಶಿ. ‘ಪೂಕಾಲಂ’ ಸಿನಿಮಾಕ್ಕಾಗಿ ವಿಜಯ ರಾಘವನ್ ಹಾಕಿದ ಶ್ರಮಕ್ಕೆ ಇನ್ನಷ್ಟು ಮನ್ನಣೆ ಸಿಗಬೇಕಿತ್ತು ಎಂಬುದು ಊರ್ವಶಿ ಅವರ ಅಭಿಪ್ರಾಯ.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಇನ್ನಷ್ಟು ರಾಷ್ಟ್ರ ಪ್ರಶಸ್ತಿ ಸಿಗಬೇಕು: ವಿವಾದದ ನಡುವೆ ನಿರ್ದೇಶಕನ ಹೇಳಿಕೆ
71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಟ್ಟಿಯಲ್ಲಿ ನಟಿ ರಾಣಿ ಮುಖರ್ಜಿ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಸಿಕ್ಕಿದೆ. ‘ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿವಾದಿತ ‘ದಿ ಕೇರಳ ಸ್ಟೋರಿ’ ಸಿನಿಮಾದ ನಿರ್ದೇಶನಕ್ಕಾಗಿ ಸುದೀಪ್ತೋ ಸೇನ್ ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಿದ್ದನ್ನು ಕೂಡ ಹಲವರು ಖಂಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




