
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇನ್ನು, ಅವರ ನಟನೆಯ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ರಿಲೀಸ್ ಆಗುತ್ತಿದೆ. ಈ ವೇಳೆ ಅವರು ದೇಶದ ಅತ್ಯಂತ ಜನಪ್ರಿಯ ಟಿವಿ ಶೋ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಶೋಗೆ ಬಂದ ಮೊದಲ ಕನ್ನಡದ ನಟ ಎಂಬ ಹೆಗ್ಗಳಿಕೆಗೆ ಯಶ್ ಪಾತ್ರರಾಗಿದ್ದಾರೆ. ಈ ಶೋನಲ್ಲಿ ಹಿರಿಯ ಪತ್ರಕರ್ತ ರಜತ್ ಶರ್ಮಾ ಅವರ ಖಡಕ್ ಪ್ರಶ್ನೆಗಳಿಗೆ ಉತ್ತರಿಸಿದ ಯಶ್ (Yash) , ಶ್ರೀರಾಮನ ಪಾತ್ರ ಮಾಡುವ ಬದಲು ರಾವಣನ ಪಾತ್ರವನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎಂಬ ಕುತೂಹಲಕ್ಕೆ ಸ್ಪಷ್ಟನೆ ನೀಡಿದ್ದಾರೆ.
‘ನೀವು ನಿರ್ಮಾಪಕರಾಗಿದ್ದೀರಿ. ರಾಮನ ಪಾತ್ರವನ್ನೆ ನೀವು ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲ’ ಎಂದು ರಜತ್ ಶರ್ಮ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸದ ಅವರು, ‘ಶ್ರೀರಾಮನ ಒಳ್ಳೆಯತನ ಮತ್ತು ಮಹತ್ವವನ್ನು ಎತ್ತಿ ತೋರಿಸಬೇಕಾದರೆ ರಾವಣನ ಶಕ್ತಿ ಹಾಗೂ ಕೆಟ್ಟತನವೂ ಅಷ್ಟೇ ಪ್ರಬಲವಾಗಿರಬೇಕು’ ಎಂದು ಯಶ್ ವಿವರಿಸಿದ್ದಾರೆ.
‘ರಾಮಾಯಣದ ಕಥೆಯಲ್ಲಿ ರಾವಣನಿಗೆ ಸಾವು ಇಲ್ಲವೇ ಇಲ್ಲ, ಆತನ ಬಳಿ ಬ್ರಹ್ಮಾಂಡದ ವರಗಳ ಬಲವಿದೆ ಮತ್ತು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಎನ್ನುವಂತಹ ಸನ್ನಿವೇಶ ಸೃಷ್ಟಿಯಾದಾಗ ಮಾತ್ರ, ಪ್ರಭು ಶ್ರೀರಾಮ ಆತನನ್ನು ಸಂಹರಿಸುವ ಕ್ಷಣಕ್ಕೆ ನಿಜವಾದ ಮಹತ್ವ ಮತ್ತು ರೋಮಾಂಚನ ಸಿಗುತ್ತದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ನಾನು ಆ ಹಾಡಲ್ಲಿ ಕಿಸ್ ಕೂಡ ಮಾಡಿಲ್ಲ, ಅದು ಅಶ್ಲೀಲವಲ್ಲ’; ‘ತಬಾಹಿ’ ಟೀಕೆಗೆ ಯಶ್ ಉತ್ತರ
ಈ ಸಿನಿಮಾದ ಸಹ-ನಿರ್ಮಾಪಕರೂ ಆಗಿರುವ ಯಶ್, ‘ಚಿತ್ರದಲ್ಲಿ ರಾವಣನ ಪಾತ್ರವನ್ನು ನನಗಿಂತ ಉತ್ತಮವಾಗಿ ಯಾರೂ ಅಭಿನಯಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ನನಗಿದೆ. ನಾವು ನಮ್ಮ ಅಹಂ ಪಕ್ಕಕ್ಕಿಟ್ಟು ಇಡೀ ಸಿನಿಮಾದ ಒಳ್ಳೆಯತನಕ್ಕಾಗಿ ಹಾಗೂ ಶ್ರೀರಾಮನ ಪಾತ್ರದ ಪ್ರಭಾವ ಹೆಚ್ಚಿಸಲು ಈ ನಿರ್ಧಾರ ತಳೆದಿದ್ದೇವೆ’ ಎಂದು ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.