ಸುಪ್ರೀತ್ ರೆಡ್ಡಿ ವಿರುದ್ಧ ದೂರು, ಪೊಲೀಸರ ಅತಿಥಿಯಾಗಲಿರುವ ‘ಕಾಟ್ರಾಜು’

Telugu actor: ನಟ ಸುಪ್ರೀತ್ ರೆಡ್ಡಿ (‘ಛತ್ರಪತಿ’ ಸಿನಿಮಾದ ನಟ) ವಿವಾದಕ್ಕೆ ಸಿಲುಕಿದ್ದಾರೆ. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಹಲ್ಲೆ ಸೇರಿದಂತೆ ಇನ್ನೂ ಹಲವು ಆರೋಪಗಳಡಿ ದೂರು ದಾಖಲಾಗಿದೆ. ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ಮಿಂಚುವ ಸುಪ್ರೀತ್ ರೆಡ್ಡಿ ನಿಜ ಜೀವನದಲ್ಲಿಯೂ ವಿಲನ್ ರೀತಿಯ ಕೃತ್ಯ ಮಾಡಿ, ಇದೀಗ ಪೊಲೀಸರಿಂದ ವಿಚಾರಣೆ ಎದುರಿಸಲಿದ್ದಾರೆ. ರಸ್ತೆಯಲ್ಲಿ ಕಾರನ್ನು ಅಡ್ಡಲಾಗಿ ನಿಲ್ಲಿಸಿದ್ದಾರೆಂಬ ಸಣ್ಣ ಕಾರಣಕ್ಕಾಗಿ ಅವರು ಕ್ಯಾಬ್ ಡ್ರೈವರ್ ಒಬ್ಬರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸುಪ್ರೀತ್ ರೆಡ್ಡಿ ವಿರುದ್ಧ ದೂರು, ಪೊಲೀಸರ ಅತಿಥಿಯಾಗಲಿರುವ ‘ಕಾಟ್ರಾಜು’
Supreth Reddy

Updated on: Jun 09, 2026 | 12:17 PM

ತೆಲುಗು ಚಿತ್ರರಂಗದ (Tollywood) ಜನಪ್ರಿಯ ನಟ ಸುಪ್ರೀತ್ ರೆಡ್ಡಿ (‘ಛತ್ರಪತಿ’ ಸಿನಿಮಾದ ನಟ) ವಿವಾದಕ್ಕೆ ಸಿಲುಕಿದ್ದಾರೆ. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಹಲ್ಲೆ ಸೇರಿದಂತೆ ಇನ್ನೂ ಹಲವು ಆರೋಪಗಳಡಿ ದೂರು ದಾಖಲಾಗಿದೆ. ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ಮಿಂಚುವ ಸುಪ್ರೀತ್ ರೆಡ್ಡಿ ನಿಜ ಜೀವನದಲ್ಲಿಯೂ ವಿಲನ್ ರೀತಿಯ ಕೃತ್ಯ ಮಾಡಿ, ಇದೀಗ ಪೊಲೀಸರಿಂದ ವಿಚಾರಣೆ ಎದುರಿಸಲಿದ್ದಾರೆ. ರಸ್ತೆಯಲ್ಲಿ ಕಾರನ್ನು ಅಡ್ಡಲಾಗಿ ನಿಲ್ಲಿಸಿದ್ದಾರೆಂಬ ಸಣ್ಣ ಕಾರಣಕ್ಕಾಗಿ ಅವರು ಕ್ಯಾಬ್ ಡ್ರೈವರ್ ಒಬ್ಬರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೇಡ್ಚಲ್ ಜಿಲ್ಲೆಯ ಕೀಸರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ನಾಗಾರಂನಲ್ಲಿ ಈ ಗಲಾಟೆ ನಡೆದಿದೆ. ಊಬರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶ್ರೀಹರಿ ಎಂಬ ವ್ಯಕ್ತಿ, ನಾಗಾರಂ ಚೌರಸ್ತಾ ಪ್ರದೇಶದಲ್ಲಿ ಒಂದು ಟ್ರಿಪ್ ಪೂರ್ಣಗೊಳಿಸಿ, ಮುಂದಿನ ಬುಕಿಂಗ್‌ಗಾಗಿ ತಮ್ಮ ಕ್ಯಾಬ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕಾಯುತ್ತಿದ್ದರು. ಅದೇ ಸಮಯದಲ್ಲಿ ನಟ ಸುಪ್ರೀತ್ ರೆಡ್ಡಿ ತಮ್ಮ ಫಾರ್ಚೂನರ್ ಕಾರಿನಲ್ಲಿ ಅದೇ ಮಾರ್ಗದಲ್ಲಿ ಬಂದಿದ್ದಾರೆ. ಆದರೆ, ಕ್ಯಾಬ್ ರಸ್ತೆಗೆ ಸ್ವಲ್ಪ ಅಡ್ಡಲಾಗಿದೆ ಎಂಬ ಕಾರಣಕ್ಕೆ ಸುಪ್ರೀತ್ ರೆಡ್ಡಿ ತೀವ್ರ ಆಕ್ರೋಶಗೊಂಡಿದ್ದಾರೆ. ತಕ್ಷಣವೇ ತಮ್ಮ ಕಾರಿನಿಂದ ಕೆಳಗಿಳಿದು, ಡ್ರೈವರ್ ಶ್ರೀಹರಿ ಬಳಿ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದ್ದಾರೆ. ಡ್ರೈವರ್ ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸಿದರೂ ಕೇಳದ ನಟ, ರಸ್ತೆಯಲ್ಲಿ ಎಲ್ಲರೂ ನೋಡುತ್ತಿದ್ದಂತೆಯೇ ಶ್ರೀಹರಿ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಥಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಶೂಟಿಂಗ್ ಮಾಡುವಾಗಲೇ ನಟಿಯರು ಈ ಬಗ್ಗೆ ಮಾತನಾಡಬೇಕು; ಕಂಗನಾ ನೇರ ಮಾತು

ನಟನ ಕೈಯಿಂದ ಪೆಟ್ಟು ತಿಂದ ಕ್ಯಾಬ್ ಡ್ರೈವರ್ ಶ್ರೀಹರಿ ಘಟನಾ ಸ್ಥಳದಿಂದಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೀಸರ ಪೊಲೀಸರು ತಕ್ಷಣವೇ ಸ್ಪಂದಿಸಿ ಘಟನಾ ಸ್ಥಳಕ್ಕೆ ಆಗಮಿಸಿ ವಿವರಗಳನ್ನು ಸಂಗ್ರಹಿಸಿದ್ದಾರೆ. ತದನಂತರ ಸಂತ್ರಸ್ತನ ಲಿಖಿತ ದೂರಿನ ಮೇರೆಗೆ ಪೊಲೀಸರು ನಟ ಸುಪ್ರೀತ್ ರೆಡ್ಡಿ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗಲಾಟೆ ನಡೆದ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಲಭ್ಯವಿರುವ ಆಧಾರಗಳ ಪ್ರಕಾರ ಸುಪ್ರೀತ್ ಅವರಿಗೆ ನೋಟಿಸ್ ಜಾರಿ ಮಾಡಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

2002 ರ ಸೂಪರ್ ಹಿಟ್ ಸಿನಿಮಾ ‘ಜಯಂ’ ಮೂಲಕ ನಟನೆ ಆರಂಭಿಸಿದ ಸುಪ್ರೀತ್ ರೆಡ್ಡಿ, ರಾಜಮೌಳಿ ನಿರ್ದೇಶಿಸಿ, ಪ್ರಭಾಸ್ ನಟಿಸಿದ್ದ ‘ಛತ್ರಪತಿ’ ಸಿನಿಮಾದ ‘ಕಾಟ್ರಾಜು’ ಪಾತ್ರದಿಂದ ದೊಡ್ಡ ಹೆಸರು ಗಳಿಸಿದ್ದರು. ಅದಕ್ಕೆ ಮುಂಚೆ ರಾಜಮೌಳಿ ನಿರ್ದೇಶನದ ‘ಸೈ’, ‘ಮರ್ಯಾದ ರಾಮಣ್ಣ’ ಸಿನಿಮಾಗಳಲ್ಲಿಯೂ ವಿಲನ್​​ ಆಗಿ ಸಖತ್ ಗಮನ ಸೆಳೆದಿದ್ದರು. ಪ್ರಭಾಸ್ ನಟನೆಯ ‘ಮಿರ್ಚಿ’, ಮಹೇಶ್ ಬಾಬು ನಟನೆಯ ‘ದೂಕುಡು’ ನಂತಹ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಮಾತ್ರವಲ್ಲದೆ, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿಯೂ ಸುಪ್ರೀತ್ ರೆಡ್ಡಿ ನಟಿಸಿದ್ದಾರೆ. ತೆರೆಯ ಮೇಲೆ ತಮ್ಮ ಖಳನಾಯಕತ್ವದಿಂದ ಗಮನ ಸೆಳೆದಿದ್ದ ಈ ನಟ, ನಿಜ ಜೀವನದಲ್ಲಿ ಸಹ ವಿಲನ್ ರೀತಿಯ ಕೃತ್ಯದಿಂದ ಸುದ್ದಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us