ಕೊರೊನಾ ವೈರಸ್ ಎರಡನೇ ಅಲೆ ಎಲ್ಲೆಲ್ಲೂ ಜೋರಾಗಿ ಹಬ್ಬುತ್ತಿದೆ. ಜನರಿಗೆ ಮತ್ತೆ ಚಿಂತೆ ಆರಂಭವಾಗಿದೆ. ಲಸಿಕೆ ಬಂದ ನಂತರವೂ ಪರಿಸ್ಥಿತಿ ಕೈ ಮೀರುತ್ತಿರುವುದು ವಿಪರ್ಯಾಸವೇ ಸರಿ. ನಾಳೆ ಏನಾಗುತ್ತದೋ ಎಂಬ ಚಿಂತೆಯಲ್ಲೇ ದಿನ ದೂಡುವಂತಾಗಿದೆ. ದೇಶದೆಲ್ಲೆಡೆ ಮತ್ತೆ ಲಾಕ್ಡೌನ್ ಆಗುತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಲಾಕ್ಡೌನ್ ಆಗಬಹುದು ಎಂಬುದಕ್ಕೆ ಸೂಚನೆ ಸಿಗುವ ರೀತಿಯಲ್ಲಿ ಒಂದು ಘಟನೆ ನಡೆದಿದೆ. ಕಳೆದ ವರ್ಷ ಲಾಕ್ಡೌನ್ ಆರಂಭ ಆದಾಗ ಹಿಂದಿಯ ರಾಮಾಯಣ ಧಾರಾವಾಹಿಯನ್ನು ಮರುಪ್ರಸಾರ ಮಾಡಲಾಗಿತ್ತು. ಈಗ ಅದೇ ಸ್ಥಿತಿ ಮರುಕಳಿಸುವ ಸಾಧ್ಯತೆ ಇದೆ!
ಲಾಕ್ಡೌನ್ ಆಗುತ್ತೋ ಇಲ್ಲವೋ ಎಂಬ ಗೊಂದಲ ಕಾಡುತ್ತಿರುವಾಗಲೇ ಈ ವರ್ಷ ಕೂಡ ‘ರಾಮಾಯಣ’ ಧಾರಾವಾಹಿ ಮರು ಪ್ರಸಾರಕ್ಕೆ ಸಜ್ಜಾಗಿದೆ. ಕಳೆದ ವರ್ಷ ಜನರನ್ನು ಮನೆಯೊಳಗೆ ಕೂರಿಸಲು ಮಾರ್ಚ್ ತಿಂಗಳಿಂದ ದೂರದರ್ಶನ ವಾಹಿನಿಯಲ್ಲಿ ರಾಮಾಯಣ ಸೀರಿಯಲ್ ಆರಂಭಿಸಲಾಗಿತ್ತು. ಈ ವರ್ಷ ಸ್ಟಾರ್ ಭಾರತ್ ವಾಹಿನಿಯಲ್ಲಿ ಮತ್ತೆ ರಾಮಾಯಣ ಪ್ರಸಾರ ಆಗಲಿದೆ. ಈ ಸುದ್ದಿ ಕೇಳಿದವರೆಲ್ಲ ‘ಹಾಗಾದ್ರೆ ಮತ್ತೆ ಲಾಕ್ಡೌನ್ ಆಗೋದು ಖಚಿತ’ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
1987ರಲ್ಲಿ ಮೂಡಿಬಂದ ರಾಯಾಯಣ ಧಾರಾವಾಹಿಗೆ ರಮಾನಂದ್ ಸಾಗರ್ ನಿರ್ದೇಶನ ಮಾಡಿದ್ದರು. ಅದರಲ್ಲಿ ಸೀತೆ ಪಾತ್ರಕ್ಕೆ ದೀಪಿಕಾ ಚಿಕ್ಲಿಯಾ ಬಣ್ಣ ಹಚ್ಚಿದ್ದರು. ಈಗ ಸ್ಟಾರ್ ಭಾರತ್ ವಾಹಿನಿಯಲ್ಲಿ ರಾಮಾಯಣ ಮರುಪ್ರಸಾರ ಆಗಲಿದೆ ಎಂಬ ಸುದ್ದಿಯನ್ನು ದೀಪಿಕಾ ಚಿಕ್ಲಿಯಾ ಹಂಚಿಕೊಂಡಿದ್ದಾರೆ. ‘ಈ ವರ್ಷ ಕೂಡ ರಾಮಾಯಣ ಧಾರಾವಾಹಿ ಕಿರುತೆರೆಯಲ್ಲಿ ಮತ್ತೆ ಬರಲಿದೆ ಎಂದು ವಿಷಯವನ್ನು ಹಂಚಿಕೊಳ್ಳಲು ಎಗ್ಸೈಟ್ ಆಗಿದ್ದೇನೆ’ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
‘ಕಳೆದ ವರ್ಷ ಲಾಕ್ಡೌನ್ನಲ್ಲಿ ರಾಮಾಯಣ ಪ್ರಸಾರವಾಗಿತ್ತು. ಈ ವರ್ಷ ಕೂಡ ಇತಿಹಾಸ ಮರುಕಳಿಸಲಿದೆ ಎನಿಸುತ್ತದೆ’ ಎಂದು ದೀಪಿಕಾ ಊಹೆ ಮಾಡಿದ್ದಾರೆ. ಈ ಧಾರಾವಾಹಿ ನನಗೆ ಮಾತ್ರವಲ್ಲದೆ ಸಾವಿರಾರು ಕುಟುಂಬಗಳ ಜೀವನದ ಭಾಗವೇ ಆಗಿದೆ. ರಾಮಾಯಣ ವೀಕ್ಷಿಸಲು ಪ್ರತಿ ರಾತ್ರಿ 7 ಗಂಟೆಗೆ ಸ್ಟಾರ್ ಭಾರತ್ ವಾಹಿನಿಯನ್ನು ನೋಡಿ ಎಂದು ದೀಪಿಕಾ ಬರೆದುಕೊಂಡಿದ್ದಾರೆ.
ರಾಮನಾಗಿ ಅರುಣ್ ಗೋವಿಲ್, ಲಕ್ಷ್ಮಣನಾಗಿ ಸುನಿಲ್ ಲಹರಿ, ರಾವಣನಾಗಿ ಅರವಿಂದ್ ತ್ರಿವೇದಿ, ಹನುಮಂತನ ಪಾತ್ರದಲ್ಲಿ ಧಾರಾ ಸಿಂಗ್ ನಟಿಸಿದ್ದ ಈ ಸೀರಿಯಲ್ ಎಷ್ಟೇ ವರ್ಷ ಕಳೆದರೂ ತನ್ನ ಚಾರ್ಮ್ ಕಳೆದುಕೊಂಡಿಲ್ಲ. ಹಾಗಾಗಿ ಜನರು ಮತ್ತೆ ಮತ್ತೆ ಇದನ್ನು ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಧಾರಾವಾಹಿ ಕಥೆ ಹಾಗಿರಲಿ, ಒಂದು ವೇಳೆ ಮತ್ತೆ ಲಾಕ್ಡೌನ್ ಆದರೆ ಏನು ಮಾಡೋದು ಎಂದು ಜನಸಾಮಾನ್ಯರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ ಬಗ್ಗೆ ಸರ್ಕಾರ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಬಾರದು: ಕಾಂಗ್ರೆಸ್ ಟ್ವೀಟ್
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್ಡೌನ್ ಬೇಡ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್