RRR ಪ್ರೀ-ರಿಲೀಸ್​ ಇವೆಂಟ್​ಗೆ ಕ್ಷಣಗಣನೆ: ಸಿಎಂ, ಶಿವಣ್ಣ ಬರುವ ಈ ಸಮಾರಂಭಕ್ಕೆ ಹೇಗಿದೆ ಭದ್ರತೆ?

| Updated By: ಮದನ್​ ಕುಮಾರ್​

Updated on: Mar 19, 2022 | 9:04 AM

RRR Movie Pre-release Event: ಚಿಕ್ಕಬಳ್ಳಾಪುರದ ಅಗಲಗುರ್ಕಿ ಗ್ರಾಮದಲ್ಲಿ RRR ಪ್ರೀ-ರಿಲೀಸ್​ ಇವೆಂಟ್ ನಡೆಯಲಿದೆ. ಪಾಸ್ ಇರುವವರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುವುದು.

RRR ಪ್ರೀ-ರಿಲೀಸ್​ ಇವೆಂಟ್​ಗೆ ಕ್ಷಣಗಣನೆ: ಸಿಎಂ, ಶಿವಣ್ಣ ಬರುವ ಈ ಸಮಾರಂಭಕ್ಕೆ ಹೇಗಿದೆ ಭದ್ರತೆ?
ಆರ್​ಆರ್​ಆರ್​ ಸಿನಿಮಾ ಪೋಸ್ಟರ್​, ಎಸ್ಪಿ ಜಿ.ಕೆ. ಮಿಥುನ್ ಕುಮಾರ್
Follow us on

ರಾಜಮೌಳಿ (Rajamouli) ನಿರ್ದೇಶನದ ಬಹುನಿರೀಕ್ಷಿತ ‘ಆರ್​ಆರ್​ಆರ್​’ ಚಿತ್ರ (RRR Movie) ಮಾ.25ರಂದು ಅದ್ದೂರಿಯಾಗಿ ತೆರೆಕಾಣಲಿದೆ. ಅದಕ್ಕೂ ಮುನ್ನ ಭರ್ಜರಿಯಾಗಿ ಪ್ರಚಾರ ಮಾಡುವಲ್ಲಿ ಚಿತ್ರತಂಡ ನಿರತವಾಗಿದೆ. ಅದರ ಸಲುವಾಗಿ ಇಂದು (ಮಾ.19) ಕರ್ನಾಟಕದಲ್ಲಿ ‘ಆರ್​ಆರ್​ಆರ್​’ ಪ್ರೀ-ರಿಲೀಸ್​ ಇವೆಂಟ್​ (RRR Movie Pre-release Event) ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಬೃಹತ್​ ವೇದಿಕೆ ಸಿದ್ಧವಾಗಿದೆ. ದೇಶದ ಅತಿ ದೊಡ್ಡ ಪ್ರೀ-ರಿಲೀಸ್​ ಇವೆಂಟ್​ ಎಂದು ಇದನ್ನು ಕರೆಯಲಾಗುತ್ತಿದೆ. ಕಾರ್ಯಕ್ರಮ ಶುರುವಾಗಲು ಈಗ ಕ್ಷಣಗಣನೆ ಆರಂಭ ಆಗಿದೆ. ನೆರೆ ರಾಜ್ಯಗಳಿಂದಲೂ ಅಭಿಮಾನಿಗಳು ಆಗಮಿಸುತ್ತಿದ್ದಾರೆ. 100 ಎಕರೆ ಜಾಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೃಹತ್​ ಎಲ್​ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್​ಕುಮಾರ್​, ಆರೋಗ್ಯ ಸಚಿವ ಡಾ. ಕೆ. ಸುಧಾಕರ್​ ಮುಂತಾದವರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ. ನಿರ್ದೇಶಕ ರಾಜಮೌಳಿ, ನಟರಾದ ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಸೇರಿದಂತೆ ಅನೇಕರು ವೇದಿಕೆ ಏರಲಿದ್ದಾರೆ. ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಗಣ್ಯಾತಿಗಣ್ಯರು ಭಾಗಿ ಆಗುವ ‘ಆರ್​ಆರ್​ಆರ್​’ ಪ್ರೀ-ರಿಲೀಸ್​ ಇವೆಂಟ್​ಗೆ ಬಿಗಿ ಭದ್ರತೆ ಒದಗಿಸಲಾಗುತ್ತಿದೆ.

‘ಆರ್​ಆರ್​ಆರ್​’ ಚಿತ್ರಕ್ಕೆ ಹಗಲಿರುಳು ಪ್ರಚಾರ:

ಕರ್ನಾಟಕದಲ್ಲಿ ಕೆವಿಎನ್​ ಪ್ರೊಡಕ್ಷನ್​ ಸಂಸ್ಥೆಯು ‘ಆರ್​ಆರ್​ಆರ್​’ ಸಿನಿಮಾದ ವಿತರಣೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳ ಬಾಕಿ ಇರುವುದರಿಂದ ಚಿತ್ರತಂಡ ಹಗಲಿರುಳು ಪ್ರಚಾರ ಮಾಡುತ್ತಿದೆ. ಇಂದು ಬೆಂಗಳೂರಿಗೆ ಆಗಮಿಸಲಿರುವ ಚಿತ್ರತಂಡದವರು ಮಧ್ಯಾಹ್ನ ಮಾಧ್ಯಮಗಳಿಗೆ ಸಂದರ್ಶನ ನೀಡಲಿದ್ದಾರೆ. ಸಂಜೆ ನಡೆಯಲಿರುವ ಪ್ರೀ ರಿಲೀಸ್​ ಇವೆಂಟ್​ನಲ್ಲಿ 2 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ಸಾಧ್ಯತೆ ಇದೆ. ಆ ಕಾರಣದಿಂದ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ.

ಹೇಗಿದೆ ಪೊಲೀಸ್​ ಬಂದೋಬಸ್ತ್?

ಈ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಚಿಕ್ಕಬಳ್ಳಾಪುರ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೂವರು ಎಸ್ಪಿಗಳು ಹಾಗೂ ಓರ್ವ ಎಸ್.ಪಿ. ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ. 6 ಡಿವೈಎಸ್​ಪಿಗಳು, 17 ಪೊಲೀಸ್ ಇನ್ಸ್​ಪೆಕ್ಟರ್​ಗಳು ಸೇರಿದಂತೆ ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪಾಸ್ ಇರುವವರಿಗೆ ಮಾತ್ರ ಎಂಟ್ರಿ:

ರಾಷ್ಟ್ರೀಯ ಹೆದ್ದಾರಿ 44ಕ್ಕೆ ಹೊಂದಿಕೊಂಡಿರುವ ಅಗಲಗುರ್ಕಿ ಗ್ರಾಮದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪಾಸ್ ಇರುವವರಿಗೆ ಮಾತ್ರ ಕಾರ್ಯಕ್ರಮಕ್ಕೆ ಎಂಟ್ರಿ ನೀಡಲಾಗುವುದು. 66 ಸಾವಿರ ಖುರ್ಚಿಗಳನ್ನು ಹಾಕಲಾಗಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ವಿವಿಧ ರೀತಿಯ ಬ್ಯಾರಿಕೇಡ್​ಗಳ ಅಳವಡಿಕೆ ಮಾಡಲಾಗಿದೆ. ವೇದಿಕೆಯಲ್ಲಿ ಬೃಹತ್​ ಎಲ್​ಇಡಿ ಪರದೆ ಹಾಕಲಾಗಿದೆ. 10 ಎಕರೆ ಪ್ರದೇಶದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಪುನೀತ್​ ರಾಜ್​ಕುಮಾರ್​ಗೆ ಚಿತ್ರತಂಡದ ನಮನ:

ಈ ಬೃಹತ್​ ವೇದಿಕೆಯಲ್ಲಿ ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಗೌರವ ಸಲ್ಲಿಕೆ ಆಗಲಿದೆ. ಅದಕ್ಕಾಗಿ ಕಾರ್ಯಕ್ರಮದ ಆಯೋಜಕರು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಆ ಕಾರಣದಿಂದ ಅಪ್ಪು ಅಭಿಮಾನಿಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಅನುಶ್ರೀ, ಅಕುಲ್​ ಬಾಲಾಜಿ, ಸುಮಾ ಅವರು ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

‘ಬಾಹುಬಲಿ’ ಚಿತ್ರದ ಯಶಸ್ಸಿನ ಬಳಿಕ ರಾಜಮೌಳಿ ನಿರ್ದೇಶನ ಮಾಡಿರುವ ಸಿನಿಮಾ ಆದ್ದರಿಂದ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ. ಕನ್ನಡಕ್ಕೂ ಡಬ್​ ಆಗಿ ‘ಆರ್​ಆರ್​ಆರ್​’ ಚಿತ್ರ ಬಿಡುಗಡೆ ಆಗುತ್ತಿದೆ. ಆ ಕಾರಣಕ್ಕೆ ಕರುನಾಡಿನಲ್ಲಿ ಅದ್ದೂರಿಯಾಗಿ ಪ್ರೀ-ರಿಲೀಸ್​ ಇವೆಂಟ್​ ನಡೆಯುತ್ತಿದೆ.

ಇದನ್ನೂ ಓದಿ:

‘ಆರ್​ಆರ್​ಆರ್​’ ನಿರ್ಮಾಪಕನ ಖಾತೆಯಿಂದ ಪ್ರಭಾಸ್​ಗೆ ವರ್ಗಾವಣೆ ಆಯ್ತು 50 ಕೋಟಿ ರೂಪಾಯಿ?  

RRR: ‘ಎತ್ತುವ ಜಂಡಾ’ ಹಾಡಿನ ಮೂಲಕ ಮತ್ತೆ ಅಬ್ಬರಿಸಲು ಸಜ್ಜಾದ ‘ಆರ್​ಆರ್​ಆರ್’​ ಸಿನಿಮಾ