ಅಚ್ಚರಿಯ ಬೆಳವಣಿಗೆ; ‘ಹನುಮಾನ್ ಅಂಶ್’ ತೆಲುಗು ಆವೃತ್ತಿಯಿಂದ ಹಿಂದೆ ಸರಿದ ತ್ರಿವಿಕ್ರಮ್ ಶ್ರೀನಿವಾಸ್

'ಹನುಮಾನ್ ಅಂಶ' ಸಿನಿಮಾದ ತೆಲುಗು ಆವೃತ್ತಿಯನ್ನು ಪ್ರಸ್ತುತಪಡಿಸುವುದರಿಂದ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಹಿಂದೆ ಸರಿದಿದ್ದಾರೆ. ಕೊನೆಯ ಕ್ಷಣದಲ್ಲಿ ನಿರ್ಮಾಪಕರು ಹೊಸ ಷರತ್ತುಗಳನ್ನು ಹಾಕಿದ್ದರಿಂದ ಅಸಮಾಧಾನಗೊಂಡ ತ್ರಿವಿಕ್ರಮ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಚಿತ್ರದ ತೆಲುಗು ರಿಲೀಸ್ ಅನುಮಾನದಲ್ಲಿದೆ. ಆ ಬಳಿಕ ಸಿನಿಮಾ ನೇರವಾಗಿ ಒಟಿಟಿಗೆ ಬರಲಿದೆ.

ಅಚ್ಚರಿಯ ಬೆಳವಣಿಗೆ; ಹನುಮಾನ್ ಅಂಶ್ ತೆಲುಗು ಆವೃತ್ತಿಯಿಂದ ಹಿಂದೆ ಸರಿದ ತ್ರಿವಿಕ್ರಮ್ ಶ್ರೀನಿವಾಸ್
ಹನುಮಾನ್ ಅಂಶ್-ತ್ರಿವಿಕ್ರಮ್
Edited By:

Updated on: Sep 18, 2026 | 7:57 AM

ಮುಖ್ಯಾಂಶಗಳು

  • ತೆಲುಗು ಆವೃತ್ತಿಯ ಪ್ರಸ್ತುತಿಯಿಂದ ಹಿಂದೆ ಸರಿದ ತ್ರಿವಿಕ್ರಮ್
  • ಕೊನೆಯ ಕ್ಷಣದಲ್ಲಿ ರದ್ದಾದ ಟೀಸರ್ ರಿಲೀಸ್ ಕಾರ್ಯಕ್ರಮ
  • ಹೊಸ ಷರತ್ತುಗಳಿಂದಾಗಿ ನಿರ್ಮಾಪಕರ ಜೊತೆ ಮೂಡಿದ ಮುನಿಸು

ಬ್ಲಾಕ್‌ಬಸ್ಟರ್ ‘ಹನುಮಾನ್ ಅಂಶ್’ ಸಿನಿಮಾದ ತೆಲುಗು ಆವೃತ್ತಿಯನ್ನು ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಪ್ರಸ್ತುತಪಡಿಸಲಿದ್ದಾರೆ ಎಂದು ಘೋಷಿಸಲಾಗಿತ್ತು. ಮೈತ್ರಿ ಫಿಲ್ಮ್ ಡಿಸ್ಟ್ರಿಬ್ಯೂಷನ್ ಮೂಲಕ ಈ ಚಿತ್ರವನ್ನು ತೆಲುಗಿನಲ್ಲಿ ರಿಲೀಸ್ ಮಾಡಲು ಯೋಜನೆ ರೂಪಿಸಲಾಗಿತ್ತು. ಸಿನಿಮಾಗೆ ತಮ್ಮ ಹೆಸರು ನೀಡುವುದಕ್ಕೆ ಪ್ರತಿಯಾಗಿ ಗಳಿಕೆಯಲ್ಲಿ ನಿರ್ದಿಷ್ಟ ಪಾಲು ಪಡೆಯುವ ಒಪ್ಪಂದವಾಗಿತ್ತು. ಆದರೆ ಈಗ ತ್ರಿವಿಕ್ರಮ್ ಈ ಪ್ರಾಜೆಕ್ಟ್‌ನಿಂದ ಹೊರಬಂದಿದ್ದಾರೆ ಎಂದು ವರದಿ ಆಗಿದೆ.

ಈ ಚಿತ್ರದ ತೆಲುಗು ಆವೃತ್ತಿಯು ಸೆಪ್ಟೆಂಬರ್ 18 ರಂದು ಬಿಡುಗಡೆಯಾಗಬೇಕಿತ್ತು. ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕಾಗಿ ಪ್ರತ್ಯೇಕ ಸ್ಥಳವನ್ನು ಕೂಡ ನಿಗದಿಪಡಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಇಡೀ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಇದರಿಂದ ಅಭಿಮಾನಿಗಳಿಗೆ ಹಾಗೂ ಚಿತ್ರರಂಗದ ಜನರಿಗೆ ತೀವ್ರ ನಿರಾಶೆಯಾಗಿದೆ. ಸಿನಿಮಾ ಮುಂದೂಡಿಕೆಗೆ ಸಂಬಂಧಿಸಿದಂತೆ ತರಹೇವಾರಿ ಚರ್ಚೆಗಳು ಟಾಲಿವುಡ್ ಅಂಗಳದಲ್ಲಿ ನಡೆಯುತ್ತಿವೆ.

ಡಬ್ಬಿಂಗ್ ವಿಳಂಬದಿಂದಾಗಿ ಬಿಡುಗಡೆ ಮುಂದೂಡಲಾಗಿದೆ ಎಂದು ಅಧಿಕೃತವಾಗಿ ಹೇಳಲಾಗಿದೆ. ಆದರೆ ತ್ರಿವಿಕ್ರಮ್ ಅವರ ಫಾರ್ಚೂನ್ ಫೋರ್ ಸಿನೆಮಾಸ್ ಎಕ್ಸ್ ಖಾತೆಯಿಂದ ಈ ಸಿನಿಮಾಗೆ ಸಂಬಂಧಿಸಿದ ಎಲ್ಲ ಟ್ವೀಟ್‌ಗಳನ್ನು ತಕ್ಷಣವೇ ಡಿಲೀಟ್ ಮಾಡಲಾಗಿದೆ. ಇದರಿಂದಾಗಿ ತ್ರಿವಿಕ್ರಮ್ ಅವರು ಈ ಒಪ್ಪಂದದಿಂದ ಸಂಪೂರ್ಣವಾಗಿ ಹೊರಬಂದಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಈಗ ಭಾರಿ ಸದ್ದು ಮಾಡುತ್ತಿದೆ.

ಒಪ್ಪಂದಕ್ಕೆ ಸಹಿ ಹಾಕುವ ಕೊನೆಯ ಕ್ಷಣದಲ್ಲಿ ನಿರ್ಮಾಪಕರು ಹೊಸ ಷರತ್ತುಗಳನ್ನು ವಿಧಿಸಿದ್ದಾರೆ. ನಿರ್ಮಾಪಕರ ಈ ವರ್ತನೆಯಿಂದ ತ್ರಿವಿಕ್ರಮ್ ಶ್ರೀನಿವಾಸ್ ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಸಿನಿಮಾದ ನಿರ್ಮಾಪಕರು ಚಿತ್ರರಂಗಕ್ಕೆ ಹೊಸಬರಾಗಿದ್ದಾರೆ. ತೆಲುಗು ಚಿತ್ರರಂಗದ ಕಾರ್ಯವೈಖರಿ ಮತ್ತು ವ್ಯವಹಾರದ ಶೈಲಿ ಸಂಪೂರ್ಣ ವಿಭಿನ್ನವಾಗಿದೆ. ಹೀಗಾಗಿ ಈ ಒಪ್ಪಂದದಿಂದ ದೂರ ಉಳಿಯಲು ತ್ರಿವಿಕ್ರಮ್ ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ‘ಹನುಮಾನ್ ಅಂಶ’ ಹೊಸ ಚರಿತ್ರೆ; ನಿರ್ಮಾಪಕರಿಗೆ 150 ಪಟ್ಟು ಲಾಭ

ಈಗ ತೆಲುಗು ಆವೃತ್ತಿಗೆ ಹೊಸ ವಿತರಕರು ಸಿಗುತ್ತಾರೋ ಇಲ್ಲವೋ ಎಂಬ ಗೊಂದಲ ಮೂಡಿದೆ. ಒಂದು ವೇಳೆ ಹೊಸ ವಿತರಕರು ಸಿಗದಿದ್ದರೆ ಚಿತ್ರ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ಚಿತ್ರಮಂದಿರಗಳಲ್ಲಿ ಸಾಲು ಸಾಲು ದೊಡ್ಡ ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ. ಹೀಗಾಗಿ ತೆಲುಗು ರಾಜ್ಯಗಳಲ್ಲಿ ಚಿತ್ರಮಂದಿರಗಳಲ್ಲಿ ಜಾಗ ಸಿಗುವುದು ಕೂಡ ಈ ಚಿತ್ರಕ್ಕೆ ದೊಡ್ಡ ಸವಾಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:56 am, Fri, 18 September 26

Loading...
Unable to load recommendations.
Follow Us