ಡ್ರೋನ್​ನಲ್ಲಿ ಚಿತ್ರಿತವಾಯ್ತು ‘ಗಗನ ಮಿಲನ’ ರೊಮ್ಯಾಂಟಿಕ್ ಆಲ್ಬಂ ಗೀತೆ

ಹೊಸ ಆಲ್ಬಂ ಸಾಂಗ್ ‘ಗಗನ ಮಿಲನ’ ರಿಲೀಸ್ ಆಗಿದೆ. ಜೀವನ್ ಹಳ್ಳಿಕಾರ್ ಮತ್ತು ಸೃಷ್ಟಿ ಅವರು ನಟಿಸಿರುವ ಈ ಗೀತೆಯನ್ನು ಜೀವನ್ ಹಳ್ಳಿಕಾರ್ ಯೂಟ್ಯೂಬ್ ಚಾನಲ್​ನಲ್ಲಿ ವೀಕ್ಷಿಸಬಹುದು. ಕಬ್ಬಿನಹಳ್ಳಿ, ಹಿರೆಕೊಳಲೆ ಕೆರೆ, ದೇವರಮನೆ, ಚಿಕ್ಕಮಗಳೂರು, ಮೂಡಿಗೆರೆ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಡ್ರೋನ್​ನಲ್ಲಿ ಚಿತ್ರಿತವಾಯ್ತು ‘ಗಗನ ಮಿಲನ’ ರೊಮ್ಯಾಂಟಿಕ್ ಆಲ್ಬಂ ಗೀತೆ
Jeevaan Hallikar, Srusti
Image Credit source: Glitterers Star House Productions

Updated on: Sep 03, 2026 | 7:31 PM

ಕನ್ನಡದಲ್ಲಿ ಸಿನಿಮಾ ಹಾಡುಗಳ ಜೊತೆಗೆ ಆಲ್ಬಂ ಸಾಂಗ್ ಅಥವಾ ಮ್ಯೂಸಿಕ್ ವಿಡಿಯೋಗಳು ಕೂಡ ಗಮನ ಸೆಳೆಯುತ್ತವೆ. ಅಂಥ ಹಾಡುಗಳ ಸಾಲಿಗೆ ಈಗ ‘ಗಗನ ಮಿಲನ’ ಹೊಸದಾಗಿ ಸೇರ್ಪಡೆ ಆಗಿದೆ. ಹೊಸ ತಂಡದ ಈ ಹಾಡನ್ನು ಯೂಟ್ಯೂಬ್ ಮೂಲಕ ಬಿಡುಗಡೆ ಮಾಡಲಾಗಿದೆ. ಒಂದು ಪ್ರೇಮಕಥೆಯನ್ನು ಈ ಹಾಡು ವಿವರಿಸುತ್ತದೆ. ಹಚ್ಚ ಹಸಿರಿನ ಪರಿಸರದಲ್ಲಿ ‘ಗಗನ ಮಿಲನ’ ಹಾಡನ್ನು ಚಿತ್ರಿಸಲಾಗಿದೆ. ಸಂಪೂರ್ಣ ಡ್ರೋನ್ ಮೂಲಕ ಹಾಡನ್ನು ಚಿತ್ರಿಸಲಾಗಿದೆ ಎಂಬುದು ಕೂಡ ವಿಶೇಷ.

ಇದೊಂದು ಜರ್ನಿ ಗೀತೆ ಕೂಡ ಹೌದು. ‘ಓ ಕಾಲವೇ ನೀನು ಸರಿಯಿಲ್ಲ.. ನಿಲ್ಲೋದಿಲ್ವಲ್ಲ ಈ ಒಂಟಿ ಬದುಕಿಗೆ..’ ಎಂದು ಶುರುವಾಗುವ ಸಾಹಿತ್ಯ ಈ ಹಾಡಿನಲ್ಲಿದೆ. 3.44 ನಿಮಿಷದ ‘ಗಗನ ಮಿಲನ’ ಆಲ್ಬಂ ಸಾಂಗ್ ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ. ‘ಜರ್ನಿ ಆಫ್ ಎಮೋಷನ್ಸ್’ ಎಂಬ ಅಡಿಬರಹ ಈ ಶೀರ್ಷಿಕೆಗೆ ಇದೆ. ಅದಕ್ಕೆ ತಕ್ಕಂತೆಯೇ ಈ ಹಾಡು ಮೂಡಿಬಂದಿದೆ.

‘ಗ್ಲಿಟ್ಟರರ‍್ಸ್ ಸ್ಟಾರ್ ಹೌಸ್ ಪ್ರೊಡಕ್ಷನ್’ ಮೂಲಕ ‘ಗಗನ ಮಿಲನ’ ಹಾಡು ನಿರ್ಮಾಣ ಆಗಿದೆ. ಮೂಲತಃ ನೃತ್ಯ ಸಂಯೋಜಕ, ಫಿಟ್‌ನೆಸ್ ತರಬೇತುದಾರ, ಸಾಹಿತಿ ಮತ್ತು ನಿರ್ದೇಶಕನಾಗಿರುವ ಜೀವನ್ ಹಳ್ಳಿಕಾರ್ ಅವರು ಇದರ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಈ ಹಾಡಿನಲ್ಲಿ ಅವರು ನಟಿಸಿದ್ದಾರೆ ಕೂಡ. ಅವರಿಗೆ ಜೋಡಿಯಾಗಿ ಹೊಸ ನಟಿ ಸೃಷ್ಟಿ ಅವರು ಅಭಿನಯಿಸಿದ್ದಾರೆ.

‘ಗಗನ ಮಿಲನ’ ಹಾಡು:

Gagana Milana (Official Music Video) | Kannada Album Song | Jeevaan Hallikar | Siddhart Kamath

ಹಾಡಿನಲ್ಲಿ ಒಂದು ಕಥೆ ತೋರಿಸಲಾಗಿದೆ. ಆತನ ಕನಸಿನ ಹುಡುಗಿಯ ಸುತ್ತ ಹೆಣೆದಿರುವ ನಿಗೂಢ ಪ್ರೇಮಯಾನವಿದು. ಆಕೆ ಹಿಂದಿನ ಕಾಲಕ್ಕೆ ಪಯಣಿಸಿ, ನಿಗೂಢವಾಗಿ ಕಾಣೆಯಾಗಿರುತ್ತಾಳೆ. ಅವಳು ಮತ್ತೆ ಮರಳಿ ಬಂದಿರುವಂತೆ ಭಾಸವಾಗಿ ಹುಡುಕುವ, ಕಣ್ಮರೆಯ ಹಿಂದಿರುವ ಸತ್ಯ ತಿಳಿದುಕೊಳ್ಳುವ ಬಯಕೆ ಅವನದಾಗಿರುತ್ತದೆ. ಅಂತಿಮವಾಗಿ ಸಿಗುತ್ತಾಳಾ? ಇಷ್ಟು ದಿನ ಎಲ್ಲಿದ್ದಳು? ಕೊನೆಗೆ ಅವನು ಏನಾಗುತ್ತಾನೆ? ಎಲ್ಲದಕ್ಕೂ ಉತ್ತರ ಗೀತೆಯ ಕ್ಲೈಮಾಕ್ಸ್‌ದಲ್ಲಿ ಸಿಗುತ್ತದೆ ಎಂದು ‘ಗಗನ ಮಿಲನ’ ತಂಡ ಹೇಳಿದೆ.

ಇದನ್ನೂ ಓದಿ: ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್

‘ಗಗನ ಮಿಲನ’ ಹಾಡಿಗೆ ಸಿದ್ದಾರ್ಥ್ ಕಾಮತ್ ಅವರ ಸಂಗೀತ ಇದೆ. ಅವರೇ ಧ್ವನಿ ನೀಡಿದ್ದಾರೆ. ಉಮೇಶ್ ಪೂಜಾರಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಆಕಾಶ್ ಎಸ್. ಮಹೇಂದ್ರಕರ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಕಿಶೋರ್‌ ಕುಮಾರ್ ಅವರು ಕಲರಿಸ್ಟ್ ಆಗಿ ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us