ಕನ್ನಡದಲ್ಲಿ ಸಿನಿಮಾ ಮಾಡಲಿದ್ದಾರೆ ತಮಿಳಿನ ಸ್ಟಾರ್ ನಿರ್ದೇಶಕ

|

Updated on: Mar 21, 2025 | 6:40 PM

Gautham Vasudev Menon: ಗೌತಮ್ ವಾಸುದೇವ್ ಮೆನನ್, ಭಾರತದ ಅದ್ಭುತ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು. ನಿರ್ದೇಶಿಸಿರುವ ಬಹುತೇಕ ಸಿನಿಮಾಗಳು ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿವೆ. ಇದೀಗ ಈ ಖ್ಯಾತ ನಿರ್ದೇಶಕ ಕನ್ನಡದಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಗೌತಮ್ ಅತಿ ಶೀಘ್ರದಲ್ಲಿ ಕನ್ನಡ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರಂತೆ.

ಕನ್ನಡದಲ್ಲಿ ಸಿನಿಮಾ ಮಾಡಲಿದ್ದಾರೆ ತಮಿಳಿನ ಸ್ಟಾರ್ ನಿರ್ದೇಶಕ
Gautham Vasudev Menon
Follow us on

ಕನ್ನಡದಲ್ಲಿ ನಟಿಸಲು ಪರಭಾಷೆಯ ನಟಿಯರು ಹಿಂದೇಟು ಹಾಕುತ್ತಿದ್ದ ಸಮಯವೊಂದಿತ್ತು. ತೆಲುಗು, ತಮಿಳಿನಲ್ಲಿ ಅವಕಾಶ ಸಿಗದೇ ಹೋದಾಗ ಕನ್ನಡದ ಕಡೆಗೆ ನಟಿಯರು ಮುಖ ಮಾಡುತ್ತಿದ್ದರು, ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆಂದರೆ ಅವರ ಆಫರ್​ಗಳು ಕಡಿಮೆ ಆಗಿವೆ ಎಂದರ್ಥ ಎಂಬ ಮಾತು ಸಹ ಇತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಕನ್ನಡದ ಸಿನಿಮಾಗಳಲ್ಲಿ ನಟಿಸಲು ಬಾಲಿವುಡ್ ನಟಿಯರು ಸಹ ಹಿಂದೆ-ಮುಂದೆ ನೋಡುತ್ತಿಲ್ಲ. ಕನ್ನಡದ ನಟರನ್ನು ಹುಡುಕಿಕೊಂಡು ಬಾಲಿವುಡ್​ನಿಂದ ನಿರ್ಮಾಪಕರು ಬರುತ್ತಿದ್ದಾರೆ. ಇದೀಗ ತಮಿಳಿನ ಪ್ರತಿಭಾವಂತ ನಿರ್ದೇಶಕರೊಬ್ಬರು ಕನ್ನಡದಲ್ಲಿ ಸಿನಿಮಾ ಮಾಡಲು ಬರುತ್ತಿದ್ದಾರೆ.

ತಮಿಳು ಚಿತ್ರರಂಗ ಸ್ಟಾರ್ ನಿರ್ದೇಶಕ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿಯೇ ಭಿನ್ನ ಮಾದರಿಯ ನಿರೂಪಣೆ ಶೈಲಿಯಲ್ಲಿ ಕತೆ ಹೇಳುವ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಇದೀಗ ಕನ್ನಡಕ್ಕೆ ಬರುತ್ತಿದ್ದಾರೆ. ಕಲ್ಟ್ ಕ್ಲಾಸಿಕ್ ಸಿನಿಮಾಗಳು ಎನಿಸಿಕೊಂಡಿರುವ ‘ರೆಹನಾ ಹೈ ತೇರೆ ದಿಲ್ ಮೇ’, ‘ಕಾಕ ಕಾಕ’, ‘ವೇಟ್ಟೆಯಾಡು ವಿಲೆಯಾಡು’, ‘ವನೈತಾಂಡಿ ವರುವಾಯ’, ‘ಯೇ ಮಾಯ ಚೇಸಾವೆ’, ‘ವಾರನಂ ಅಯರುಂ’, ‘ವೆಂದು ತನಿದತ್ತು ಕಾಡು’ ಅಂಥಹಾ ಸಿನಿಮಾಗಳನ್ನು ನೀಡಿರುವ ಗೌತಮ್ ವಾಸುದೇವ ಮೆನನ್ ಈಗ ಕನ್ನಡದಲ್ಲಿ ಸಿನಿಮಾ ನಿರ್ದೇಶಿಸಲು ರೆಡಿಯಾಗಿದ್ದಾರೆ.

ಗೌತಮ್ ವಾಸುದೇವ್ ಮೆನನ್ ಅವರು ಇತ್ತೀಚೆಗೆ ತಮಿಳು ಚಿತ್ರರಂಗದ ಬಗ್ಗೆ ತುಸು ಅಸಮಾಧಾನ ವ್ಯಕ್ತಪಡಿಸಿದ್ದರು. ಗೌತಮ್ ಅವರು ‘ಧ್ರುವ ನಚ್ಚತ್ತಿರಂ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾದ ನಿರ್ಮಾಪಕರೂ ಅವರೇ ಆದರೆ ಆ ಸಿನಿಮಾ ಅನ್ನು ಅವರಿಗೆ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಇಂಥಹಾ ಕಷ್ಟದ ಸಮಯದಲ್ಲಿ ತಮಿಳಿನ ಯಾವೊಬ್ಬ ಸಿನಿಮಾ ಮಂದಿಯೂ ತಮ್ಮ ಬೆಂಬಲಕ್ಕೆ ಬರಲಿಲ್ಲ, ನನಗೆ ಅಗತ್ಯವಾಗಿದ್ದಾಗಲೇ ಯಾರ ನೆರವೂ ಸಹ ನನಗೆ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ನಟ ಸೂರ್ಯ ಮೇಲೆ ಸಿಟ್ಟು ಹೊರಹಾಕಿದ ಖ್ಯಾತ ನಿರ್ದೇಶಕ

ಅದರ ಬೆನ್ನಲ್ಲೆ ಈಗ ನಾನು ಕನ್ನಡ ಸಿನಿಮಾ ನಿರ್ದೇಶನ ಮಾಡಲಿದ್ದೇನೆ ಎಂದು ಘೋಷಿಸಿದ್ದಾರೆ. ಬೆಂಗಳೂರು ಟೈಮ್ಸ್​ಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಅವರು ಹೇಳಿಕೊಂಡಿದ್ದಾರೆ. ಬಹಳ ವರ್ಷಗಳ ಹಿಂದೆ ಗೌತಮ್ ಅವರು ಕನ್ನಡದ ನಟ ಪುನೀತ್ ರಾಜ್​ಕುಮಾರ್ ಅವರೊಟ್ಟಿಗೆ ಸಿನಿಮಾ ಮಾಡಲು ಬಯಸಿದ್ದರು. ಪುನೀತ್ ರಾಜ್​ಕುಮಾರ್, ಅಲ್ಲು ಅರ್ಜುನ್, ತಮಿಳಿನ ಸಿಂಭು ಮೂವರನ್ನೂ ಹಾಕಿಕೊಂಡು ‘ಜಿಂದಗಿ ನಾ ಮಿಲೇಗಿ ದುಬಾರ’ ರೀತಿಯ ಪ್ರಯಾಣ ಕತೆಯುಳ್ಳ ಸಿನಿಮಾ ಮಾಡುವ ಇಚ್ಛೆ ಅವರಿಗಿತ್ತು ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಈಗ ಗೌತಮ್ ಪೂರ್ಣವಾಗಿ ಕನ್ನಡ ಸಿನಿಮಾ ಅನ್ನೇ ನಿರ್ದೇಶಿಸಲು ಮುಂದಾಗಿದ್ದು ಯಾರನ್ನು ನಾಯಕರನ್ನಾಗಿ ಹಾಕಿಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ