AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೊಂದು ಕನಸಿದೆ’: ‘ಇಂಡಿಯನ್ 2’ ವೇದಿಕೆಯಲ್ಲಿ ಕಮಲ್ ಖಡಕ್ ಭಾಷಣ

ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಲ್ ಹಾಸನ್ ತಮಿಳಿಗರಿಗೆ ಸಂದೇಶವನ್ನು ನೀಡಿದ್ದಾರೆ. ಜೊತೆಗೆ ತಮಗಿರುವ ಕನಸನ್ನು ಹಂಚಿಕೊಂಡಿದ್ದಾರೆ.

‘ನನಗೊಂದು ಕನಸಿದೆ’: ‘ಇಂಡಿಯನ್ 2’ ವೇದಿಕೆಯಲ್ಲಿ ಕಮಲ್ ಖಡಕ್ ಭಾಷಣ
ಮಂಜುನಾಥ ಸಿ.
|

Updated on: Jun 02, 2024 | 4:04 PM

Share

ಕಮಲ್ ಹಾಸನ್ (Kamal Haasan) ಅತ್ಯುತ್ತಮ ನಟ, ನಿರ್ದೇಶಕ ಆಗಿರುವ ಜೊತೆಗೆ ರಾಜಕಾರಣಿಯೂ ಹೌದು. ಕಮಲ್ ಸಿನಿಮಾ ಮೂಲಕ ಸಮಾಜದ ಬಗ್ಗೆ ತಮಗೆ ಅನ್ನಿಸಿದ್ದನ್ನು ಹೇಳುತ್ತಲೇ ಬಂದಿದ್ದಾರೆ. ಕಮಲ್​ರ ಹಲವು ಸಿನಿಮಾಗಳು ಸೂಕ್ಷ್ಮವಾದ ರಾಜಕೀಯ ವಿಷಯಗಳನ್ನು ಒಳಗೊಂಡಿವೆ. ಈ ಕಾರಣಕ್ಕೆ ಹಲವು ಬಾರಿ ವಿವಾದಗಳಿಗೂ ಗುರಿಯಾಗಿವೆ. ಕೆಲವು ಪಂಥಗಳ ದ್ವೇಷಕ್ಕೂ ಕಾರಣವಾಗಿದ್ದಾರೆ. ಇದೀಗ ಕಮಲ್ ನಟನೆಯ ‘ಇಂಡಿಯನ್ 2’ ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಚೆನ್ನೈನ ಜವಾಹಾರ್​ಲಾಲ್ ನೆಹರು ಸಭಾಂಗಣದಲ್ಲಿ ನಡೆದ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಖಡಕ್ ಭಾಷಣ ಮಾಡಿದ್ದಾರೆ.

‘ನಾನು ಒಬ್ಬ ತಮಿಳಿಗ. ನಾನು ಭಾರತೀಯನೂ ಹೌದು. ನಾನು ಒಮ್ಮೆಲೆ ತಮಿಳಿಗ ಹಾಗೂ ಭಾರತೀಯ ಎರಡೂ ಆಗಿರಬಲ್ಲೆ. ಇದೇ ನನ್ನ ಗುರುತು, ನಿಮ್ಮ ಗುರುತು ಸಹ ಇದೇ. ಅದನ್ನೇ ಈ ‘ಇಂಡಿಯನ್ 2’ ಸಿನಿಮಾ ಹೇಳುತ್ತಿದೆ. ಒಡೆದು ಆಳುವುದು ಬ್ರಿಟೀಷರ ಪದ್ಧತಿ ಆಗಿತ್ತು. ಅವರು ಹಾಗೆ ಮಾಡಿದರು ಏಕೆಂದರೆ ಭಾರತೀಯರು ಒಗ್ಗಟ್ಟಾದಾಗ ಓಡಿಹೋಗಲು ಅವರಿಗೆ ಒಂದು ಮನೆ ಎಂಬುದಿತ್ತು. ಆದರೆ ಇಂದು ಒಡೆದು ಆಳುತ್ತಿರುವವರು ಎಲ್ಲಿಗೆ ಓಡಿಹೋಗುತ್ತಾರೆ?’ ಎಂದು ಅವರು ಪ್ರಶ್ನೆ ಮಾಡಿದರು. ಭಾರತವನ್ನು ಒಡೆದು ಆಳುತ್ತಿರುವವರ ವಿರುದ್ಧ ಭಾರತೀಯರು ಒಂದಲ್ಲ ಒಂದು ದಿನ ದಂಗೆ ಏಳುತ್ತಾರೆ ಎಂದರು.

ಇದನ್ನೂ ಓದಿ:ಒಂದೇ ತಿಂಗಳಲ್ಲಿ ಕಮಲ್ ಹಾಸನ್ ನಟನೆಯ ಎರಡು ಬಿಗ್ ಬಜೆಟ್ ಸಿನಿಮಾ ರಿಲೀಸ್

ಕಮಲ್ ತಮ್ಮ ಕನಸನ್ನು ಈ ಕ್ಷಣದಲ್ಲಿ ಹಂಚಿಕೊಂಡರು. ‘ನನಗೆ ಒಂದು ಕನಸಿದೆ, ಒಂದು ದಿನ ಒಬ್ಬ ತಮಿಳಿಗ ಭಾರತವನ್ನು ಆಳಬೇಕು, ಅದೂ ಭಾರತದ ವಿವಿಧತೆಯನ್ನು ಸಂರಕ್ಷಿಸಿ ಭಾರತವನ್ನು ಆಳಬೇಕು’ ಎಂದರು. ಮುಂದುವರೆದು, ‘ಎಲ್ಲ ಊರು ನಮ್ಮ ಊರೇ, ಎಲ್ಲ ಜನರು ನಮ್ಮ ಜನರೇ, ನಮ್ಮ ರಾಜ್ಯಕ್ಕೆ ಬಂದವರಿಗೆ ನಾವು ಜೀವನ ಕೊಟ್ಟಿದ್ದೇವೆ. ಇದು ನಮ್ಮ ದೇಶ ಈ ದೇಶದ ಒಗ್ಗಟ್ಟನ್ನು ನಾವೇ ಕಾಪಾಡಬೇಕು’ ಎಂದಿದ್ದಾರೆ. ಕಮಲ್ ಹಾಸನ್ ನಟರಾಗಿರುವ ಜೊತೆಗೆ ರಾಜಕಾರಣಿಯೂ ಹೌದು, ‘ಮಕ್ಕಳ್ ನಿಧಿ ಮಯಂ’ ಹೆಸರಿನ ಪಕ್ಷ ಕಟ್ಟಿ ನಡೆಸುತ್ತಿದ್ದಾರೆ.

‘ಇಂಡಿಯನ್ 2’ ಸಿನಿಮಾ ಈ ಹಿಂದೆ ಬಿಡುಗಡೆ ಆಗಿದ್ದ ಕಮಲ್ ಹಾಸನ್​ರ ‘ಇಂಡಿಯನ್’ ಸಿನಿಮಾದ ರೀಮೇಕ್. ಈ ಸಿನಿಮಾವನ್ನು ಶಂಕರ್ ನಿರ್ದೇಶನ ಮಾಡಿದ್ದಾರೆ. 2019ರಿಂದಲೂ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಆದರೆ ನಿರ್ಮಾಪಕರು ಹಾಗೂ ನಿರ್ದೇಶಕರ ನಡುವಿನ ಸಮಸ್ಯೆಯಿಂದ ಬಿಡುಗಡೆ ತಡವಾಗಿದೆ. ಸಿನಿಮಾದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್ವಾಲ್ ಇನ್ನೂ ಕೆಲವು ಪ್ರಮುಖ ನಟ-ನಟಿಯರಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸಿನಿಮಾ ಜೂನ್ 12 ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ