
ತಮಿಳು ನಟ ಕಾರ್ತಿ ಅಭಿನಯದ ‘ಸರ್ದಾರ್ 2’ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಅದ್ಧೂರಿಯಾಗಿ ನಡೆದಿದೆ. ಈ ಸಮಾರಂಭದಲ್ಲಿ ನಟ ಕಾರ್ತಿ ಅವರು ನೀಡಿದ ಹೇಳಿಕೆಯೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ನಾಯಕಿ ಮಾಳವಿಕಾ ಮೋಹನನ್ ಕುರಿತು ಕಾರ್ತಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅನೇಕ ನೆಟ್ಟಿಗರು ಕಾರ್ತಿ ಅವರ ಮಾತುಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ತಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮಾಳವಿಕಾ ಮೋಹನನ್ ನಾಯಕಿಯಾಗಿ ಆಯ್ಕೆಯಾದಾಗ ತಾವು ತಂಡವನ್ನು ಒಂದು ಪ್ರಶ್ನೆ ಕೇಳಿದ್ದಾಗಿ ಹೇಳಿದರು. ಮಾಳವಿಕಾ ಅವರು ಹಾಲಿವುಡ್ ನಟಿ ಮೋನಿಕಾ ಬೆಲ್ಲುಚಿ ರೀತಿಯಲ್ಲಿ ಗ್ಲಾಮರಸ್ ಉಡುಪು ಧರಿಸುತ್ತಾರೆಯೇ ಎಂದು ವಿಚಾರಿಸಿದ್ದಾಗಿ ತಿಳಿಸಿದರು. ತಾವು ವೈಯಕ್ತಿಕ ಖುಷಿಗಾಗಿ ಈ ಪ್ರಶ್ನೆ ಕೇಳಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಪ್ರೇಕ್ಷಕರ ಮನರಂಜನೆಗಾಗಿ ಮಾತ್ರ ಹೀಗೆ ಕೇಳಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಕಾರ್ತಿ ಈ ಮಾತುಗಳನ್ನು ಹಾಸ್ಯದ ಧಾಟಿಯಲ್ಲಿ ಹೇಳಿದ್ದರೂ ಸಹ ಯಾರಿಗೂ ಇಷ್ಟವಾಗಿಲ್ಲ. ಹಲವು ನೆಟ್ಟಿಗರು ಮತ್ತು ಮಹಿಳಾಪರ ಹೋರಾಟಗಾರರು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಾರ್ತಿ ಅವರ ದ್ವಂದ್ವ ಅರ್ಥದ ಮಾತುಗಳು ನಟಿಯ ಗೌರವಕ್ಕೆ ಧಕ್ಕೆ ತಂದಿವೆ ಎಂದು ಟೀಕಿಸಿದ್ದಾರೆ. ನಟಿಯ ಅಭಿನಯಕ್ಕೆ ಪ್ರಾಮುಖ್ಯತೆ ನೀಡುವ ಬದಲು ಅವರ ಗ್ಲಾಮರ್ ಬಗ್ಗೆ ಮಾತನಾಡಿರುವುದು ತಪ್ಪು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನಟಿಯ ದೇಹ ಹಾಗೂ ಸೌಂದರ್ಯವನ್ನು ವಸ್ತುವಿನಂತೆ ಬಿಂಬಿಸಲಾಗಿದೆ ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ.
#Karthi Recent
– When he planned Part 2, I thought the story was going to be like a Mission: Impossible film.
– #MalavikaMohanan looks like Monica Bellucci. I saw her in Thangalaan, so seeing her in my film is really surprising to me.#Sardar2 pic.twitter.com/8zXy7F1Hjz— Movie Tamil (@_MovieTamil) September 2, 2026
ಇದೇ ವೇದಿಕೆಯಲ್ಲಿ ಕಾರ್ತಿ ತಾವು ‘ಸರ್ದಾರ್ 2’ ಸಿನಿಮಾ ಆಯ್ಕೆ ಮಾಡಿಕೊಂಡ ಕಾರಣವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಅಭಿಮಾನಿಗಳಿಗೆ ಸಾಹಸ ಪ್ರಧಾನ ಸಿನಿಮಾಗಳು ಎಂದರೆ ತುಂಬಾ ಇಷ್ಟ. ಅಭಿಮಾನಿಗಳನ್ನು ರಂಜಿಸಲು ಮಾತ್ರ ತಾವು ಈ ಭಾಗದ ಕಥೆಗೆ ಒಪ್ಪಿಗೆ ನೀಡಿದ್ದಾಗಿ ಹೇಳಿದರು. ತಮ್ಮ ಸುದೀರ್ಘ ಚಲನಚಿತ್ರ ಪಯಣದಲ್ಲಿ ಸದಾ ಬೆಂಬಲವಾಗಿ ನಿಂತ ಎಲ್ಲಾ ಅಭಿಮಾನಿಗಳಿಗೆ ಈ ವೇಳೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು.
ಇದನ್ನೂ ಓದಿ: ತಾಯಿ ಕಿಳವಿಚಿತ್ರದ ಯಶಸ್ಸು: ನಿರ್ದೇಶಕನಿಗೆ ದುಬಾರಿ ಕಾರು ಗಿಫ್ಟ್ ನೀಡಿದ ನಟ ಶಿವಕಾರ್ತಿಕೇಯನ್
‘ಸರ್ದಾರ್ 2’ ಚಿತ್ರವನ್ನು ಪಿ.ಎಸ್. ಮಿತ್ರನ್ ಅವರು ಬರೆದು ನಿರ್ದೇಶಿಸಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಎಸ್.ಜೆ. ಸೂರ್ಯ, ಕನ್ನಡತಿ ಆಶಿಕಾ ರಂಗನಾಥ್, ರಜೀಷಾ ವಿಜಯನ್ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ನಟ ಕಾರ್ತಿ ಅವರ ಈ ವಿವಾದಾತ್ಮಕ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಪ್ರಮುಖ ಚರ್ಚಾವಿಷಯವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.