‘ಇದು ನಿಜಕ್ಕೂ ಒಂದು ಕ್ರಾಂತಿ’: ಟಿವಿಕೆ ವಿಜಯ್ ಗೆಲುವಿಗೆ ಕೆವಿಎನ್ ಪ್ರೊಡಕ್ಷನ್ಸ್ ಸಂತಸ
‘ಜನ ನಾಯಗನ್’ ಸಿನಿಮಾದ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರು ದಳಪತಿ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವಿಜಯ್ ಅವರ ಗೆಲುವನ್ನು ಒಂದು ನಿಜವಾದ ಕ್ರಾಂತಿ ಎಂದು ಅವರು ಬಣ್ಣಿಸಿದ್ದಾರೆ. ಆದಷ್ಟು ಬೇಗ ‘ಜನ ನಾಯಗನ್’ ಸಿನಿಮಾ ರಿಲೀಸ್ ಆಗಲಿ ಎಂದು ಫ್ಯಾನ್ಸ್ ಕಾದಿದ್ದಾರೆ.

ನಟ ದಳಪತಿ ವಿಜಯ್ (Thalapathy Vijay) ಅವರು ಈಗ ಪೂರ್ಣಾವಧಿ ರಾಜಕಾರಣಿ. ಚುನಾವಣೆಯ ಅಖಾಡಕ್ಕೆ ಇಳಿದ ಅವರಿಗೆ ಚೊಚ್ಚಲ ಪ್ರಯತ್ನದಲ್ಲೇ ಗೆಲುವು ಸಿಕ್ಕಿದೆ. ಅವರ ಈ ಗೆಲುವನ್ನು ಆಪ್ತರು ಸಂಭ್ರಮಿಸುತ್ತಿದ್ದಾರೆ. ಚುನಾವಣೆಗೂ ಮುನ್ನ ವಿಜಯ್ ಅವರ ಕೊನೇ ಸಿನಿಮಾ ‘ಜನ ನಾಯಗನ್’ (Jana Nayagan) ಬಿಡುಗಡೆಗೆ ಸಾಕಷ್ಟು ತೊಂದರೆ ಉಂಟಾಯಿತು. ಈಗ ಆ ಸಿನಿಮಾದ ನಿರ್ಮಾಣ ಸಂಸ್ಥೆಯಿಂದ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆಯ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರು ಅಭಿನಂದನೆ ತಿಳಿಸಿದ್ದಾರೆ.
‘ನಮ್ಮ ಜನ ನಾಯಕನಿಗೆ ಹೃತ್ಪೂರ್ವಕ ಅಭಿನಂದನೆಗಳು’ ಎಂಬ ಕ್ಯಾಪ್ಷನ್ನೊಂದಿಗೆ ಸಿನಿಮಾದ ಹೊಸ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಅದರಲ್ಲಿ ದಳಪತಿ ವಿಜಯ್ ಅವರು ದೀವಟಿಗೆ ಹಿಡಿದಿರುವ ಚಿತ್ರ ಇದೆ. ‘ಪ್ರಜಾಪ್ರಭುತ್ವದ ದಾರಿದೀಪ ಹಿಡಿದವರು’ ಎಂದು ಬರೆಯಲಾಗಿದೆ. ಈ ಮೂಲಕ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ದಳಪತಿ ವಿಜಯ್ ಅವರಿಗೆ ಶುಭ ಹಾರೈಸಿದೆ.
‘ಎಲ್ಲಾ ಅಡೆತಡೆಗಳನ್ನು ಮೀರಿ ಇಂದು ಹೊಸ ಇತಿಹಾಸ ಬರೆದಿರುವ ದಳಪತಿ ವಿಜಯ್ ಸರ್ ಅವರಿಗೆ ಅಭಿನಂದನೆಗಳು. ಇದು ನಿಜಕ್ಕೂ ಒಂದು ಕ್ರಾಂತಿ ಮತ್ತು ಮುಂದಿನ ಹಲವು ತಲೆಮಾರುಗಳವರೆಗೆ ಇದು ಪ್ರತಿಧ್ವನಿಸಲಿದೆ’ ಎಂದು ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರ ಪರವಾಗಿ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
View this post on Instagram
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಜನ ನಾಯಗನ್’ ಸಿನಿಮಾ ಹಲವು ತಿಂಗಳ ಹಿಂದೆಯೇ ಬಿಡುಗಡೆ ಆಗಬೇಕಿತ್ತು. ಆದರೆ ಅನೇಕ ಕಾರಣಗಳಿಂದ ಈ ಚಿತ್ರಕ್ಕೆ ಅಡ್ಡಿ ಉಂಟುಮಾಡಲಾಯಿತು. ಅದರ ಹಿಂದೆ ರಾಜಕೀಯದ ಹುನ್ನಾರ ಇದೆ ಎಂಬುದು ಹಲವರ ಆರೋಪ. ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಗದ ಕಾರಣದಿಂದ ಸಿನಿಮಾ ಬಿಡುಗಡೆ ಆಗಲಿಲ್ಲ.
ಇದನ್ನೂ ಓದಿ: ನೀವು ಇತಿಹಾಸ ಸೃಷ್ಟಿ ಮಾಡಿದ್ರಿ: ಟಿವಿಕೆ ಗೆಲುವಿನ ಬಳಿಕ ವಿಜಯ್ಗೆ ಸೆಲೆಬ್ರಿಟಿಗಳ ಅಭಿನಂದನೆ
ಈ ಪ್ರಕರಣ ಸುಪ್ರೀಂ ಕೋರ್ಟ್ ತನಕ ಹೋಯಿತು. ತಮ್ಮ ಚುನಾವಣಾ ಭಾಷಣದಲ್ಲಿ ದಳಪತಿ ವಿಜಯ್ ಅವರು ಆ ಬಗ್ಗೆ ಮಾತನಾಡಿದ್ದರು. ಸಿನಿಮಾ ತಡೆ ಹಿಡಿದಿರುವುದಕ್ಕೆ ತಮಗೆ ನ್ಯಾಯ ಬೇಕು ಎಂದು ಅವರು ಹೇಳಿದ್ದರು. ಚುನಾವಣೆಗೂ ಮುನ್ನ ‘ಜನ ನಾಯಗನ್’ ಸಿನಿಮಾವನ್ನು ಲೀಕ್ ಕೂಡ ಮಾಡಲಾಯಿತು. ಈ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ವಿಜಯ್ ಅವರು ಜಯ ಸಾಧಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




