ಪಹಲ್ಗಾಮ್ ದಾಳಿ ಸಂಸ್ತ್ರರ ಕುಟುಂಬ ದತ್ತು ಪಡೆದ ನಟ, ಭೇಷ್ ಎಂದ ಅಭಿಮಾನಿಗಳು
Manchu Vishnu: ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹಲವು ಅಮಾಯಕರು ಬಲಿಯಾದರು. ಇಡೀ ದೇಶವೇ ಘಟನೆ ಕುರಿತು ಶೋಕ ಆಚರಿಸಿತು. ಸಿನಿಮಾ ನಟ-ನಟಿಯರು ಸಾಮಾಜಿಕ ಜಾಲತಾಣದ ಮೂಲಕ ಸಂತ್ರಸ್ತರ ಕುಟುಂಬದ ಪರ ಪೋಸ್ಟ್ ಹಂಚಿಕೊಂಡರು. ಆದರೆ ತೆಲುಗು ನಟ ಮಂಚು ವಿಷ್ಣು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲರೂ ಮೆಚ್ಚುವ ಕಾರ್ಯ ಮಾಡಿದ್ದಾರೆ.

ಇತ್ತೀಚೆಗಷ್ಟೆ ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಕನ್ನಡಿಗರೂ ಸೇರಿದಂತೆ 27 ಮಂದಿ ನಿಧನ ಹೊಂದಿದ್ದು, ಹಲವಾರು ಮಂದಿ ಗಾಯಾಳುಗಳಾಗಿದ್ದಾರೆ. ಇಡೀ ದೇಶವೇ ಘಟನೆಯನ್ನು ಖಂಡಿಸಿದ್ದು, ಸಂತ್ರಸ್ತರ ಕುಟುಂಬದ ಜೊತೆ ನಿಂತಿದೆ. ಗೃಹ ಸಚಿವರು ಸೇರಿದಂತೆ ಹಲವು ರಾಜಕಾರಣಿಗಳು ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಸರ್ಕಾರಗಳು ಪರಿಹಾರ ಮೊತ್ತಗಳನ್ನು ಘೋಷಿಸಿವೆ. ಸಿನಿಮಾ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ಶೋಕ ವ್ಯಕ್ತಪಡಿಸಿದ್ದಾರೆ. ಆದರೆ ತೆಲುಗು ಚಿತ್ರರಂಗದ ನಟ ಮಂಚು ವಿಷ್ಣು ಒಂದು ಹೆಜ್ಜೆ ಮುಂದೆ ಹೋಗಿ ಮಾಡಿರುವ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಪಹಲ್ಗಾಮ್ ದಾಳಿಯಲ್ಲಿ ಆಂಧ್ರದ ನೆಲ್ಲೂರು ಜಿಲ್ಲೆಯ ಕುಟುಂಬವೊಂದು ತೀವ್ರ ನಷ್ಟ ಅನುಭವಿಸಿದೆ. ನೆಲ್ಲೂರು ಜಿಲ್ಲೆ ಕಾವೆಲ್ಲಿಯ ಕುಮಾರಿ ಸ್ಟ್ರೀಟ್ನಲ್ಲಿ ವಾಸವಿದ್ದ ಸೋಮಶೆಟ್ಟಿ ಮಧುಸೂಧನ್ ರಾವ್ ಎಂಬುವರು ಕುಟುಂಬದೊಟ್ಟಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಆ ವೇಳೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಧುಸೂಧನ್ ರಾವ್ ನಿಧನ ಹೊಂದಿದ್ದರು.
ಇತ್ತೀಚೆಗಷ್ಟೆ ನಟ ಮಂಚು ವಿಷ್ಣು ಮಧುಸೂದನ್ ರಾವ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಮಾತ್ರವಲ್ಲದೆ ಮಧುಸೂದನ್ ಅವರ ಇಬ್ಬರು ಮಕ್ಕಳನ್ನು ಮಂಚು ವಿಷ್ಣು ದತ್ತು ಪಡೆದಿದ್ದಾರೆ. ಅಂದರೆ ಇಬ್ಬರು ಮಕ್ಕಳ ಶಿಕ್ಷಣದ ಸಂಪೂರ್ಣ ಖರ್ಚನ್ನು ತಾವೇ ವಹಿಸುವುದಾಗಿ ಮಂಚು ವಿಷ್ಣು ಘೋಷಿಸಿದ್ದಾರೆ. ಅಲ್ಲದೆ ಕುಟುಂಬಕ್ಕೆ ಆರ್ಥಿಕ ಸಹಾಯ ಸಹ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಸುಹಾಸ್ ಹತ್ಯೆ, ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ನಾಳೆ ಚಿಕ್ಕಮಗಳೂರು ಜಿಲ್ಲೆ ಬಂದ್ಗೆ ಕರೆ
ತೆಲುಗು ಕಲಾವಿದರ ಸಂಘದ ಅಧ್ಯಕ್ಷರೂ ಆಗಿರುವ ಮಂಚು ವಿಷ್ಣು ಆಗಾಗ್ಗೆ ತಮ್ಮ ಹೇಳಿಕೆಗಳಿಂದ, ತಮ್ಮ ನಟನೆಯಿಂದಾಗಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಟ್ರೋಲರ್ಗಳ ಮೆಚ್ಚಿನ ನಟ ಎಂಬ ‘ಬಿರುದು’ ಸಹ ಮಂಚು ವಿಷ್ಣುಗೆ ಇದೆ. ಆದರೆ ಈಗ ಮಂಚು ವಿಷ್ಣು ಮಾಡಿರುವ ಕೆಲಸಕ್ಕೆ ತೀವ್ರ ಪ್ರಶಂಸೆ ವ್ಯಕ್ತವಾಗಿದೆ. ಇನ್ನು ಕೆಲವರು ಇದು ಪ್ರಚಾರದ ತಂತ್ರ ಎಂದು ಟೀಕಿಸಿದ್ದೂ ಇದೆ.
ಮಂಚು ವಿಷ್ಣು ನಟನೆಯ ‘ಕಣ್ಣಪ್ಪ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ವಿಎಫ್ಎಕ್ಸ್ ಕಾರಣಕ್ಕೆ ಸಿನಿಮಾ ಬಿಡುಗಡೆ ತಡವಾಗಿದೆ. ಮಂಚು ವಿಷ್ಣು ಜೊತೆಗೆ ಈ ಸಿನಿಮಾನಲ್ಲಿ ಅತಿಥಿ ಪಾತ್ರಗಳಲ್ಲಿ ಪ್ರಭಾಸ್, ಬಾಲಿವುಡ್ನ ಅಕ್ಷಯ್ ಕುಮಾರ್, ಮೋಹನ್ಲಾಲ್ ಅವರುಗಳು ನಟಿಸಿದ್ದಾರೆ. ಕನ್ನಡದ ನಟ ದೇವರಾಜ್ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ