Hoysala Review: ಹೆಚ್ಚಿಗೆ ಸುತ್ತಾಡಿದರೂ ಮೆಚ್ಚುಗೆ ಗಳಿಸುವ ಹೊಯ್ಸಳ; ಆ್ಯಕ್ಷನ್​ ಜೊತೆ ಜಾತಿ, ಪ್ರೀತಿ, ನೀತಿ ಇತ್ಯಾದಿ..

Daali Dhananjay | Hoysala Movie Review: ಖಾಕಿ​ ಗತ್ತಿನಲ್ಲಿ ಡಾಲಿ ಧನಂಜಯ್​ ಅಬ್ಬರಿಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಅವರು ವಿಲನ್​ಗಳ ಬೆಂಡೆತ್ತಿದ್ದಾರೆ. ‘ಹೊಯ್ಸಳ’ ಚಿತ್ರದ ಪ್ಲಸ್​ ಏನು? ಮೈನಸ್​ ಏನು? ಇಲ್ಲಿದೆ ಉತ್ತರ..

Hoysala Review: ಹೆಚ್ಚಿಗೆ ಸುತ್ತಾಡಿದರೂ ಮೆಚ್ಚುಗೆ ಗಳಿಸುವ ಹೊಯ್ಸಳ; ಆ್ಯಕ್ಷನ್​ ಜೊತೆ ಜಾತಿ, ಪ್ರೀತಿ, ನೀತಿ ಇತ್ಯಾದಿ..
ಡಾಲಿ ಧನಂಜಯ್

Updated on: Mar 30, 2023 | 2:39 PM

ಚಿತ್ರ: ಗುರುದೇವ್​ ಹೊಯ್ಸಳ

ನಿರ್ಮಾಣ: ಕೆಆರ್​ಜಿ ಸ್ಟುಡಿಯೋಸ್

ನಿರ್ದೇಶನ: ವಿಜಯ್​ ಎನ್​.

ಇದನ್ನೂ ಓದಿ
Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

ಪಾತ್ರವರ್ಗ: ಡಾಲಿ ಧನಂಜಯ್​, ಅಮೃತಾ ಅಯ್ಯಂಗಾರ್​, ನವೀನ್​ ಶಂಕರ್, ಅನಿರುದ್ಧ್​ ಭಟ್​, ಮಯೂರಿ ನಟರಾಜ್​, ಅಚ್ಯುತ್​ ಕುಮಾರ್​, ರಾಜೇಶ್​ ನಟರಂಗ ಮುಂತಾದವರು.

ಸ್ಟಾರ್​: 3/5

ನಟ ಧನಂಜಯ್​ ಅವರು ಎಲ್ಲ ಬಗೆಯ ಪಾತ್ರಗಳನ್ನು ಪ್ರಯತ್ನಿಸುತ್ತಾರೆ. ಆ ಕಾರಣದಿಂದ ಅವರ ಪ್ರತಿಯೊಂದು ಸಿನಿಮಾ ಕೂಡ ಅಭಿಮಾನಿಗಳಿಗೆ ಸ್ಪೆಷಲ್​ ಎನಿಸುತ್ತದೆ. ಈಗ ಅವರು ‘ಹೊಯ್ಸಳ’ ಸಿನಿಮಾ ಮೂಲಕ ಪೊಲೀಸ್​ ಅಧಿಕಾರಿಯಾಗಿ ಜನರ ಮುಂದೆ ಬಂದಿದ್ದಾರೆ. ರಾಮ ನವಮಿ ಪ್ರಯುಕ್ತ ಈ ಚಿತ್ರ ಅದ್ದೂರಿಯಾಗಿ ರಿಲೀಸ್​ ಆಗಿದೆ. ವಿಜಯ್​ ಎನ್​. ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಡಾಲಿಗೆ ಜೋಡಿಯಾಗಿ ಅಮೃತಾ ಐಯ್ಯಂಗಾರ್​ ನಟಿಸಿದ್ದಾರೆ. ಅಭಿಮಾನಿಗಳಿಗೆ ಇವರಿಬ್ಬರ ಕಾಂಬಿನೇಷನ್​ ಬಗ್ಗೆ ವಿಶೇಷ ಪ್ರೀತಿ ಇದೆ. ಟ್ರೇಲರ್​ ಮೂಲಕ ‘ಹೊಯ್ಸಳ’ ಚಿತ್ರ ನಿರೀಕ್ಷೆ ಮೂಡಿಸಿತ್ತು. ಹಾಗಾದರೆ ಪೂರ್ತಿ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

ಆ್ಯಂಗ್ರಿ ಯಂಗ್​ ಮ್ಯಾನ್​ ಡಾಲಿ:

ಚಿತ್ರರಂಗದಲ್ಲಿ ಪೊಲೀಸ್​ ಕಥೆಗಳಿಗೆ ಕೊರತೆ ಏನೂ ಇಲ್ಲ. ಲೆಕ್ಕವಿಲ್ಲದಷ್ಟು ಹೀರೋಗಳು ಪೊಲೀಸ್​ ಸಮವಸ್ತ್ರ ಧರಿಸಿ ಕ್ಯಾಮೆರಾ ಎದುರಿಸಿದ್ದಾರೆ. ಮತ್ತೆ ಅಂಥದ್ದೇ ಪಾತ್ರ ಮಾಡಬೇಕು ಅಂದರೆ ಅದರಲ್ಲಿ ಏನೋ ಹೊಸತನ ಇರಲೇಬೇಕು. ಡಾಲಿ ಧನಂಜಯ್​ ಅವರು ಈ ಬಾರಿ ಗುರುದೇವ್ ಎಂಬ ಪೊಲೀಸ್​ ಅಧಿಕಾರಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಫ್​ ಆ್ಯಂಡ್​ ಟಫ್​, ಆ್ಯಂಗ್ರಿ ಯಂಗ್​ ಮ್ಯಾನ್​ ರೀತಿಯ ಪಾತ್ರ ಇದು. ತಪ್ಪು ಮಾಡಿದವರಿಗೆ ಮುಲಾಜಿಲ್ಲದೇ ಶಿಕ್ಷೆ ನೀಡುವ ಪೊಲೀಸ್​ ಆಗಿ ಡಾಲಿ ಮಿಂಚಿದ್ದಾರೆ. ಹಾಗಂತ ಗುರುದೇವ್ ಪಾತ್ರ ಒಂದು ಸೂಪರ್​ ಹೀರೋ ರೀತಿಯಲ್ಲಿ ಇಲ್ಲ. ಆತನಿಗೂ ಇತಿ-ಮಿತಿಗಳಿವೆ. ಅದೆಲ್ಲವನ್ನೂ ದಾಟಿಕೊಂಡು ಆತ ಹೇಗೆ ಲಾ ಆ್ಯಂಡ್​ ಆರ್ಡರ್​ ಕಾಪಾಡುತ್ತಾನೆ ಎಂಬುದು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

‘ಹೊಯ್ಸಳ’ ಚಿತ್ರದ ಕಥೆ:

ನಾಪತ್ತೆಯಾದ ಪೊಲೀಸ್​ ಅಧಿಕಾರಿಯೊಬ್ಬರನ್ನು ಹುಡುಕಲು ಮತ್ತೊಬ್ಬ ಖಡಕ್​ ಅಧಿಕಾರಿ ಗುರುದೇವ್​ (ಧನಂಜಯ್) ನೇಮಕವಾಗುತ್ತಾನೆ. ಆ ತನಿಖೆಯ ವೇಳೆ ಮರಳು ಮಾಫಿಯಾ ಎದುರಾಗುತ್ತದೆ. ಅದರ ಜೊತೆಗೆ ಇಬ್ಬರು ಪ್ರೇಮಿಗಳು ಸಿಕ್ಕಿ ಹಾಕಿಕೊಳ್ಳುತ್ತಾರೆ. ಅವರ ಪ್ರೇಮ್​ ಕಹಾನಿಯನ್ನು ಕೆದಕಿದಾಗ ಜಾತಿ ತಾರತಮ್ಯದ ಪಿಡುಗು ಕಾಣಿಸಿಕೊಳ್ಳುತ್ತದೆ. ಅಲ್ಲಿಂದ ಕಥೆ ಬೇರೆಯದೇ ತಿರುವು ಪಡೆದುಕೊಂಡು ಮರ್ಯಾದೆ ಹತ್ಯೆವರೆಗೂ ಸಾಗುತ್ತದೆ. ಈ ಎಲ್ಲ ಅಂಶಗಳನ್ನು ಒಂದಕ್ಕೊಂದು ಪೋಣಿಸಿ ಸಿನಿಮಾ ಮಾಡಿದ್ದಾರೆ ನಿರ್ದೇಶಕರು.

ಇದನ್ನೂ ಓದಿ: Kabzaa Movie Review: 1970ರ ಕಾಲಕ್ಕೆ ಕರೆದೊಯ್ಯುವ ‘ಕಬ್ಜ’; ತೆರೆ ಹಿಂದಿನ ಹೀರೋಗಳ ಅದ್ದೂರಿ ಸಿನಿಮಾ

ಮನರಂಜನೆ ಜೊತೆಗೆ ಮೆಸೇಜ್​:

ಮರ್ಯಾದೆ ಹತ್ಯೆ ಘಟನೆಗಳು ಆಗಾಗ ವರದಿ ಆಗುತ್ತಲೇ ಇವೆ. ಆ ಕುರಿತು ಅನೇಕ ಸಿನಿಮಾಗಳು ಬಂದಿವೆ. ಅದೇ ವಿಚಾರವನ್ನು ‘ಹೊಯ್ಸಳ’ ಸಿನಿಮಾ ಬೇರೆ ರೀತಿಯಲ್ಲಿ ಹೇಳುತ್ತದೆ. ಜಾತಿ ಪಿಡುಗಿನ ಬಗ್ಗೆ ಮೆಸೇಜ್​ ನೀಡುತ್ತದೆ. ಒಂದಷ್ಟು ನೀತಿ ಪಾಠವನ್ನೂ ಮಾಡುತ್ತದೆ. ಹಾಗಂತ ಎಲ್ಲಿಯೂ ಬೋರು ಹೊಡೆಸುವುದಿಲ್ಲ. ಕಮರ್ಷಿಯಲ್ ಆಯಾಮಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ದೇಶಕ ವಿಜಯ್ ಅವರು ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ಪಾತ್ರಧಾರಿಗಳ ನಟನೆ ಹೇಗಿದೆ?

ಗುರುದೇವ್​ ಎಂಬ ಪೊಲೀಸ್​ ಅಧಿಕಾರಿಯ ಪಾತ್ರಕ್ಕೆ ಧನಂಜಯ್​ ಅವರು ನ್ಯಾಯ ಒದಗಿಸಿದ್ದಾರೆ. ಅವರ ವಿರುದ್ಧ ವಿಲನ್​ ಆಗಿ ಅಬ್ಬರಿಸಿರುವ ಅವಿನಾಶ್​ ಬಿಎಸ್​ ಕೂಡ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಲಿ ಎಂಬ ಖಳನಾಯಕನಾಗಿ ಕಾಣಿಸಿಕೊಂಡಿರುವ ನವೀನ್​ ಶಂಕರ್​ ಅವರ ನಟನೆ ಗಮನಾರ್ಹವಾಗಿದೆ. ಹೊಸ ನಟ ಅನಿರುದ್ಧ್​ ಭಟ್​ ಭರವಸೆ ಮೂಡಿಸಿದ್ದಾರೆ. ನಟಿ ಮಯೂರಿ ನಟರಾಜ್​ ಸಹ ಉತ್ತಮವಾಗಿ ಅಭಿನಯಿಸಿದ್ದಾರೆ. ಅಮೃತಾ ಅಯ್ಯಂಗಾರ್​ ನಿಭಾಯಿಸಿರುವ ಪಾತ್ರಕ್ಕೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಕ್ಕಿಲ್ಲ. ಕೆಲವೇ ಹೊತ್ತು ತೆರೆಮೇಲೆ ಕಾಣಿಸಿಕೊಂಡು ನಗಿಸುತ್ತಾರೆ ನಾಗಭೂಷಣ್​.

ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ

ತಂತ್ರಜ್ಞರ ಕೆಲಸಕ್ಕೂ ಚಪ್ಪಾಳೆ:

ತಾಂತ್ರಿಕವಾಗಿ ‘ಹೊಯ್ಸಳ’ ಸಿನಿಮಾ ಅಚ್ಚುಕಟ್ಟಾಗಿದೆ. ಅಜನೀಶ್​ ಬಿ. ಲೋಕನಾಥ್​ (ಸಂಗೀತ), ಕಾರ್ತಿಕ್​ ಎಸ್​ (ಛಾಯಾಗ್ರಹಣ), ದೀಪು ಎಸ್​. ಕುಮಾರ್​ (ಸಂಕಲನ) ಅವರು ತಮ್ಮತಮ್ಮ ವಿಭಾಗಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಮಾಸ್ತಿ ಅವರ ಸಂಭಾಷಣೆಯಿಂದಾಗಿ ಹಲವು ದೃಶ್ಯಗಳ ತೂಕ ಹೆಚ್ಚಿದೆ. ದಿಲೀಪ್​ ಸುಬ್ಬರಾಯನ್​ ಹಾಗೂ ಅರ್ಜುನ್ ರಾಜ್​ ಅವರ ಸಾಹಸ ಸಂಯೋಜನೆಯಲ್ಲಿ ಮೂಡಿಬಂದಿರುವ ಫೈಟಿಂಗ್​ ದೃಶ್ಯಗಳು ಆ್ಯಕ್ಷನ್​ ಪ್ರಿಯರ ಚಪ್ಪಾಳೆ ಗಿಟ್ಟಿಸುತ್ತವೆ.

ಹೆಚ್ಚಾಯಿತು ‘ಹೊಯ್ಸಳ’ ಸುತ್ತಾಟ:

‘ಹೊಯ್ಸಳ’ ಪೊಲೀಸ್​ ಗಸ್ತುಪಡೆಯ ವಾಹನ ಊರೆಲ್ಲ ಸುತ್ತು ಹಾಕುತ್ತದೆ. ಅದೇ ರೀತಿ ಈ ಸಿನಿಮಾದ ಕಥೆ ಕೂಡ ಸಿಕ್ಕಾಪಟ್ಟೆ ಸುತ್ತಾಟ ನಡೆಸಿದೆ. ಆ ಬಗ್ಗೆ ನಿರ್ದೇಶಕರು ಕೊಂಚ ಗಮನ ಹರಿಸಿದ್ದರೆ ಸಿನಿಮಾವನ್ನು ಇನ್ನಷ್ಟು ಮೊನಚಾಗಿಸುವ ಸಾಧ್ಯತೆ ಇತ್ತು. ದ್ವಿತೀಯಾರ್ಧದಲ್ಲಿ ಬರುವ ರೊಮ್ಯಾಂಟಿಕ್​ ಹಾಡು ಕೂಡ ಕಥೆಯ ಓಟಕ್ಕೆ ಅಡ್ಡಗಾಲು ಹಾಕಿದಂತಿದೆ. ಲಾಜಿಕಲ್​ ಪ್ರಶ್ನೆಗಳನ್ನೆಲ್ಲ ಬದಿಗಿಟ್ಟು ನೋಡಿದರೆ ‘ಹೊಯ್ಸಳ’ ಇಷ್ಟ ಆಗುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us