AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Madhagaja Movie Review: ವಾರಾಣಸಿಯಿಂದ ಕರುನಾಡಿನವರೆಗೆ ನಿರೀಕ್ಷಿತ ಹಾದಿಯಲ್ಲಿ ‘ಮದಗಜ’ ಮಾಸ್ ಪಯಣ

ನಟ ಶ್ರೀಮುರಳಿ ಹಾಗೂ ನಿರ್ದೇಶಕ ಮಹೇಶ್​ ಕುಮಾರ್​ ಕಾಂಬಿನೇಷನ್​ನಲ್ಲಿ ಬಂದ ಮದಗಜ ಸಿನಿಮಾ ರಿಲೀಸ್​ ಆಗಿದೆ. ಅದ್ದೂರಿಯಾಗಿ ತೆರೆಗೆ ಬಂದ ಈ ಸಿನಿಮಾ ಹೇಗಿದೆ? ಶ್ರೀಮುರಳಿ ನಟನೆ ಹೇಗಿದೆ ಎಂಬುದಕ್ಕೆ ಇಲ್ಲಿದೆ ವಿಮರ್ಶೆ.

Madhagaja Movie Review: ವಾರಾಣಸಿಯಿಂದ ಕರುನಾಡಿನವರೆಗೆ ನಿರೀಕ್ಷಿತ ಹಾದಿಯಲ್ಲಿ ‘ಮದಗಜ’ ಮಾಸ್ ಪಯಣ
ಶ್ರೀಮರಳಿ-ಆಶಿಕಾ
ರಾಜೇಶ್ ದುಗ್ಗುಮನೆ
|

Updated on:Dec 03, 2021 | 5:21 PM

Share

ಸಿನಿಮಾ: ಮದಗಜ

ಪಾತ್ರವರ್ಗ: ಶ್ರೀಮುರಳಿ, ಆಶಿಕಾ ರಂಗನಾಥ್​, ಜಗಪತಿ ಬಾಬು, ಚಿಕ್ಕಣ್ಣ, ಗರುಡ ರಾಮ್​

ನಿರ್ದೇಶನ: ಮಹೇಶ್​ ಕುಮಾರ್​

ನಿರ್ಮಾಣ: ಉಮಾಪತಿ ಶ್ರೀನಿವಾಸ್​

ಸ್ಟಾರ್​: 3/5

ಶಿವಗಢ ಮತ್ತು ಗಜೇಂದ್ರಗಢ ಈ ಎರಡು ಊರಿನ ನಡುವೆ ನದಿಯೊಂದು ಹರಿಯುತ್ತಿರುತ್ತದೆ. ಈ ನದಿಯ ನೀರನ್ನು ಬಿಡದೆ ಶಿವಗಢದವರಿಗೆ ಗಜೇಂದ್ರಗಢದವರು ತೊಂದರೆ ಕೊಡುತ್ತಿರುತ್ತಾರೆ. ಶಿವಗಢದ ಭೈರವ (ಜಗಪತಿ ಬಾಬು) ಊರಿಗೆ ನೀರನ್ನು ಬಿಡಿಸಿಕೊಳ್ಳೋಕೆ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿರುತ್ತಾನೆ. ಅದೆಷ್ಟರ ಮಟ್ಟಿಗೆ ಎಂದರೆ, ಊರಿಗಾಗಿ ಹೋರಾಡುತ್ತಾ ಮಗ ಸೂರ್ಯನನ್ನೇ (ಶ್ರೀಮುರಳಿ) ತ್ಯಾಗ ಮಾಡಿರುತ್ತಾನೆ. ಅಷ್ಟಕ್ಕೂ ಭೈರವನ ಮಗ ಸೂರ್ಯ ವಾರಾಣಸಿ ಸೇರೋದು ಹೇಗೆ? ಎರಡೂ ಊರಿನ ದ್ವೇಷ ಕಡಿಮೆ ಆಗೋದು ಹೇಗೆ? ತಾಯಿ (ದೇವಯಾನಿ) ಮತ್ತು ಊರನ್ನು ಉಳಿಸೋಕೆ ಸೂರ್ಯ ಹೇಗೆ ಬರುತ್ತಾನೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು.

‘ಮದಗಜ’ ಸಿನಿಮಾದಲ್ಲಿ ಸಾಕಷ್ಟು ಅದ್ದೂರಿತನ ಇದೆ. ಪ್ರತಿ ದೃಶ್ಯಗಳಲ್ಲೂ ಒಂದು ವಿಜೃಂಭಣೆ ಇದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಅವರು ದೊಡ್ಡ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದರಿಂದ ಇಡೀ ಸಿನಿಮಾದಲ್ಲಿ ಬರುವ ಪ್ರತಿ ದೃಶ್ಯಗಳು ವಿಜೃಂಭಣೆಯಿಂದ ಕೂಡಿದೆ. ಇದೊಂದು ಪಕ್ಕಾ ಮಾಸ್​, ಎಂಟರ್​​ಟೇನ್​ಮೆಂಟ್​ ಸಿನಿಮಾ. ಹೀಗಾಗಿ, ಮಾಸ್​ ಪ್ರಿಯರಿಗೆ ಈ ಸಿನಿಮಾ ಇಷ್ಟವಾಗಬಹುದು. ಚಿತ್ರದಲ್ಲಿ ಫೈಟ್​ ದೃಶ್ಯಗಳನ್ನು ಅದ್ಭುತವಾಗಿ ಶೂಟ್​ ಮಾಡಲಾಗಿದೆ. ಮಾಸ್​ ದೃಶ್ಯಗಳನ್ನು ಹೆಚ್ಚೆಚ್ಚು ಬೆರೆಸಲಾಗಿದೆ. ಶ್ರೀಮುರಳಿ ಆರಂಭದಿಂದ ಕೊನೇವರೆಗೂ ಪ್ರತಿ ದೃಶ್ಯಗಳಲ್ಲೂ ಮಾಸ್​ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಸೂರ್ಯನಾಗಿ ಅವರು ಮಿಂಚಿದ್ದಾರೆ. ಇಡೀ ಚಿತ್ರದಲ್ಲಿ ರಕ್ತ ಮತ್ತು ರಕ್ತ ಸಂಬಂಧಕ್ಕೆ ಸಾಕಷ್ಟು ಒತ್ತು ನೀಡಲಾಗಿದೆ. ಫೈಟ್​ ಹಾಗೂ ಭಾವನಾತ್ಮಕ ವಿಚಾರಕ್ಕೆ ನಿರ್ದೇಶಕ ಮಹೇಶ್​ ಕುಮಾರ್​ ಸಾಕಷ್ಟು ಒತ್ತು ನೀಡಿದ್ದಾರೆ. ‘ನೀರು ಮತ್ತು ರಕ್ತವನ್ನು ಒಂದಾಗೋಕೆ ಬಿಡುತ್ತೇವೆ. ಆದರೆ, ನೀರು ಹರಿಯೋಕೆ ಬಿಡಲ್ಲ’ ಎನ್ನುವಂತಹ ಡೈಲಾಗ್​ಗಳು ಎರಡು ಹಳ್ಳಿಯ ದ್ವೇಷದ ತೀವ್ರತೆಯನ್ನು ತೋರಿಸುತ್ತದೆ.

ಜಗಪತಿ ಬಾಬು ಪ್ರತಿ ಸಿನಿಮಾದಲ್ಲೂ ವಿಲನ್​ ಆಗಿ ಮಿಂಚುತ್ತಾರೆ.  ಈ ಸಿನಿಮಾದಲ್ಲೂ ಅವರು ಭಿನ್ನ ರೀತಿಯ ವಿಲನ್​ ಗೆಟಪ್​ ತೊಟ್ಟಿದ್ದಾರೆ. ಹಳ್ಳಿಗಾಗಿ ಹೋರಾಡುವ ಭೈರವನಾಗಿ ಮಿಂಚಿದ್ದಾರೆ. ಶ್ರೀಮುರಳಿ ಅಮ್ಮನ ಪಾತ್ರದಲ್ಲಿ ದೇವಯಾನಿ ಕಾಣಿಸಿಕೊಂಡಿದ್ದು, ತಾಯಿ ಮಗನ ಕಾಂಬಿನೇಷನ್​ ವರ್ಕ್​ ಆಗಿದೆ. ಗರುಡ ರಾಮ್​ (ರಾಮಚಂದ್ರ ರಾಜು) ದ್ವಿತೀಯಾರ್ಧದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರಿಗೆ ನೀಡಿದ ರಗಡ್​ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಆಶಿಕಾ ರಂಗನಾಥ್​ ಪಕ್ಕಾ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ. ಅವರ ನಟನೆ ಇಷ್ಟವಾಗುತ್ತದೆ. ಚಿಕ್ಕಣ್ಣ, ಶಿವರಾಜ್​ ಕೆಆರ್​ ಪೇಟೆ, ಧರ್ಮಣ್ಣ ಇದ್ದಷ್ಟು ಹೊತ್ತು ನಗಿಸುತ್ತಾರೆ. ರಂಗಾಯಣ ರಘು ನಗಿಸದೇ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರ್​ ಸಂಗೀತ ಸಿನಿಮಾದ ತೂಕ ಹೆಚ್ಚಿಸಿದೆ. ನವೀನ್​ ಕುಮಾರ್​ ಅವರ ಕ್ಯಾಮೆರಾ ಕೈಚಳಕದಿಂದ ದೃಶ್ಯಗಳು ಅದ್ದೂರಿಯಾಗಿ ಮೂಡಿ ಬಂದಿವೆ. ಈ ಮೊದಲು ರೊಮ್ಯಾಂಟಿಕ್​ ಕಾಮಿಡಿ ಶೈಲಿಯ ‘ಅಯೋಗ್ಯ’ ಸಿನಿಮಾ ಮಾಡಿ ಭೇಷ್​ ಎನಿಸಿಕೊಂಡಿದ್ದವರು ಮಹೇಶ್​ ಕುಮಾರ್​. ಈ ಬಾರಿ, ಅವರು ಆ್ಯಕ್ಷನ್​ ಚಿತ್ರಕ್ಕೆ ಕೈ ಹಾಕಿ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಸಿನಿಮಾದ ಕಥೆಯಲ್ಲಿ ಹೊಸತನ ಇಲ್ಲ. ಎರಡು ಹಳ್ಳಿಗಳ ದ್ವೇಷ, ಹಳ್ಳಿಯನ್ನು ಕಾಪಾಡೋಕೆ ಹೀರೋ ಬರೋದು ಈ ಮೊದಲು ಹಲವು ಸಿನಿಮಾಗಳಲ್ಲಿ ಬಂದು ಹೋಗಿದೆ. ಅದೇ ಕಥೆಯನ್ನು ಈ ಬಾರಿ ಅದ್ದೂರಿಯಾಗಿ ಹೇಳಲಾಗಿದೆ. ಹೀರೋ ಸೂರ್ಯ ಹುಟ್ಟಿ ಬೆಳೆದಿದ್ದು ವಾರಾಣಸಿಯಲ್ಲಿ. ಆತನಿಗೆ ಕನ್ನಡ ಬರುತ್ತದೆ. ಕರ್ನಾಟಕಕ್ಕೆ ಬಂದಾಗಲೂ ಅನೇಕ ಕಡೆಗಳಲ್ಲಿ ಆತ ಅರ್ಧಮರ್ಧ ಹಿಂದಿ ಬಳಕೆ ಮಾಡುತ್ತಾನೆ. ಇದು ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡಬಹುದು. ಈ ಬಗ್ಗೆ ನಿರ್ದೇಶಕರು ಗಮನ ಹರಿಸಬೇಕಿತ್ತು. ಚಿತ್ರಕಥೆಯನ್ನು ಮತ್ತಷ್ಟು ಗಟ್ಟಿ ಹೆಣೆಯಬಹುದಿತ್ತು. ಸಿನಿಮಾದ ಕಥೆ ಸಾಗುವ ದಾರಿಯನ್ನು ಪ್ರೇಕ್ಷಕ ಸುಲಭವಾಗಿ ಊಹಿಸಿ ಬಿಡುತ್ತಾನೆ. ಹೀಗಾಗಿ, ಅಷ್ಟಾಗಿ ಥ್ರಿಲ್ ಕೊಡದೆ ಇರಬಹುದು. ಆ ಬಗ್ಗೆಯೂ ಗಮನ ಕೊಟ್ಟಿದ್ದರೆ ಚಿತ್ರದ ಅಂದ ಹೆಚ್ಚುತ್ತಿತ್ತು.

ಇದನ್ನೂ ಓದಿ: ಶ್ರೀಮುರಳಿ ನಟನೆಯ ‘ಮದಗಜ’ ಚಿತ್ರದ ಮೊದಲಾರ್ಧ ಹೇಗಿದೆ? ಇಲ್ಲಿದೆ ರಿಪೋರ್ಟ್​

Published On - 2:19 pm, Fri, 3 December 21