‘ನನ್ನ ಜಾತಿ ಯಾವುದೆಂದು ಗೊತ್ತೇ’; ಸಚಿವ ಗಡ್ಕರಿಗೆ ನಟ ನಾನಾ ಪಾಟೇಕರ್ ನೇರ ಪ್ರಶ್ನೆ
ಬಾಲಿವುಡ್ ನಟ ನಾನಾ ಪಾಟೇಕರ್ ನಾಗ್ಪುರದಲ್ಲಿ ಜಾತಿ ಮತ್ತು ಧರ್ಮದ ರಾಜಕಾರಣದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ಮಾನವ ಜನ್ಮವೇ ನಿನ್ನ ಜಾತಿ, ಮಾನವೀಯತೆಯೇ ನಿನ್ನ ಧರ್ಮ' ಎಂಬ ತಮ್ಮ ತಾಯಿಯ ಮಾತನ್ನು ಸ್ಮರಿಸಿ, ಸಮಾಜದಲ್ಲಿ ಜಾತಿವಾದ ಕೊನೆಗೊಳಿಸಲು ಗುಣಮಟ್ಟದ ಶಿಕ್ಷಣವೇ ಮಾರ್ಗ ಎಂದರು. ನಿತಿನ್ ಗಡ್ಕರಿ ಅವರನ್ನು ಶ್ಲಾಘಿಸಿದ ಅವರು, ನಟನೆಯಿಂದ ನಿವೃತ್ತಿಯಾಗುವ ಸುಳಿವು ನೀಡಿದರು.

ಬಾಲಿವುಡ್ನ ಹಿರಿಯ ನಟ ನಾನಾ ಪಾಟೇಕರ್ (Nana Patekar) ತಮ್ಮ ನೇರ ನಡೆ-ನುಡಿಗೆ ಹೆಸರುವಾಸಿ. ಇತ್ತೀಚೆಗೆ ನಾಗ್ಪುರದ ರೇಷ್ಮಿಬಾಗ್ನಲ್ಲಿ ನಡೆದ ‘ಜಲಕ್ರಾಂತಿ’ ಸಮಾವೇಶದಲ್ಲಿ ಅವರು ಸಮಾಜದಲ್ಲಿ ಹೆಚ್ಚುತ್ತಿರುವ ಜಾತಿ ಮತ್ತು ಧರ್ಮದ ರಾಜಕಾರಣದ ವಿರುದ್ಧ ತೀವ್ರವಾಗಿ ಗುಡುಗಿದ್ದಾರೆ. ವೇದಿಕೆಯ ಮೇಲಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ, ‘ಗಡ್ಕರಿ ಸಾಹೇಬರೇ, ನನ್ನ ಜಾತಿ ಯಾವುದು ಎಂದು ನಿಮಗೆ ಗೊತ್ತೇ?’ ಎಂದು ನೇರವಾಗಿ ಪ್ರಶ್ನಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ನಾನಾ ಪಾಟೇಕರ್, ‘ನಾನು ಯಾರಿಗೂ ನನ್ನ ಜಾತಿಯನ್ನು ಹೇಳಿಲ್ಲ, ಅದರ ಅಗತ್ಯವೂ ನನಗಿಲ್ಲ. ‘ಮಾನವ ಜನ್ಮವೇ ನಿನ್ನ ಜಾತಿ, ಮಾನವೀಯತೆಯೇ ನಿನ್ನ ಧರ್ಮ’ ಎಂದು ನನ್ನ ತಾಯಿ ನನಗೆ ಬಾಲ್ಯದಲ್ಲೇ ಕಲಿಸಿದ್ದರು. ಸಮಾಜದಲ್ಲಿನ ಈ ಜಾತಿ ಪದ್ಧತಿಯು ಕೇವಲ ಜ್ಞಾನ ಮತ್ತು ಗುಣಮಟ್ಟದ ಶಿಕ್ಷಣದಿಂದ ಮಾತ್ರ ಕೊನೆಗೊಳ್ಳಲು ಸಾಧ್ಯ’ ಎಂದು ಭಾಷಣದಲ್ಲಿ ಮಾರ್ಮಿಕವಾಗಿ ನುಡಿದರು.
ಇಂದು ಸಮಾಜ ಮತ್ತು ರಾಜಕೀಯದಲ್ಲಿ ಜಾತಿವಾದ ಹೆಚ್ಚುತ್ತಿರುವುದಕ್ಕೆ ನಾನಾ ಪಾಟೇಕರ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ‘ಒಬ್ಬ ವ್ಯಕ್ತಿಯ ಗುರುತನ್ನು ಆತನ ಗುಣ ಅಥವಾ ಸಾಧನೆಗಳಿಂದ ಅಳೆಯದೆ, ಆತ ಹುಟ್ಟಿದ ಜಾತಿಯಿಂದ ನಿರ್ಧರಿಸುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ನಾವೆಲ್ಲರೂ ಮನುಷ್ಯರಾಗಿ ಒಂದಾಗದಿದ್ದರೆ ಈ ಜಾತಿವಾದದ ಗೋಡೆಗಳನ್ನು ಉರುಳಿಸಲು ಸಾಧ್ಯವಿಲ್ಲ’ ಎಂದು ಕಟುವಾಗಿ ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನಾನಾ ಪಾಟೇಕರ್ ಮುಕ್ತಕಂಠದಿಂದ ಶ್ಲಾಘಿಸಿದರು. ರಾಜಕೀಯದಲ್ಲಿ ನಿತಿನ್ ಗಡ್ಕರಿ ಅವರು ಅಜಾತಶತ್ರು ಎಂದು ಬಣ್ಣಿಸಿದ ನಟ, ನೀರಿನ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ‘ನಾಮ್ ಫೌಂಡೇಶನ್’ ಮತ್ತು ಆಮಿರ್ ಖಾನ್ ಅವರ ‘ಪಾನಿ ಫೌಂಡೇಶನ್’ ಕಾರ್ಯಗಳನ್ನು ಶ್ಲಾಘಿಸಿದರು.
ಇದನ್ನೂ ಓದಿ: ‘ನನ್ನ ಜೀವನ, ನನ್ನದೇ ಆದ ರೀತಿಯಲ್ಲಿ ಬದುಕಲು ಬಿಡಿ’; ನಟನೆಯಿಂದ ನಿವೃತ್ತಿ ಘೋಷಿಸಿದ ನಾನಾ ಪಾಟೇಕರ್
ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ, ನಾನಾ ಪಾಟೇಕರ್ ಇತ್ತೀಚೆಗೆ ನಟನೆಗೆ ವಿದಾಯ ಹೇಳುವ ಸುಳಿವು ನೀಡಿ ಸುದ್ದಿಯಾಗಿದ್ದರು. ಇತ್ತೀಚಿನ ತಮ್ಮ ಸಿನಿಮಾಗಳ ಪ್ರಚಾರದ ವೇಳೆ ಮಾತನಾಡಿದ್ದ ಅವರು, ತಮಗೆ ಈಗ ವಯಸ್ಸಾಗುತ್ತಿರುವುದರಿಂದ ಮತ್ತು ಚಿತ್ರರಂಗದಲ್ಲಿ ಹೊಸ ತಲೆಮಾರಿನ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗಬೇಕಿರುವುದರಿಂದ ತಾವು ಶೀಘ್ರದಲ್ಲೇ ನಟನೆಯಿಂದ ಸಂಪೂರ್ಣವಾಗಿ ದೂರ ಸರಿಯುವುದಾಗಿ ಹೇಳಿ ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





