Akhanda: ಅಪರೂಪದ ದಾಖಲೆ ಬರೆದ ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ’; ಏನದು?

Nandamuri Balakrishna: ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ’ ವಿಮರ್ಶಕರು ಹಾಗೂ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಪಡೆದು ಬಾಕ್ಸಾಫೀಸ್​​ನಲ್ಲಿ ಮುನ್ನುಗ್ಗುತ್ತಿದೆ. ಅಲ್ಲದೇ ರಾಮ್ ಚರಣ್ ನಟನೆಯ ಚಿತ್ರವೊಂದು ರಚಿಸಿದ್ದ 5 ವರ್ಷ ಹಳೆಯ ದಾಖಲೆಯೊಂದನ್ನು ಮುರಿದಿದೆ.

Akhanda: ಅಪರೂಪದ ದಾಖಲೆ ಬರೆದ ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ’; ಏನದು?
‘ಅಖಂಡ’ ಸಿನಿಮಾ ಪೋಸ್ಟರ್​
Edited By:

Updated on: Dec 15, 2021 | 7:20 AM

ಟಾಲಿವುಡ್​ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ ‘ಅಖಂಡ’ (Akhanda) ಡಿಸೆಂಬರ್ 2ರಂದು ತೆರೆ ಕಂಡಿದೆ. ಈ ಆಕ್ಷನ್ ಚಿತ್ರ ಬ್ಲಾಕ್​ಬಸ್ಟರ್ ಹಿಟ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ. ಇದಲ್ಲದೇ ಚಿತ್ರವು 5 ವರ್ಷ ಹಳೆಯ ದಾಖಲೆಯೊಂದನ್ನು ಮುರಿದು, ಅಪರೂಪದ ಸಾಧನೆ ಮಾಡಿದೆ. ಬೋಯಪಟಿ ಶ್ರೀನು ನಿರ್ದೇಶನದ ‘ಅಖಂಡ’ ಡಿಸೆಂಬರ್​​ನಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ದಾಖಲೆ ಬರೆದಿದೆ. ಈ ಹಿಂದೆ 2016ರಲ್ಲಿ ತೆರೆಕಂಡಿದ್ದ ರಾಮ್​ ಚರಣ್ (Ram Charan) ನಟನೆಯ ‘ಧ್ರುವ’ (Dhruva) ಬಾಕ್ಸಾಫೀಸ್​ನಲ್ಲಿ ₹ 58 ಕೋಟಿ ಬಾಚಿಕೊಂಡಿತ್ತು. ಅಲ್ಲದೇ ಡಿಸೆಂಬರ್​ನಲ್ಲಿ ಅತ್ಯಂತ ಹೆಚ್ಚು ಗಳಿಸಿದ ಚಿತ್ರ ಎಂದು ದಾಖಲೆ ಬರೆದಿತ್ತು. ಆದರೆ ಇದೀಗ ಬಾಲಕೃಷ್ಣ ನಟನೆಯ ಚಿತ್ರ ಆ ದಾಖಲೆಯನ್ನು ಮುರಿದಿದ್ದು, ನಂಬರ್ 1 ಪಟ್ಟಕ್ಕೇರಿದೆ.

‘ಅಖಂಡ’ ಚಿತ್ರ ಇದುವರೆಗೆ ಬರೋಬ್ಬರಿ ₹ 60 ಕೋಟಿ ಗಳಿಕೆ ಮಾಡಿದೆ. ಅಚ್ಚರಿಯ ವಿಚಾರವೆಂದರೆ ಹೆಚ್ಚುವರಿ ಪ್ರದರ್ಶನ ಅಥವಾ ವಿಶೇಷ ಪ್ರದರ್ಶನಗಳಿಲ್ಲದೇ ಕೇವಲ ಮಾಮೂಲಿ ಪ್ರದರ್ಶನಗಳಲ್ಲಿಯೇ ಈ ಚಿತ್ರ ಇಷ್ಟು ಗಳಿಕೆ ಮಾಡಿದೆ. ‘ಅಖಂಡ’ದಲ್ಲಿ ಬಾಲಕೃಷ್ಣ ಅಘೋರನಾಗಿ ಕಾಣಿಸಿಕೊಂಡಿದ್ದಾರೆ. ವಿಮರ್ಶಕರೂ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದು, ಬಾಲಕೃಷ್ಣ ಅಭಿನಯವನ್ನು ಹೊಗಳಿದ್ದಾರೆ. ಅವರಲ್ಲದೇ ಬೇರೆ ಯಾವ ನಟನೂ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವೇ ಇಲ್ಲ ಎನ್ನುವುದು ಅಭಿಮಾನಿಗಳ ಅಂಬೋಣ.

ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಆಂಧ್ರಪ್ರದೇಶದಲ್ಲಿ ಗಳಿಕೆ ₹ 60 ಕೋಟಿ ದಾಟಿದ್ದರೆ, ಜಗತ್ತಿನ ಒಟ್ಟಾರೆ ಗಳಿಕೆ ₹ 100 ಕೋಟಿ ದಾಟಿದೆ ಎನ್ನುತ್ತಿದ್ದಾರೆ ಬಾಕ್ಸಾಫೀಸ್ ಪಂಡಿತರು. ‘ಅಖಂಡ’ ವಿದೇಶದಲ್ಲೂ ಸೇರಿದಂತೆ ₹ 100 ಕೋಟಿ ಕ್ಲಬ್​ಗೆ ಸೇರಿರುವುದು ಬಾಲಕೃಷ್ಣ ನಟನೆಯ ಮೊದಲ ಚಿತ್ರವಾಗಿದೆ. ಅಲ್ಲದೇ ಕೊರೊನಾ ಎರಡನೇ ಅಲೆಯ ನಂತರ ತೆರೆಕಂಡ ತೆಲುಗು ಚಿತ್ರಗಳಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ದಾಖಲೆಯೂ ‘ಅಖಂಡ’ ಪಾಲಾಗಿದೆ. ‘ಅಖಂಡ’ದಲ್ಲಿ ಪ್ರಗ್ಯಾ ಜೈಸ್ವಾಲ್, ಜಗಪತಿ ಬಾಬು, ಶ್ರೀಕಾಂತ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ತಮನ್ ಸಂಗೀತ ನೀಡಿದ್ದಾರೆ.

5 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದ ‘ಅಖಂಡ’ ದಾಖಲೆ ತಿಂಗಳೊಳಗೆ ಎರಡನೇ ಸ್ಥಾನಕ್ಕೆ ಜಾರಬಹುದು ಎಂಬ ಮಾತು ಟಾಲಿವುಡ್ ಅಂಗಳದಿಂದ ಕೇಳಿಬರುತ್ತಿದೆ. ಇದಕ್ಕೆ ಕಾರಣ ಅಲ್ಲು ಅರ್ಜುನ್ (Allu Arjun) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ: ದಿ ರೈಸ್’ (Pushpa: The Rise) ಚಿತ್ರ. ಬಹುನಿರೀಕ್ಷಿತ ಈ ಚಿತ್ರದಲ್ಲಿ ದಕ್ಷಿಣದ ಖ್ಯಾತ ಕಲಾವಿದರು ಬಣ್ಣಹಚ್ಚಿದ್ದು, ಡಿಸೆಂಬರ್ 17ರಂದು ತೆರೆಕಾಣಲಿದೆ.

ಇದನ್ನೂ ಓದಿ:

Kangana Ranaut: ಅಂಕಿತಾ- ವಿಕ್ಕಿ ಕಲ್ಯಾಣ; ಸಾಂಪ್ರದಾಯಿಕ ದಿರಿಸಿನಲ್ಲಿ ಕಂಗೊಳಿಸಿದ ಕಂಗನಾ- ಚಿತ್ರಗಳನ್ನು ನೋಡಿ

ಸಮಂತಾ ಹಾಡಿನಲ್ಲಿ ಗಂಡಸರಿಗೆ ಅವಮಾನ; ‘ಪುಷ್ಪ’ ಚಿತ್ರದ ವಿರುದ್ಧ ದೂರು ನೀಡಿದ ಪುರುಷರ ಸಂಘಟನೆ