ತಮಿಳುನಾಡು ಸರ್ಕಾರದಿಂದಲೇ ಒಟಿಟಿ ಆರಂಭಿಸಲು ಸಿಎಂ ವಿಜಯ್‌ಗೆ ವಿಜಯ್ ಸೇತುಪತಿ ಮನವಿ

ಸ್ಥಳೀಯ ಭಾಷೆಗಳ ಚಿತ್ರರಂಗಕ್ಕೆ ಅನುಕೂಲ ಆಗಲು ಸರ್ಕಾರವೇ ಸ್ವಂತ ಒಟಿಟಿ ಆರಂಭಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ನಟ ವಿಜಯ್ ಸೇತುಪತಿ ಅವರು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಮೊದಲು ಹಿರಿಯ ನಟ ಕಮಲ್ ಹಾಸನ್ ಕೂಡ ಇದೇ ಮನವಿ ಮುಂದಿಟ್ಟಿದ್ದರು.

ತಮಿಳುನಾಡು ಸರ್ಕಾರದಿಂದಲೇ ಒಟಿಟಿ ಆರಂಭಿಸಲು ಸಿಎಂ ವಿಜಯ್‌ಗೆ ವಿಜಯ್ ಸೇತುಪತಿ ಮನವಿ
Vijay Sethupathi, Cm Vijay

Updated on: May 25, 2026 | 2:46 PM

ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಇತ್ತೀಚೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Vijay) ಅವರಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಪ್ರಾದೇಶಿಕ ಸಿನಿಮಾಗಳ ಪ್ರೋತ್ಸಾಹಕ್ಕಾಗಿ ತಮಿಳುನಾಡು ಸರ್ಕಾರವೇ ಸ್ವಂತ ಒಟಿಟಿ (OTT) ಪ್ಲಾಟ್‌ಫಾರ್ಮ್ ಪ್ರಾರಂಭಿಸುವ ಬಗ್ಗೆ ಯೋಚಿಸಬೇಕು ಎಂದು ಅವರು ವಿನಂತಿಸಿದ್ದಾರೆ. ವಿಜಯ್ ಸೇತುಪತಿ (Vijay Sethupathi) ಅವರ ಈ ಹೇಳಿಕೆಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಚಿತ್ರರಂಗದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

ಇತ್ತೀಚಿನ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಬೆಳವಣಿಗೆಯ ಬಗ್ಗೆ ಮಾತನಾಡಿದ ಸೇತುಪತಿ, ಪ್ರಸ್ತುತ ಹಲವು ಒಟಿಟಿ ಸಂಸ್ಥೆಗಳು ಮಂದಗತಿಯನ್ನು ಎದುರಿಸುತ್ತಿವೆ. ಮೊದಲಿನಂತೆ ಚಂದಾದಾರರ ಸಂಖ್ಯೆ ಹೆಚ್ಚುತ್ತಿಲ್ಲ ಮತ್ತು ದೊಡ್ಡ ಮೊತ್ತದ ಹಣವನ್ನು ಕಂಟೆಂಟ್‌ಗಳ ಮೇಲೆ ಹೂಡಿಕೆ ಮಾಡಲು ಕಂಪನಿಗಳು ಹಿಂಜರಿಯುತ್ತಿವೆ. ಪ್ರಾದೇಶಿಕ ಚಿತ್ರೋದ್ಯಮ ಮತ್ತು ಸರ್ಕಾರಗಳು ತಮ್ಮದೇ ಆದ ಸ್ವಂತ ಡಿಜಿಟಲ್ ವೇದಿಕೆಯನ್ನು ಹೊಂದಲು ಇದುವೇ ಸರಿಯಾದ ಸಮಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಈ ಹಿಂದೆ ಹಿರಿಯ ನಟ ಕಮಲ್ ಹಾಸನ್ ಅವರು ತಮಿಳು ಸಿನಿಮಾಗಳಿಗಾಗಿಯೇ ಪ್ರತ್ಯೇಕ ಒಟಿಟಿ ವೇದಿಕೆ ಇರಬೇಕು ಎಂದು ಹೇಳಿದ್ದನ್ನು ವಿಜಯ್ ಸೇತುಪತಿ ನೆನಪಿಸಿಕೊಂಡರು. ಕಮಲ್ ಹಾಸನ್ ಅವರ ಆಲೋಚನೆಯನ್ನು ಬೆಂಬಲಿಸಿದ ಅವರು, ತಮಿಳುನಾಡು ಸರ್ಕಾರದ ಒಡೆತನದ ಒಟಿಟಿ ವೇದಿಕೆಯು ಸ್ಥಳೀಯ ಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ತಂತ್ರಜ್ಞರಿಗೆ ಆರ್ಥಿಕವಾಗಿ ಹಾಗೂ ವೃತ್ತಿಪರವಾಗಿ ಹೊಸ ಆಸರೆಯಾಗಲಿದೆ ಎಂದು ಹೇಳಿದರು.

ದೊಡ್ಡ ದೊಡ್ಡ ಒಟಿಟಿ ಸಂಸ್ಥೆಗಳಲ್ಲಿ ಸೂಕ್ತ ಪ್ರದರ್ಶನ ಕಾಣಲು ಹೆಣಗಾಡುವ ಸಣ್ಣ ಬಜೆಟ್‌ನ ಸಿನಿಮಾಗಳಿಗೆ ಮತ್ತು ಪ್ರಾದೇಶಿಕ ಕಥೆಗಳಿಗೆ ಇಂತಹ ಸರ್ಕಾರಿ ಒಟಿಟಿಗಳು ಹೊಸ ಜೀವ ನೀಡಬಲ್ಲವು. ಅಷ್ಟೇ ಅಲ್ಲದೆ, ಸಿನಿಮಾ ಮತ್ತು ಡಿಜಿಟಲ್ ಮಾಧ್ಯಮಗಳ ಮೂಲಕ ಸ್ಥಳೀಯ ಸಂಸ್ಕೃತಿ ಹಾಗೂ ಭಾಷೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಇದು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ‘ನಾನು ಅಷ್ಟು ಚೀಪ್ ಅಲ್ಲ, ಸಿಎಂ ವಿಜಯ್ ಮೇಲೆ ಅಸೂಯೆ ಇಲ್ಲ’: ರಜನಿಕಾಂತ್ ಸ್ಪಷ್ಟನೆ

ಈ ಹಿಂದೆ ಲೋಕೇಶ್ ಕನಕರಾಜ್ ನಿರ್ದೇಶನದ ಸೂಪರ್ ಹಿಟ್ ‘ಮಾಸ್ಟರ್’ ಸಿನಿಮಾದಲ್ಲಿ ವಿಜಯ್ ಮತ್ತು ವಿಜಯ್ ಸೇತುಪತಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಇವರಿಬ್ಬರ ಮುಖಾಮುಖಿಯನ್ನು ಪ್ರೇಕ್ಷಕರು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಇದೀಗ ವಿಜಯ್ ಸೇತುಪತಿ ಅವರು ತಮ್ಮ ಮಾಜಿ ಸಹನಟ ಹಾಗೂ ಮುಖ್ಯಮಂತ್ರಿ ವಿಜಯ್‌ಗೆ ಒಟಿಟಿ ಬಗ್ಗೆ ಸಲಹೆ ನೀಡಿರುವುದರಿಂದ ಈ ಸುದ್ದಿ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us