ನಿರ್ಮಾಪಕರ​ ಹೊಟ್ಟೆ ಮೇಲೆ ಹೊಡೆದ ಕಂಗನಾ; ಒಟಿಟಿಯಲ್ಲೂ ‘ಧಾಕಡ್​’ ಚಿತ್ರಕ್ಕೆ ಬೇಡಿಕೆ ಇಲ್ಲ

| Updated By: ಮದನ್​ ಕುಮಾರ್​

Updated on: May 28, 2022 | 12:58 PM

Kangana Ranaut | Dhaakad: ಕಂಗನಾ ರಣಾವತ್​ ಅವರು ದುರಾಸೆಯಿಂದ ‘ಧಾಕಡ್​’ ರಿಲೀಸ್​ಗೂ ಮುನ್ನವೇ ಒಟಿಟಿ ಡೀಲ್​ ತಡೆದಿದ್ದರಿಂದ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಅತ್ತ ಬಾಕ್ಸ್​ ಆಫೀಸ್​ನಲ್ಲೂ ಹಣ ಇಲ್ಲ, ಇತ್ತ ಒಟಿಟಿಯಲ್ಲೂ ಬೇಡಿಕೆ ಇಲ್ಲ ಎಂಬಂತಾಗಿದೆ.

ನಿರ್ಮಾಪಕರ​ ಹೊಟ್ಟೆ ಮೇಲೆ ಹೊಡೆದ ಕಂಗನಾ; ಒಟಿಟಿಯಲ್ಲೂ ‘ಧಾಕಡ್​’ ಚಿತ್ರಕ್ಕೆ ಬೇಡಿಕೆ ಇಲ್ಲ
ಕಂಗನಾ ರಣಾವತ್
Follow us on

ನಟಿ ಕಂಗನಾ ರಣಾವತ್ (Kangana Ranaut)​ ಅವರು ತೀವ್ರವಾಗಿ ಸೋತಿದ್ದಾರೆ. ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ಅವರಿಗೆ ಮುಖಭಂಗ ಆಗಿದೆ. ಕಂಗನಾ ರಣಾವತ್​ ನಟನೆಯ ‘ಧಾಕಡ್​’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಅತಿ ಕಳಪೆ ಎಂಬ ಕುಖ್ಯಾತಿಗೆ ಒಳಗಾಗಿದೆ. ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾ ಚಿಲ್ಲರೆ ಕಾಸು ಸಂಪಾದನೆ ಮಾಡುವಷ್ಟಕ್ಕೇ ಸುಸ್ತು ಹೊಡೆದಿದೆ. ಕಂಗನಾ ರಣಾವತ್​ ಅವರನ್ನು ನಂಬಿ ಹಣ ಹೂಡಿದ್ದ ನಿರ್ಮಾಪಕರು ಈಗ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಕೊನೇ ಪಕ್ಷ ಒಟಿಟಿ (OTT) ಪ್ಲಾಟ್​ಫಾರ್ಮ್​ನಲ್ಲಾದರೂ ಸಿನಿಮಾವನ್ನು ಮಾರಾಟ ಮಾಡಿ ನಷ್ಟ ಭರಿಸಿಕೊಳ್ಳೋಣ ಎಂದುಕೊಂಡಿದ್ದ ನಿರ್ಮಾಪಕರಿಗೆ ಈಗ ಅದು ಕೂಡ ಸಾಧ್ಯವಾಗುತ್ತಿಲ್ಲ. ಕಂಗನಾ ರಣಾವತ್​ ಅವರು ಅತಿಯಾದ ಆತ್ಮವಿಶ್ವಾಸ ಮತ್ತು ದುರಾಸೆಯಿಂದ ಇಡೀ ತಂಡಕ್ಕೆ ತೊಂದರೆ ಆಗಿದೆ. ಒಟಿಟಿಯಲ್ಲಿ ಕೂಡ ಈ ಚಿತ್ರವನ್ನು ಕೊಂಡುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಮುಂದೇನು ಮಾಡಬೇಕು ಎಂದು ತೋಚದೇ ‘ಧಾಕಡ್​’ (Dhaakad) ನಿರ್ಮಾಪಕರು ಚಿಂತೆ ಮಾಡುತ್ತಿದ್ದಾರೆ. ಬೇರೆ ನಟ-ನಟಿಯರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದ ಕಂಗನಾ ಅವರನ್ನೇ ಜನರು ಆಡಿಕೊಂಡು ನಗುವಂತಹ ಸ್ಥಿತಿ ಬಂದಿದೆ.

‘ಧಾಕಡ್​’ ಸಿನಿಮಾದಲ್ಲಿ ಕಂಗನಾ ರಣಾವತ್​ ಅವರು ಆ್ಯಕ್ಷನ್​ ಹೀರೋ ಅವತಾರ ತಾಳಿದ್ದಾರೆ. ಈ ಚಿತ್ರದ ಟ್ರೇಲರ್​ ರಿಲೀಸ್​ ಆದ ಬಳಿಕ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿತ್ತು. ಅದ್ದೂರಿ ಬಜೆಟ್​, ಗುಣಮಟ್ಟದ ಮೇಕಿಂಗ್​ ನೋಡಿ ಎಲ್ಲರೂ ಕಣ್ಣರಳಿಸಿದ್ದರು. ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳನ್ನು ಕೊಂಡುಕೊಳ್ಳಲು ಕೆಲವು ಸಂಸ್ಥೆಗಳು ಆಸಕ್ತಿ ತೋರಿಸಿದ್ದವು. ಆದರೆ ಆಗ ವಹಿವಾಟು ನಡೆಸಲು ಕಂಗನಾ ಬಿಟ್ಟಿರಲಿಲ್ಲ ಎನ್ನುತ್ತಿವೆ ಮೂಲಗಳು.

ಇದನ್ನೂ ಓದಿ: Dhaakad Collection: ‘ಧಾಕಡ್’​ ಡಿಸಾಸ್ಟರ್; ಕಂಗನಾ ನಂಬಿ ನೂರಾರು ಕೋಟಿ ರೂಪಾಯಿ ಲಾಸ್​ ಮಾಡಿಕೊಂಡ ನಿರ್ಮಾಪಕರು ಕಂಗಾಲು

ಇದನ್ನೂ ಓದಿ
ಕಂಗನಾ ನಟನೆಯ ‘ಧಾಕಡ್​’ ಚಿತ್ರ ನೋಡಲು ಒಬ್ಬರೂ ಬರಲಿಲ್ಲ; ಹಲವು ಕಡೆಗಳಲ್ಲಿ ಶೋ ಕ್ಯಾನ್ಸಲ್​
ದೀಪಿಕಾ, ಪ್ರಿಯಾಂಕಾ ರೀತಿ ಹಾಲಿವುಡ್​ಗೆ ಹೋಗ್ತಾರಾ ಕಂಗನಾ? ಖಡಕ್​ ಉತ್ತರ ನೀಡಿದ ‘ಧಾಕಡ್​’ ನಟಿ
‘ಧಾಕಡ್​’ ರಿಲೀಸ್​ಗೂ ಮುನ್ನ ತಿರುಮಲಕ್ಕೆ ಬಂದು ವೆಂಕಟೇಶ್ವರನ ದರ್ಶನ ಪಡೆದ ಕಂಗನಾ ರಣಾವತ್​
ಕಂಗನಾ ರಣಾವತ್​ ಯಾಕಿನ್ನೂ ಮದುವೆ ಆಗಿಲ್ಲ? ಅದಕ್ಕೆ ಕಾರಣ ಆಗಿದ್ದು ಒಂದೇ ಒಂದು ಗಾಸಿಪ್​; ಏನದು?

‘ಧಾಕಡ್​’ ಸಿನಿಮಾದ ಆದಾಯದಲ್ಲಿ ಕಂಗನಾ ರಣಾವತ್​ ಅವರಿಗೆ ಪಾಲು ಸೇರುತ್ತದೆ. ಚಿತ್ರ ರಿಲೀಸ್​ ಆಗುವುದಕ್ಕಿಂತ ಮುಂಚೆ ಒಟಿಟಿ ಡೀಲ್​ ಮುಗಿಸಿದರೆ ಕಡಿಮೆ ಹಣ ಸಿಗುತ್ತದೆ ಎಂದು ಕಂಗನಾ ಭಾವಿಸಿದ್ದರು. ಸಿನಿಮಾ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್​ ಹಿಟ್​ ಆಗುತ್ತದೆ ಎಂಬುದು ಅವರ ನಿರೀಕ್ಷೆ ಆಗಿತ್ತು. ಚಿತ್ರಮಂದಿರದಲ್ಲಿ ಭರ್ಜರಿಯಾಗಿ ಪ್ರದರ್ಶನ ಕಂಡ ಬಳಿಕ ಒಟಿಟಿ ಹಕ್ಕುಗಳಿಗೆ ಭಾರಿ ಬೇಡಿಕೆ ಬರುತ್ತದೆ. ಆಗ ತಮಗೆ ಹೆಚ್ಚು ಪಾಲು ಸಿಗುತ್ತದೆ ಎಂದು ಅವರು ನಿರೀಕ್ಷಿಸಿದ್ದರು. ಹಾಗಾಗಿ ರಿಲೀಸ್​ಗೂ ಮುನ್ನವೇ ಒಟಿಟಿ ಡೀಲ್ ಮಾಡದಂತೆ ನಿರ್ಮಾಪಕರನ್ನು ಕಂಗನಾ ತಡೆದಿದ್ದರು. ಆದರೆ ಈಗ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಯಾರೂ ಕೂಡ ಈ ಚಿತ್ರವನ್ನು ಕೊಂಡುಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ ಎಂದು ಅನೇಕ ಕಡೆಗಳಲ್ಲಿ ವರದಿ ಆಗಿದೆ.

ಇದನ್ನೂ ಓದಿ: Dhaakad BO collection: 8ನೇ ದಿನ ಸೇಲ್ ಆಗಿದ್ದು ಕೇವಲ 20 ಟಿಕೆಟ್​, ಗಳಿಸಿದ್ದು 4,420 ರೂ; ಇದು ಕಂಗನಾ ಚಿತ್ರದ ದುಸ್ಥಿತಿ

ಕಂಗನಾ ಅತಿಯಾದ ಆತ್ಮವಿಶ್ವಾಸ ಮತ್ತು ದುರಾಸೆಯಿಂದಾಗಿ ‘ಧಾಕಡ್​’ ರಿಲೀಸ್​ಗೂ ಮುನ್ನವೇ ಒಟಿಟಿ ಡೀಲ್​ ತಡೆದಿದ್ದರಿಂದ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಅತ್ತ ಬಾಕ್ಸ್​ ಆಫೀಸ್​ನಲ್ಲೂ ಹಣ ಇಲ್ಲ, ಇತ್ತ ಒಟಿಟಿಯಲ್ಲೂ ಬೇಡಿಕೆ ಇಲ್ಲ. ಈ ರೀತಿ ದುಸ್ಥಿತಿಗೆ ಕಾರಣವಾದ ಕಂಗನಾ ರಣಾವತ್​ ಅವರನ್ನು ಚಿತ್ರತಂಡದವರು ಬಹಿರಂಗವಾಗಿ ದೂಷಿಸುವುದೊಂದೇ ಬಾಕಿ ಉಳಿದಿದೆ. ಬಿಡುಗಡೆಯಾಗಿ 8 ದಿನ ಕಳೆದರೂ ಈ ಸಿನಿಮಾದ ಒಟ್ಟು ಕಲೆಕ್ಷನ್​ 3 ಕೋಟಿ ರೂಪಾಯಿ ದಾಟಿಲ್ಲ. ಅನೇಕ ಕಡೆಗಳಲ್ಲಿ ಪ್ರೇಕ್ಷಕರ ಕೊರತೆಯಿಂದ ಎರಡನೇ ದಿನವೇ ಶೋ ಕ್ಯಾನ್ಸಲ್​ ಮಾಡಲಾಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.