‘ರಾಧೆ ಶ್ಯಾಮ್​’ ಸೋಲಿಗೆ 2 ಮುಖ್ಯ ಕಾರಣ ತಿಳಿಸಿದ ಪ್ರಭಾಸ್​; ಪ್ರೇಕ್ಷಕರು ಈ ನೆಪವನ್ನೆಲ್ಲ ಒಪ್ಪುತ್ತಾರಾ?

| Updated By: ಮದನ್​ ಕುಮಾರ್​

Updated on: Apr 19, 2022 | 9:15 AM

Prabhas | Radhe Shyam: ನಟ ಪ್ರಭಾಸ್​ ಅವರ ವೃತ್ತಿಜೀವನ ಈಗ ಸ್ವಲ್ಪ ಹಳಿ ತಪ್ಪಿದೆ. ‘ರಾಧೆ ಶ್ಯಾಮ್​’ ಚಿತ್ರವು ಜನರ ನಿರೀಕ್ಷೆಯ ಮಟ್ಟ ತಲುಪಲು ವಿಫಲ ಆಗಿದ್ದೆಲ್ಲಿ ಎಂಬ ಬಗ್ಗೆ ಪ್ರಭಾಸ್​ ಮಾತನಾಡಿದ್ದಾರೆ.

‘ರಾಧೆ ಶ್ಯಾಮ್​’ ಸೋಲಿಗೆ 2 ಮುಖ್ಯ ಕಾರಣ ತಿಳಿಸಿದ ಪ್ರಭಾಸ್​; ಪ್ರೇಕ್ಷಕರು ಈ ನೆಪವನ್ನೆಲ್ಲ ಒಪ್ಪುತ್ತಾರಾ?
ಪ್ರಭಾಸ್
Follow us on

ನಟ ಪ್ರಭಾಸ್​ (Prabhas) ಮೇಲೆ ಅಭಿಮಾನಿಗಳ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಅವರು ಯಾಕೋ ಪದೇ ಪದೇ ಆ ನಿರೀಕ್ಷೆಯನ್ನು ಹುಸಿಗೊಳಿಸುತ್ತಿದ್ದಾರೆ. ‘ಬಾಹುಬಲಿ’ ಸಿನಿಮಾದಿಂದ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದ ಜನಪ್ರಿಯತೆ ಸಿಕ್ಕಿತು. ಆದರೆ ಆ ಬಳಿಕ ಬಂದ ಸಿನಿಮಾಗಳು ಹಿಟ್​ ಆಗಲಿಲ್ಲ. ‘ಬಾಹುಬಲಿ 2’ (Bahubali 2) ನಂತರ ಪ್ರಭಾಸ್​ ನಟಿಸಿದ ‘ಸಾಹೋ’ ಚಿತ್ರ ವಿಫಲವಾಯಿತು. ಅದೇ ರೀತಿ, ಇತ್ತೀಚೆಗೆ ತೆರೆಕಂಡ ‘ರಾಧೆ ಶ್ಯಾಮ್​’ ಸಿನಿಮಾ ಸಹ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲಿಲ್ಲ. ಈ ಎಲ್ಲ ಸೋಲುಗಳ ಬಗ್ಗೆ ಪ್ರಭಾಸ್ ಅವರು ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ‘ರಾಧೆ ಶ್ಯಾಮ್​’ ಸಿನಿಮಾ (Radhe Shyam Movie) ಯಾಕೆ ಸೋತಿರಬಹುದು ಎಂಬುದಕ್ಕೆ ಅವರು ಎರಡು ಕಾರಣ ನೀಡಿದ್ದಾರೆ. ಕೊವಿಡ್​ ಮತ್ತು ಸ್ಕ್ರಿಪ್ಟ್​ನಲ್ಲಿನ ಲೋಪದ ಕಡೆಗೆ ಅವರು ಕೈ ತೋರಿಸಿದ್ದಾರೆ. ‘ರಾಧೆ ಶ್ಯಾಮ್​’ ಚಿತ್ರದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದರು. ಅವರಿಗೂ ಕೂಡ ಬ್ಯಾಕ್​ ಟು ಬ್ಯಾಕ್​ ಸೋಲು ಎದುರಾಗಿದೆ.

‘ಬಾಹುಬಲಿ’ ರೀತಿಯ ಬ್ಲಾಕ್​ ಬಸ್ಟರ್​ ಹಿಟ್​ ಸಿನಿಮಾ ನೀಡಿದ ಬಳಿಕ ಪ್ರಭಾಸ್​ ಅವರ ಮೇಲೆ ಒತ್ತಡ ಹೆಚ್ಚಿತು. ಎಲ್ಲ ಸಿನಿಮಾಗಳು ಕೂಡ ‘ಬಾಹುಬಲಿ’ ರೀತಿ ಯಶಸ್ವಿ ಆಗಲು ಸಾಧ್ಯವಿಲ್ಲ. ಪ್ರಭಾಸ್​ ನಟಿಸುವ ಚಿತ್ರಕ್ಕೆ ನಿರ್ದೇಶನ ಮಾಡುವವರು ಮತ್ತು ಹಣ ಹೂಡುವವರ ಮೇಲೂ ಆ ರೀತಿಯ ಒತ್ತಡ ಇರುತ್ತದೆ. ‘ಬಾಹುಬಲಿ’ಗಿಂತಲೂ ಹೆಚ್ಚಿನ ಮನರಂಜನೆ ನೀಡಬೇಕು ಎಂಬ ಉದ್ದೇಶ ಇಟ್ಟುಕೊಂಡೇ ಸಿನಿಮಾ ಶುರು ಮಾಡಲಾಗುತ್ತದೆ. ಆದರೆ ಎಲ್ಲೋ ಒಂದು ಕಡೆ ತಂಡ ಎಡವುತ್ತದೆ.

‘ರಾಧೆ ಶ್ಯಾಮ್​ ಚಿತ್ರದ ಸೋಲಿಗೆ ಕೊವಿಡ್​ ಕಾರಣ ಆಗಿರಬಹುದು ಅಥವಾ ನಾವು ಸ್ಕ್ರಿಪ್ಟ್​ನಲ್ಲಿ ಏನನ್ನೋ ಮಿಸ್​ ಮಾಡಿರಬಹುದು. ಈ ಬಗ್ಗೆ ಜನರಿಗೆ ಸರಿಯಾಗಿ ತಿಳಿದಿದೆ. ಆ ರೀತಿ ನನ್ನನ್ನು ನೋಡಲು ಜನರಿಗೆ ಇಷ್ಟ ಇಲ್ಲ ಎನಿಸುತ್ತದೆ. ಒಂದು ವೇಳೆ ಬಯಸಿದರೂ ಕೂಡ ನನ್ನನ್ನು ತುಂಬ ಒಳ್ಳೆಯವನಾಗಿ ನೋಡಲು ಅವರು ಇಷ್ಟಪಡುತ್ತಾರೆ’ ಎಂದು ಪ್ರಭಾಸ್​ ಹೇಳಿದ್ದಾರೆ. ‘ಹಿಂದುಸ್ತಾನ್​ ಟೈಮ್ಸ್​’ಗೆ ನೀಡಿದ ಸಂದರ್ಶನದಲ್ಲಿ ಅವರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಒಂದು ಸಿನಿಮಾ ಸೋತ ಬಳಿಕ ಹಲವು ಕಾರಣಗಳನ್ನು ನೀಡಬಹುದು. ಆದರೆ ಪ್ರೇಕ್ಷಕರ ತೀರ್ಮಾನವೇ ಅಂತಿಮವಾಗಿರುತ್ತದೆ.

ಸದ್ಯ ಪ್ರಭಾಸ್​ ಕೈಯಲ್ಲಿ ಅನೇಕ ಪ್ರಾಜೆಕ್ಟ್​ಗಳಿವೆ. ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್’ ಚಿತ್ರದಲ್ಲಿ ಅವರು ನಟಿಸುತ್ತಿದ್ದು ನಿರೀಕ್ಷೆ ಗರಿಗೆದರಿದೆ. ‘ಕೆಜಿಎಫ್​: ಚಾಪ್ಟರ್​ 2’ ಸೂಪರ್​ ಹಿಟ್​ ಆಗಿರುವುದರಿಂದ ‘ಸಲಾರ್​’ ಮೇಲಿದ್ದ ಹೈಪ್​ ದುಪ್ಪಟ್ಟಾಗಿದೆ. ಇನ್ನು, ‘ಆದಿಪುರುಷ್​’ ಚಿತ್ರದಲ್ಲೂ ಪ್ರಭಾಸ್​ ನಟಿಸುತ್ತಿದ್ದಾರೆ. ಆ ಸಿನಿಮಾದ ಕೆಲಸಗಳು ಕೂಡ ಭರದಿಂದ ಸಾಗುತ್ತಿವೆ.

ಇದನ್ನೂ ಓದಿ:

‘ನಮ್ಮ​ ಕೆಲಸ ನಿಲ್ಲಿಸಿ, ಮೊದಲು ಜೇಮ್ಸ್​ ಚಿತ್ರದ ಕೆಲಸ ಮಾಡಿ’: ತಂತ್ರಜ್ಞರಿಗೆ ಪ್ರಭಾಸ್​ ಹೇಳಿದ ಮಾತಿದು

‘ಬಾಹುಬಲಿ’ ಚಿತ್ರದಿಂದ ಪ್ರಭಾಸ್​ಗೆ ಆದ ದೊಡ್ಡ ನಷ್ಟ ಏನು? ಅಂತೂ ಬಾಯ್ಬಿಟ್ಟ ಪ್ಯಾನ್​ ಇಂಡಿಯಾ ಸ್ಟಾರ್​

Published On - 9:14 am, Tue, 19 April 22