ಪವನ್ ಕಲ್ಯಾಣ್ ವಿರುದ್ಧ ಪ್ರತಿಭಟನೆ, ಮಹಿಳಾ ಆಯೋಗದಿಂದ ನೊಟೀಸ್: ಆ ಹೇಳಿಕೆಯಿಂದಲೇ ಸಮಸ್ಯೆ

Pawan Kalyan: ವಾರಾಹಿ ಯಾತ್ರೆಯ ಎರಡನೇ ಹಂತ ಪ್ರಾರಂಭವಾಗುತ್ತಿದ್ದಂತೆ ಪವನ್​ಗೆ ಸಂಕಷ್ಟ ಎದುರಾಗಿದೆ. ಯಾತ್ರೆಯಲ್ಲಿ ನೀಡಿದ ಹೇಳಿಕೆಯಿಂದ ರಾಜ್ಯದಾದ್ಯಂತ ಪ್ರತಿಭಟನೆ ಆರಂಭವಾಗಿದ್ದು, ಮಹಿಳಾ ಆಯೋಗ ನೊಟೀಸ್ ಸಹ ನೀಡಿದೆ. ಏನದು ಹೇಳಿಕೆ?

ಪವನ್ ಕಲ್ಯಾಣ್ ವಿರುದ್ಧ ಪ್ರತಿಭಟನೆ, ಮಹಿಳಾ ಆಯೋಗದಿಂದ ನೊಟೀಸ್: ಆ ಹೇಳಿಕೆಯಿಂದಲೇ ಸಮಸ್ಯೆ
ಪವನ್ ಕಲ್ಯಾಣ್
Follow us
|

Updated on: Jul 11, 2023 | 7:27 PM

ಮುಂಬರುವ ಆಂಧ್ರ ಪ್ರದೇಶ (Andhra Pradesh) ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಜನಸೇನಾ ಪಕ್ಷವನ್ನು ಗೆಲ್ಲಿಸಲೇ ಬೇಕೆಂಬ ಹಠದಲ್ಲಿ ಪವನ್ ಕಲ್ಯಾಣ್ (Pawan Kalyan) ಸತತ ಯಾತ್ರೆ, ಪ್ರಚಾರಗಳನ್ನು ಮಾಡುತ್ತಿದ್ದಾರೆ. ಅವರ ವಾರಾಹಿ ಯಾತ್ರೆಯ ಮೊದಲ ಹಂತ ಯಶಸ್ವಿಯಾಗಿಯೇ ಮುಗಿದಿದೆ. ಇದೇ ಹುಮ್ಮಸ್ಸಿನಲ್ಲಿ ಎರಡನೇ ಹಂತ ಪ್ರಾರಂಭ ಮಾಡಿರುವ ಪವನ್​ಗೆ ಆರಂಭದಲ್ಲಿಯೇ ಹಿನ್ನೆಡೆ ಎದುರಾಗಿದೆ. ವಾರಾಹಿ ಯಾತ್ರೆಯ ಎರಡನೇ ಭಾಗದ ಸಭೆಯೊಂದರಲ್ಲಿ ಪವನ್ ಆಡಿರುವ ಮಾತಿಗೆ ಆಂಧ್ರ ಪ್ರದೇಶ ಗ್ರಾಮ ಸ್ವಯಂಸೇವಕರು ಸಿಟ್ಟಾಗಿದ್ದು ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲದೆ ಮಹಿಳಾ ಆಯೋಗದಿಂದ ಪವನ್​ಗೆ ನೊಟೀಸ್ ಸಹ ಜಾರಿಯಾಗಿದೆ.

ವಾರಾಹಿ ಎರಡನೇ ಹಂತದ ಪ್ರವಾಸದ ಸಂದರ್ಭದ, ಏಲೂರಿನಲ್ಲಿ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾತನಾಡಿದ್ದ ನಟ, ರಾಜಕಾರಣಿ ಪವನ್ ಕಲ್ಯಾಣ್ ಗ್ರಾಮ ಸ್ವಯಂಸೇವಕರ ಬಗ್ಗೆ ಆಡಿರುವ ಮಾತುಗಳು ವಿವಾದ ಎಬ್ಬಿಸಿವೆ. ”ಆಂಧ್ರ ಪ್ರದೇಶದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಸುಮಾರು 30 ಸಾವಿರ ಮಂದಿ ಮಹಿಳೆಯರು ಕಾಣೆಯಾಗಿದ್ದಾರೆ. ಅದರಲ್ಲಿ 14 ಸಾವಿರ ಮಂದಿ ದೊರಕಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಹಾಗಾದರೆ ಉಳಿದ 15 ಸಾವಿರ ಮಹಿಳೆಯರು ಎಲ್ಲಿ ಹೋದರು. ಮನೆಯಿಂದ ಹೊರಗೆ ಹೋದ ಮಹಿಳೆಯರಿಗೆ ಭದ್ರತೆ ಇಲ್ಲದಂತೆ ಆಗಿದೆ” ಎಂದಿದ್ದಾರೆ ಪವನ್.

ಇದನ್ನೂ ಓದಿ:ಪವನ್ ಕಲ್ಯಾಣ್​ಗಾಗಿ ಮಾಡಿದ ಕತೆ ರಾಮ್ ಚರಣ್ ಪಾಲಾಗಿದ್ದು ಹೇಗೆ? ನಿರ್ಮಾಪಕನ ವಿರುದ್ಧ ಪವನ್ ಅಭಿಮಾನಿಗಳು ಕಿಡಿ

ರಾಷ್ಟ್ರೀಯ ಅಪರಾಧ ವಿಭಾಗವೇ ರಾಜ್ಯದಲ್ಲಿ ಮಾನವ ಕಳ್ಳಸಾಗಣೆ ನಡೆಯುತ್ತಿದೆ ಎಂದು ಹೇಳಿದೆ. ರಾಷ್ಟ್ರೀಯ ಅಪರಾಧ ವಿಭಾಗದ ಅಧಿಕಾರಿಯೊಬ್ಬರೇ ನನಗೆ ಹೇಳಿರುವಂತೆ, ಜಗನ್ ಪ್ರತಿ ಹಳ್ಳಿಯಲ್ಲಿಯೂ ಗ್ರಾಮ ಸ್ವಯಂ ಸೇವಕರನ್ನು ಇಟ್ಟಿದ್ದಾರೆ. ಅವರು ಪ್ರತಿ ಊರಿನ ಒಟ್ಟು ಕುಟುಂಬ, ಮನೆ, ಮನೆಯ ಸದಸ್ಯರು, ಅವರದ್ದು ಯಾವ ಪಕ್ಷ, ಅವರಿಗೆ ಇರುವ ಸಮಸ್ಯೆ ಇನ್ನಿತರ ಮಾಹಿತಿಗಳನ್ನು ಕಲೆ ಹಾಕಿ ಸರ್ಕಾರಕ್ಕೆ ಕೊಟ್ಟಿದ್ದಾರೆ. ಅಲ್ಲದೆ ಊರಿನಲ್ಲಿನ ಒಂಟಿ ಮಹಿಳೆಯರ ಮಾಹಿತಿಯೂ ಅವರಿಂದ ತರಿಸಿಕೊಂಡು ಅದನ್ನು ವಿದ್ರೋಹ ಶಕ್ತಿಗಳಿಗೆ ನೀಡಿದ್ದಾರೆ. ಅದನ್ನು ಬಳಸಿಕೊಂಡು ರಾಜ್ಯದಲ್ಲ ಮಾನವ ಕಳ್ಳಸಾಗಣೆ ಮಾಡಲಾಗುತ್ತಿದೆ. ಈ ದೊಡ್ಡ ವ್ಯೂಹದಲ್ಲಿ ವೈಸಿಪಿ ಪಕ್ಷದ ಕೆಲವು ಪ್ರಮುಖರ ಹಸ್ತಕ್ಷೇಪವೂ ಇದೆ ಎಂದಿದ್ದರು.

ಆದರೆ ಪವನ್ ಕಲ್ಯಾಣ್​ರ ಈ ಆರೋಪ ಆಂಧ್ರ ಪ್ರದೇಶದ ಗ್ರಾಮ ಸ್ವಯಂ ಸೇವಕರ ಆಕ್ರೋಶಕ್ಕೆ ಕಾರಣವಾಗಿದ್ದು ರಾಜ್ಯದಾದ್ಯಂತ ಗ್ರಾಮ ಸ್ವಯಂಸೇವಕರು ಪವನ್ ಕಲ್ಯಾಣ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಹಲವೆಡೆ ಪವನ್ ಕಲ್ಯಾಣ್ ಪುತ್ಥಳಿಗೆ ಬೆಂಕಿ ಇಡಲಾಗದೆ. ಇದರ ಜೊತೆಗೆ ಆಂಧ್ರದಲ್ಲಿ 30 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗ ಪವನ್​ಗೆ ನೊಟೀಸ್ ನೀಡಿದ್ದು, ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ಹಾಗೂ ಸಾಕ್ಷ್ಯ ಒದಗಿಸುವಂತೆ ಸೂಚಿಸಿದೆ.

ತಮ್ಮ ಏಲೂರು ಭಾಷಣದಲ್ಲಿ ಜಗನ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದ ಪವನ್ ಕಲ್ಯಾಣ್, ಇನ್ನು ಮುಂದೆ ಆಂಧ್ರ ಸಿಎಂ ಜಗನ್ ಅವರನ್ನು ಏಕವನದಲ್ಲಿಯೇ ಸಂಭೋಧಿಸುವುದಾಗಿ ಹೇಳಿದ್ದು, ಜಗನ್ ನೀನೊಬ್ಬ ಕ್ರಿಮಿನಲ್, ಸುಮಾರು 10 ಲಕ್ಷ ಕೋಟಿ ಜನಗಳ ಹಣವನ್ನು ಪೋಲು ಮಾಡಿದ್ದೀಯ, ನೀನು ಈ ಬಾರಿ ಅಧಿಕಾರದಿಂದ ಇಳಿಯುವುದು ಖಾಯಂ, ಆ ನಂತರ ನಿನ್ನನ್ನು ಊರು-ಊರು ಸುತ್ತಿಸಿ ತಕ್ಕ ಪಾಠ ಮಾಡುವುದು ಖಾಯಂ ಎಂದು ಸಿನಿಮೀಯ ಶೈಲಿಯಲ್ಲಿ ಬೆದರಿಕೆ ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ