AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಂಗಲ್, ಸುಲ್ತಾನ್ ರೀತಿ ಇದೆಯಾ ‘ಪೆದ್ದಿ’ ಕಥೆ? ಆಮಿರ್, ಸಲ್ಲುಗೆ ರಾಮ್ ಚರಣ್ ಧನ್ಯವಾದ

‘ಪೆದ್ದಿ’ ಸಿನಿಮಾ ಜೂನ್ 4ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ರಾಮ್ ಚರಣ್ ಅವರು ಈ ಸಿನಿಮಾದಲ್ಲಿ ಬೇರೆ ಬೇರೆ ಗೆಟಪ್ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಟ್ರೇಲರ್ ಬಿಡುಗಡೆ ವೇಳೆ ಅವರು ಕಥೆಯ ಬಗ್ಗೆ ಸುಳಿವು ನೀಡಿದರು. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಕೂಡ ಅಭಿನಯಿಸಿದ್ದಾರೆ.

ದಂಗಲ್, ಸುಲ್ತಾನ್ ರೀತಿ ಇದೆಯಾ ‘ಪೆದ್ದಿ’ ಕಥೆ? ಆಮಿರ್, ಸಲ್ಲುಗೆ ರಾಮ್ ಚರಣ್ ಧನ್ಯವಾದ
Ram Charan
ಮದನ್​ ಕುಮಾರ್​
|

Updated on: May 18, 2026 | 9:32 PM

Share

ಟಾಲಿವುಡ್ ನಟ ರಾಮ್ ಚರಣ್ ಅಭಿನಯದ, ಬಹುನಿರೀಕ್ಷಿತ ‘ಪೆದ್ದಿ’ (Peddi) ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಮುಂಬೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಈ ಕ್ರೀಡಾ ಆಧಾರಿತ ಸಾಹಸ ಪ್ರಧಾನ ಚಿತ್ರಕ್ಕಾಗಿ ರಾಮ್ ಚರಣ್ (Ram Charan) ಭಾರಿ ದೈಹಿಕ ಬದಲಾವಣೆ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರದ ಕಥೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಲ್ಲದೆ, ಬಾಲಿವುಡ್ ಸೂಪರ್ ಸ್ಟಾರ್‌ ನಟರಾದ ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ರಾಮ್ ಚರಣ್ ಅವರಿಗೆ ಚಿತ್ರಕ್ಕಾಗಿ ಮಾಡಿಕೊಂಡ ಟ್ರಾನ್ಸ್​ಫಾರ್ಮೇಷನ್ ಕುರಿತು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸುವ ಮುನ್ನ ಬಾಲಿವುಡ್ ಸ್ಟಾರ್ ನಟರನ್ನು ಸ್ಮರಿಸಿದ ಚರಣ್, ‘ಮೊದಲನೆಯದಾಗಿ ಸಲ್ಮಾನ್ ಸರ್ ಮತ್ತು ಆಮಿರ್ ಸರ್ ಅವರಿಗೆ ಧನ್ಯವಾದಗಳು. ಅವರು ‘ಸುಲ್ತಾನ್’ ಮತ್ತು ‘ದಂಗಲ್’ ಸಿನಿಮಾಗಳ ಮೂಲಕ ಇಂತಹ ಕ್ರೀಡಾ ಆಧಾರಿತ ಚಿತ್ರಗಳಿಗೆ ದೊಡ್ಡ ಹಾದಿ ಮಾಡಿಕೊಟ್ಟಿದ್ದಾರೆ. ಆ ಸಿನಿಮಾಗಳು ನಮಗೆ ಭಾರಿ ಆತ್ಮವಿಶ್ವಾಸವನ್ನು ತುಂಬಿದವು’ ಎಂದಿದ್ದಾರೆ.

‘ಈ ರೀತಿಯ ವಿಭಿನ್ನ ಪ್ರಯೋಗದ ಸಿನಿಮಾಗಳನ್ನು ಆರಂಭಿಸಿದ್ದಕ್ಕಾಗಿ ಅವರಿಬ್ಬರಿಗೂ ಧನ್ಯವಾದಗಳು. ಅಂತಹ ಚಿತ್ರಗಳು ಹಿಂದೆ ಯಶಸ್ವಿಯಾಗಿವೆ. ಹಾಗಾಗಿ ನಾವೂ ಕೂಡ ಅದೇ ಹಾದಿಯನ್ನು ಅನುಸರಿಸಿದ್ದೇವೆ’ ಎಂದು ರಾಮ್ ಚರಣ್ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಹಾಗಾಗಿ ‘ಪೆದ್ದಿ’ ಕೂಡ ‘ದಂಗಲ್’ ಮತ್ತು ‘ಸುಲ್ತಾನ್’ ರೀತಿಯ ಕಥೆಯನ್ನು ಹೊಂದಿದೆ ಎಂಬುದು ಗೊತ್ತಾಗಿದೆ.

‘ಪೆದ್ದಿ’ ಚಿತ್ರದ ಟ್ರೇಲರ್:

‘ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್ ಕೇವಲ ಒಂದೇ ಕ್ರೀಡೆಗೆ ಸೀಮಿತವಾಗಿಲ್ಲ. ಬದಲಿಗೆ ಅವರು ಕ್ರಿಕೆಟ್, ಕುಸ್ತಿ, ಮತ್ತು ಓಟ ಸೇರಿದಂತೆ ಮೂರು ವಿಭಿನ್ನ ಕ್ರೀಡೆಗಳ ಅಖಾಡಕ್ಕಿಳಿದಿದ್ದಾರೆ. ಪ್ರತಿಯೊಂದು ಕ್ರೀಡೆಗೂ ತಕ್ಕಂತೆ ಅವರು ತಮ್ಮ ದೇಹದ ತೂಕ ಮತ್ತು ಲುಕ್ ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಕೂಡ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇದನ್ನೂ ಓದಿ: ‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಇಲ್ಲಿದೆ ಮೇಕಿಂಗ್ ವಿಡಿಯೋ

‘ಚಿತ್ರಕ್ಕಾಗಿ ದೈಹಿಕ ಬದಲಾವಣೆ ಮಾಡಿಕೊಳ್ಳುವುದು ಕಥೆಯದೇ ಒಂದು ಭಾಗವಾಗಿತ್ತು. ನಿರ್ದೇಶಕ ಬುಚ್ಚಿ ಬಾಬು ಸನಾ ನನ್ನ ಮನೆಗೆ ಬಂದು ನೆಲದ ಮೇಲೆ ಕುಳಿತು 2 ಗಂಟೆ 40 ನಿಮಿಷಗಳ ಕಾಲ ಕಥೆ ಓದಿದಾಗ ನನಗೆ ಮರುಮಾತೇ ಇರಲಿಲ್ಲ. ಈ ಸಿನಿಮಾ ಶೂಟಿಂಗ್ ದೈಹಿಕವಾಗಿ ತುಂಬಾ ದಣಿವಿನಿಂದ ಕೂಡಿರಲಿದೆ ಎಂಬುದು ನನಗೆ ಗೊತ್ತಿತ್ತು’ ಎಂದು ಶೂಟಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

‘ಒಬ್ಬ ವ್ಯಕ್ತಿ ಕ್ರೀಡೆಯ ಮೂಲಕ ತನ್ನ ಅಸ್ತಿತ್ವವನ್ನು ಹುಡುಕಿಕೊಳ್ಳುವ ಕಥೆ ಇದು. ನಾವೆಲ್ಲರೂ ಬದುಕಲು ಒಂದಲ್ಲ ಒಂದು ಗುರುತನ್ನು ಬಯಸುತ್ತೇವೆ. ಇಲ್ಲಿ ಪೆದ್ದಿ ಕೂಡ ತನ್ನದೇ ಆದ ಅಸ್ತಿತ್ವಕ್ಕಾಗಿ ಹೋರಾಡುತ್ತಾನೆ. ಒಂದು ದೊಡ್ಡ ಕಾರಣಕ್ಕಾಗಿ ಆತ ಹೇಗೆ ಕ್ರಾಸ್ ಓವರ್ ಅಥ್ಲೀಟ್ ಆಗಿ ಬದಲಾಗುತ್ತಾನೆ ಎಂಬುದನ್ನು ನಿರ್ದೇಶಕರು ತುಂಬಾ ಸಹಜವಾಗಿ ಹಾಗೂ ಅಷ್ಟೇ ಕಮರ್ಷಿಯಲ್ ಆಗಿ ತೆರೆಮೇಲೆ ತಂದಿದ್ದಾರೆ’ ಎಂದು ರಾಮ್ ಚರಣ್ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More