ಲೋಕಸಭಾ ಚುನಾವಣೆ: ಪವನ್​ ಕಲ್ಯಾಣ್​ ಎದುರು ರಾಮ್​ ಗೋಪಾಲ್​ ವರ್ಮಾ ಸ್ಪರ್ಧೆ

ಅನೇಕ ಸೆಲೆಬ್ರಿಟಿಗಳು ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಯುತ್ತಿದ್ದಾರೆ. ನಟ ಪವನ್​ ಕಲ್ಯಾಣ್​ ಎದುರು ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಆರ್​ಜಿವಿ ಅವರು ಈಗ ಏಕಾಏಕಿ ರಾಜಕೀಯಕ್ಕೆ ಪ್ರವೇಶಿಸಲು ನಿರ್ಧರಿಸಿದ್ದಾರೆ. ಅವರ ಈ ಘೋಷಣೆಯಿಂದ ಎಲ್ಲರಿಗೂ ಅಚ್ಚರಿ ಆಗಿದೆ.

ಲೋಕಸಭಾ ಚುನಾವಣೆ: ಪವನ್​ ಕಲ್ಯಾಣ್​ ಎದುರು ರಾಮ್​ ಗೋಪಾಲ್​ ವರ್ಮಾ ಸ್ಪರ್ಧೆ
ರಾಮ್​ ಗೋಪಾಲ್​ ವರ್ಮಾ, ಪವನ್​ ಕಲ್ಯಾಣ್​

Updated on: Mar 14, 2024 | 9:34 PM

ಯಾವಾಗಲೂ ವಿವಾದದಿಂದಲೇ ಸುದ್ದಿ ಆಗುವ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (Ram Gopal Varma) ಅವರು ಈಗ ರಾಜಕೀಯಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇಷ್ಟು ದಿನ ಸಿನಿಮಾಗಳ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಬ್ಯುಸಿ ಆಗಿದ್ದ ಅವರು ಈಗ ಏಕಾಏಕಿ ರಾಜಕೀಯದ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಅವರು ಸ್ಪರ್ಧಿಸಲಿದ್ದಾರೆ. ಅಚ್ಚರಿ ಏನೆಂದರೆ, ನಟ ಹಾಗೂ ಜನಸೇನಾ ಪಕ್ಷದ ಮುಖಂಡ ಪವನ್​ ಕಲ್ಯಾಣ್​ (Pawan Kalyan) ವಿರುದ್ಧ ರಾಮ್​ ಗೋಪಾಲ್​ ವರ್ಮಾ ಕಣಕ್ಕೆ ಇಳಿಯಲಿದ್ದಾರೆ!

ಜನಸೇನಾ ಪಕ್ಷದ ಮುಖಂಡ ಪವನ್​ ಕಲ್ಯಾಣ್​ ಅವರು ಆಂಧ್ರದ ಪಿಠಾಪುರಂ ಕ್ಷೇತ್ರದಿಂದ ಸ್ಪರ್ಧಿಸುವ ಘೋಷಣೆ ಆಗಿದೆ. ಅದರ ಬೆನ್ನಲ್ಲೇ ರಾಮ್​ ಗೋಪಾಲ್​ ವರ್ಮಾ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಬ್ರೇಕಿಂಗ್​ ನ್ಯೂಸ್​ ನೀಡಿದ್ದಾರೆ. ಕೆಲವರು ಈ ನಿರ್ಧಾರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಂಥವರಿಗೂ ರಾಮ್​ ಗೋಪಾಲ್​ ವರ್ಮಾ ಉತ್ತರ ನೀಡಿದ್ದಾರೆ. ‘ನಾನು ತುಂಬ ಗಂಭೀರವಾಗಿದ್ದೇನೆ’ ಎಂದು ಅವರು ಪೋಸ್ಟ್​ ಮಾಡಿದ್ದಾರೆ.

ರಾಮ್​ ಗೋಪಾಲ್​ ವರ್ಮಾ ಎಕ್ಸ್​ ಪೋಸ್ಟ್:

‘ಸಡನ್​ ನಿರ್ಧಾರ. ಪಿಠಾಪುರಂ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತಿದೆ’ ಎಂದು ರಾಮ್​ ಗೋಪಾಲ್​ ವರ್ಮಾ ಅವರು ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಅವರು ಹೆಚ್ಚಿನ ಮಾಹಿತಿ ನೀಡಿಲ್ಲ. ‘ನೀವು ಯಾವ ಪಕ್ಷದಿಂದ ಸ್ಪರ್ಧಿಸುತ್ತೀರಿ’ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರಾಮ್​ ಗೋಪಾಲ್​ ವರ್ಮಾ ಉತ್ತರ ನೀಡಿಲ್ಲ.

ಇದನ್ನೂ ಓದಿ: ಪೂನಂ ಪಾಂಡೆ ಮಾಡಿದ್ದು ಸರಿ ಎಂದು ಬೆಂಬಲಕ್ಕೆ ನಿಂತ ರಾಮ್​ ಗೋಪಾಲ್​ ವರ್ಮಾ

ಪಿಠಾಪುರಂ ಕ್ಷೇತ್ರದಲ್ಲಿ ಜನಸೇನಾ ಪಕ್ಷ, ಭಾರತೀಯ ಜನತಾ ಪಕ್ಷ ಹಾಗೂ ತೆಲುಗು ದೇಶಂ ಪಕ್ಷ ಮೈತ್ರಿ ಮಾಡಿಕೊಂಡಿವೆ. ಆ ಕ್ಷೇತ್ರದಲ್ಲಿ ಜನಸೇನಾ ಪಕ್ಷದಿಂದ ಪವನ್​ ಕಲ್ಯಾಣ್​ ಅವರು ಸ್ಪರ್ಧಿಸಲಿದ್ದಾರೆ. ಅದೇ ಕ್ಷೇತ್ರದಲ್ಲಿ ತಾವು ಚುನಾವಣೆಗೆ ನಿಲ್ಲವುದಾಗಿ ರಾಮ್​ ಗೋಪಾಲ್​ ವರ್ಮಾ ಅವರು ಘೋಷಿಸಿರುವುದು ಅಚ್ಚರಿ ಮೂಡಿಸಿದೆ. ಹಲವು ಸಂದರ್ಭಗಳಲ್ಲಿ ರಾಮ್​ ಗೋಪಾಲ್​ ವರ್ಮಾ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ಹಾಗಂತ ಅವರನ್ನು ನಿರ್ಲಕ್ಷಿಸಲು ಕೂಡ ಸಾಧ್ಯವಿಲ್ಲ. ಒಟ್ಟಿನಲ್ಲಿ ಅವರ ಈ ಘೋಷಣೆಯಿಂದ ಹೊಸ ಚರ್ಚೆ ಶುರುವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us