
ಬಾಲಿವುಡ್ನ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಈ ದೃಶ್ಯಕಾವ್ಯ ವಿಶ್ವದಾದ್ಯಂತ ತೆರೆಕಾಣಲಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಪ್ರೇಕ್ಷಕರ ಗಮನ ಸೆಳೆದಿದೆ. ಆದರೆ ‘ಆದಿಪುರುಷ್’ ಸಿನಿಮಾದ ಸೋಲಿನ ನಂತರ ಈ ಹೊಸ ಪ್ರಯತ್ನದ ಬಗ್ಗೆ ಜನರಲ್ಲೊಂದು ಕುತೂಹಲ ಹಾಗೂ ಸಂಶಯ ಎರಡೂ ಇವೆ.
ಈ ನಡುವೆ ಪ್ರಸಿದ್ಧ ‘ರಾಮಾಯಣ’ ಧಾರಾವಾಹಿಯ ನಿರ್ದೇಶಕ ರಾಮಾನಂದ ಸಾಗರ್ ಅವರ ಮೊಮ್ಮಗ ಶಿವ ಸಾಗರ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. ರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಆಯ್ಕೆಯನ್ನು ಅವರು ತೀವ್ರವಾಗಿ ವಿರೋಧಿಸಿದ್ದಾರೆ. ರಣಬೀರ್ ಕಪೂರ್ ಅವರನ್ನು ರಾಮನ ಪಾತ್ರದಲ್ಲಿ ಸ್ವೀಕರಿಸಲು ಕಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
‘ಶಿವ ಸಾಗರ್ ಅವರ ಪ್ರಕಾರ ರಣಬೀರ್ ಅವರಿಗೆ ‘ಅನಿಮಲ್’ ಸಿನಿಮಾದ ದೊಡ್ಡ ಇಮೇಜ್ ಇದೆ. ರಾಮನ ಪಾತ್ರಕ್ಕೆ ಯಾವುದೇ ಹಳೆಯ ಇಮೇಜ್ ಇರದ ಹೊಸ ಮುಖ ಸೂಕ್ತವಾಗಿತ್ತು. ಆದರೆ ರಾವಣನಾಗಿ ನಟಿಸಿರುವ ಯಶ್ ಮತ್ತು ಸೀತೆಯಾಗಿ ನಟಿಸಿರುವ ಸಾಯಿ ಪಲ್ಲವಿ ಅವರ ಆಯ್ಕೆ ಅತ್ಯುತ್ತಮವಾಗಿದೆ. ಈ ಇಬ್ಬರು ನಟರು ಪಾತ್ರಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಬಾಕ್ಸ್ ಆಫೀಸ್ ಹಾಗೂ ಮಾರ್ಕೆಟಿಂಗ್ ದೃಷ್ಟಿಯಿಂದ ರಣಬೀರ್ ಅವರನ್ನು ಆಯ್ಕೆ ಮಾಡಿರಬಹುದು. ಆದರೆ ಪ್ರಭು ಶ್ರೀರಾಮ ಭಾರತೀಯರಿಗೆ ಕೇವಲ ಪೌರಾಣಿಕ ಪಾತ್ರವಲ್ಲ. ರಾಮ ನಮ್ಮ ಪವಿತ್ರ ಇತಿಹಾಸ. ಜನರು ಪ್ರತಿದಿನ ಪೂಜಿಸುವ ದೇವರನ್ನು ನೋಡುವಾಗ ಯಾವುದೇ ನಕಾರಾತ್ಮಕ ಹಳೆಯ ನೆನಪುಗಳು ಇರಬಾರದು’ ಎಂಬುದು ಶಿವ ಸಾಗರ್ ಅವರ ಬಲವಾದ ವಾದವಾಗಿದೆ.
ಇದನ್ನೂ ಓದಿ: ‘ರಾಮಾಯಣ’ ಸಿನಿಮಾಗೆ ಇನ್ನೂ ಶುರುವಾಗಿಲ್ಲ ಪ್ರಚಾರ; ಕಾರಣವೇನು?
ಕೊನೆಯದಾಗಿ ಜನರೇ ಅಂತಿಮ ನಿರ್ಣಾಯಕರು ಎಂದು ಶಿವ ಸಾಗರ್ ಹೇಳಿದ್ದಾರೆ. ನಮಿತ್ ಮಲ್ಹೋತ್ರಾ ಮತ್ತು ಯಶ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಆಸ್ಕರ್ ವಿಜೇತ ಎಆರ್ ರೆಹಮಾನ್ ಹಾಗೂ ಹ್ಯಾನ್ಸ್ ಝಿಮ್ಮರ್ ಸಂಗೀತ ಸಂಯೋಜಿಸಿದ್ದಾರೆ. ಈ ಮೆಗಾ ಬಜೆಟ್ ಸಿನಿಮಾ ಪ್ರೇಕ್ಷಕರನ್ನು ಹೇಗೆ ಗೆಲ್ಲಲಿದೆ ಎಂದು ಕಾದುನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.