‘ಇದು ಆರ್​ಸಿಬಿಯ ಕೆಟ್ಟ ನಿರ್ಧಾರ’: ರಶ್ಮಿಕಾ ಸಹಯೋಗಕ್ಕೆ ಫ್ಯಾನ್ಸ್​ ಗರಂ

ನಟಿ ರಶ್ಮಿಕಾ ಮಂದಣ್ಣ ಜೊತೆ ಆರ್​ಸಿಬಿ ಮ್ಯಾನೇಜ್​ಮೆಂಟ್​ ಕೈ ಜೋಡಿಸಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಹೊಸ ಪ್ರೋಮೋದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಅದನ್ನು ಕಂಡು ಆರ್​ಸಿಬಿ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಸಾವಿರಾರು ಕಮೆಂಟ್​ಗಳ ಮೂಲಕ ಫ್ಯಾನ್ಸ್​ ತಕರಾರು ತೆಗೆದಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಇದು ಆರ್​ಸಿಬಿಯ ಕೆಟ್ಟ ನಿರ್ಧಾರ’: ರಶ್ಮಿಕಾ ಸಹಯೋಗಕ್ಕೆ ಫ್ಯಾನ್ಸ್​ ಗರಂ
ರಶ್ಮಿಕಾ ಮಂದಣ್ಣ

Updated on: Mar 18, 2024 | 8:14 PM

ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡ ಕಪ್​ ಗೆದ್ದಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಗೆಲುವಿನ ಸಂಭ್ರಮಾಚರಣೆ ನಡೆಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಆರ್​ಸಿಬಿ ಅಭಿಮಾನಿಗಳು ಗರಂ ಆಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು ನಟಿ ರಶ್ಮಿಕಾ ಮಂದಣ್ಣ! ಅರೆ, ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೂ ಆರ್​ಸಿಬಿ ತಂಡಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಮೂಡುವುದು ಸಹಜ. ವಿಷಯ ಏನೆಂದರೆ, ಐಪಿಎಲ್​ ಆರಂಭಕ್ಕೂ ಮುನ್ನ ಅನೇಕ ಸೆಲೆಬ್ರಿಟಿಗಳ ಜೊತೆ ಆರ್​ಸಿಬಿ ಸಹಯೋಗ ಮಾಡಿಕೊಂಡಿದೆ. ರಶ್ಮಿಕಾ ಮಂದಣ್ಣ ಜೊತೆ ಆರ್​​ಸಿಬಿ (RCB) ಮ್ಯಾನೇಜ್​ಮೆಂಟ್​ ಕೈ ಜೋಡಿಸಿರುವುದಕ್ಕೆ ಅಭಿಮಾನಿಗಳು ಸಿಟ್ಟಾಗಿದ್ದಾರೆ. ‘ಇದು ಆರ್​ಸಿಬಿ ತೆಗೆದುಕೊಂಡ ಅತಿ ಕೆಟ್ಟ ನಿರ್ಧಾರ’ ಎಂದು ಫ್ಯಾನ್ಸ್​ ಕಮೆಂಟ್​ ಮಾಡಿದ್ದಾರೆ.

ಈಗಾಗಲೇ ಶಿವರಾಜ್​ಕುಮಾರ್​, ರಿಷಬ್​ ಶೆಟ್ಟಿ, ಕಿಚ್ಚ ಸುದೀಪ್​ ಮುಂತಾದ ಸೆಲೆಬ್ರಿಟಿಗಳು ಆರ್​ಸಿಬಿ ಅನ್​ಬಾಕ್ಸ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಸ್ಟಾರ್​ ಕಲಾವಿದರು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೀಮ್​ ಜೊತೆ ಕೈ ಜೋಡಿಸಿದ್ದಕ್ಕೆ ಅಭಿಮಾನಿಗಳಿಗೆ ಖುಷಿ ಆಗಿದೆ. ಈ ಸ್ಟಾರ್​ಗಳ ಪ್ರೋಮೋಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ರಶ್ಮಿಕಾ ಮಂದಣ್ಣ ಅವರನ್ನು ಅನ್​ಬಾಕ್ಸ್​ ವಿಡಿಯೋದಲ್ಲಿ ನೋಡಿದ ಆರ್​ಸಿಬಿ ಫ್ಯಾನ್ಸ್​ಗೆ ನಿರಾಸೆ ಆಗಿದೆ.

ಆರ್​ಸಿಬಿ ಇನ್​ಸ್ಟಾಗ್ರಾಮ್​ ಪೋಸ್ಟ್​:

‘ನಾವು ಈ ಸಹಯೋಗವನ್ನು ನಿರೀಕ್ಷಿಸಿರಲಿಲ್ಲ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ‘ನಿಯತ್ತಾದ ಫ್ರಾಂಚೈಸ್​ಗೆ ನಿಯತ್ತಿಲ್ಲದ ವ್ಯಕ್ತಿಗಳ ಸಹಯೋಗ ಬೇಡ’ ಎಂಬ ಕಮೆಂಟ್​ ಕೂಡ ಬಂದಿದೆ. ‘ಕರ್ನಾಟಕಕ್ಕೆ ರಶ್ಮಿಕಾ ಮಂದಣ್ಣ ಬೇಡ. ಸ್ಮೃತಿ ಮಂಧಾನ ಬೇಕು’ ಎಂದು ಕೂಡ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ‘ಅಷ್ಟು ಸಿಹಿ ಮನುಷ್ಯರ ಮಧ್ಯೆ ಈ ಕಹಿ ಯಾಕೆ’ ಎಂದು ಟ್ರೋಲ್​ ಪೇಜ್​ನವರು ಖಾರವಾಗಿ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಜಪಾನ್​ನಲ್ಲೂ ಸೃಷ್ಟಿಯಾಗಿದೆ ರಶ್ಮಿಕಾ ಮಂದಣ್ಣ ಅಭಿಮಾನಿ ಬಳಗ

ರಶ್ಮಿಕಾ ಮಂದಣ್ಣ ಅವರು ಕನ್ನಡದವರು. ಅವರಿಗೆ ಖ್ಯಾತಿ ಸಿಕ್ಕಿದ್ದು ಕನ್ನಡದ ‘ಕಿರಿಕ್​ ಪಾರ್ಟಿ’ ಸಿನಿಮಾದಿಂದ. ಆ ಚಿತ್ರದಲ್ಲಿ ನಟಿಸಿದ ಬಳಿಕ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಪ್ರೀತಿ ಚಿಗುರಿತ್ತು. ನಂತರ ಅವರಿಬ್ಬರು ಎಂಗೇಜ್​ಮೆಂಟ್​ ಮಾಡಿಕೊಂಡರು. ಆದರೆ ಕೆಲವೇ ದಿನಗಳಲ್ಲಿ ಅವರಿಬ್ಬರ ಸಂಬಂಧ ಮುರಿದುಬಿತ್ತು. ಆ ಘಟನೆ ನಡೆದ ಬಳಿಕ ಕನ್ನಡಿಗರು ರಶ್ಮಿಕಾ ಅವರನ್ನು ಕಂಡರೆ ಕಿಡಿಕಾರಲು ಆರಂಭಿಸಿದರು. ಆ ಸಮಯಕ್ಕೆ ಸರಿಯಾಗಿ ರಶ್ಮಿಕಾ ಅವರಿಗೆ ಪರಭಾಷೆಯಲ್ಲಿ ಅವಕಾಶಗಳು ಹೆಚ್ಚಿದವು. ಕನ್ನಡದಲ್ಲಿ ಅವರು ನಟಿಸುವುದು ಕಡಿಮೆ ಆಯಿತು. ಈಗ ಅವರ ಜೊತೆ ಕೈ ಜೋಡಿಸಿದ ಆರ್​ಸಿಬಿ ಮ್ಯಾನೇಜ್​ಮೆಂಟ್​ ವಿರುದ್ಧ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us