
ಮೈಸೂರು, ಜುಲೈ 12: ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನದ ಬಳಿಕ ಅವರ ಕೊನೆಯ ದಿನಗಳ ಕುರಿತು ಹಲವು ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಅವರ ಕೇರ್ಟೇಕರ್ ನವೀನ್ ಅವರು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಬಗ್ಗೆ ಸಾರ್ವಜನಿಕವಾಗಿ ಅಪಪ್ರಚಾರ ನಡೆಯುತ್ತಿದೆ ಎಂದು ತಿಳಿದಾಗ ಜಾನಕಮ್ಮನವರು ತೀವ್ರ ಬೇಸರಗೊಂಡಿದ್ದರಂತೆ. ಜನಗಳ ಮಧ್ಯೆ ಇರಲು ಇಷ್ಟವಿಲ್ಲ ಎಂದು ಹೇಳಿ, ಕಾಡಿಗೆ ಹೋಗಿ ಬಿಡುತ್ತೇನೆ ಎಂಬಂತಹ ಮಾತುಗಳನ್ನು ಕೂಡ ಆಡಿದ್ದರು. ಈ ವೇಳೆ ಕಾಡಿಗೆ ಒಬ್ಬರೇ ಹೋಗಿ ಏನು ಮಾಡ್ತೀರಾ ಎಂದು ಕೇಳಿದರೆ ನಿಮ್ಮನ್ನೂ ಜೊತಯಲ್ಲಿ ಕರೆದೊಯ್ಯುತ್ತೇನೆ ಎಂದು ಹೇಳುತ್ತಿದ್ದರು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.
ಜಾನಕಮ್ಮನವರ ಆರೋಗ್ಯದ ಬಗ್ಗೆಯೂ ನವೀನ್ ಸ್ಪಷ್ಟನೆ ನೀಡಿದ್ದು, ಬಿಪಿ ಮತ್ತು ಶುಗರ್ನಂತಹ ಸಾಮಾನ್ಯ ಸಮಸ್ಯೆಗಳ ಹೊರತುಪಡಿಸಿ ಯಾವುದೇ ಗಂಭೀರ ಕಾಯಿಲೆ ಅವರಿಗೆ ಇರಲಿಲ್ಲ ಎಂದು ತಿಳಿಸಿದ್ದಾರೆ. ಮೈಸೂರು ಮೇಲೆ ಅಪಾರ ಪ್ರೀತಿ ಹೊಂದಿದ್ದ ಜಾನಕಮ್ಮನವರ ನೆನಪಿಗಾಗಿ ನವೀನ್ ಅವರು ಒಂದು ವಿಶೇಷ ಮನವಿಯನ್ನೂ ಮಾಡಿದ್ದು, ಗದ್ದಿಗೆ ಮುಖ್ಯ ರಸ್ತೆಗೆ ಎಸ್. ಜಾನಕಿ ಮುಖ್ಯ ರಸ್ತೆ ಎಂದು ಹೆಸರಿಸಬೇಕು ಎಂದು ಅವರು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಸಿಎಂ ಈಡೇರಿಸಿದರೆ, ಜಾನಕಿ ಅವರಿಗೆ ಮೈಸೂರು ಮೇಲಿದ್ದ ಪ್ರೀತಿ ಸಾರ್ಥಕವಾಗಲಿದೆ ಎಂದು ನವೀನ್ ಹೇಳಿದ್ದಾರೆ.
ಇದನ್ನೂ ಓದಿ: ಸಂಗೀತ ಲೋಕದ ಮಹಾರಾಣಿ ಇನ್ನಿಲ್ಲ; ಜಾನಕಮ್ಮನ ಅಗಲಿಕೆಗೆ ಕಂಬನಿ ಮಿಡಿದ ಇಂಟರ್ನೆಟ್ ಜಗತ್ತು!
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ತೋಟದಲ್ಲಿ ಎಸ್. ಜಾನಕಿ ಅವರ ಅಂತ್ಯಕ್ರಿಯೆ ನೆರವೇರಲಿದೆ. ಈ ಜಾಗ ಅವರಿಗೆ ಬಹಳ ಇಷ್ಟವಾಗಿತ್ತು. ಕಳೆದ ನಾಲ್ಕು ವರ್ಷಗಳ ಹಿಂದೆ ನವೀನ್ ಖರೀದಿ ಮಾಡಿದ್ದ ಈ ತೋಟಕ್ಕೆ ಬಂದರೆ ಬೆಳಿಗ್ಗೆಯಿಂದ ಸಂಜೆಯವರೆಗೂ ಜಾನಕಿ ಅವರು ಇಲ್ಲೇ ಇರುತ್ತಿದ್ದರು. ಅವರ ಆಸೆಯಂತೆ ಇದೇ ಜಾಗದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆದಿದೆ. ಇದೇ ತೋಟದಲ್ಲಿ ಮನೆ ಕಟ್ಟಬೇಕು ಎಂದು ಜಾನಕಿಯವರು ಆಸೆ ಇಟ್ಟುಕೊಂಡಿದ್ದರು. ತೋಟಕ್ಕೆ ಬಂದಾಗ ಸ್ಥಲೀಯ ಗ್ರಾಮಸ್ಥರ ಜೊತೆ ಖುಷಿಯಿಂದ ಮಾತನಾಡುತ್ತಿದ್ದರು ಎಂಬ ವಿಚಾರವೂ ಗೊತ್ತಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:38 am, Sun, 12 July 26