AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sai Pallavi: ‘ಅಂತಹ ಚಿತ್ರಗಳಲ್ಲಿ ನಟಿಸೋಕೆ ನನಗೆ ಭಯ’; ಮುಕ್ತವಾಗಿ ಹೇಳಿಕೊಂಡ ಸಾಯಿ ಪಲ್ಲವಿ

Chiranjeevi: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಸಾಯಿ ಪಲ್ಲವಿ, ಚಿರಂಜೀವಿ ನಟನೆಯ ನೂತನ ಚಿತ್ರಕ್ಕೆ ನೋ ಎಂದಿದ್ದಾರೆ. ಇದಕ್ಕೆ ಅವರು ವಿಶೇಷ ಕಾರಣವನ್ನೂ ನೀಡಿದ್ದಾರೆ.

Sai Pallavi: 'ಅಂತಹ ಚಿತ್ರಗಳಲ್ಲಿ ನಟಿಸೋಕೆ ನನಗೆ ಭಯ'; ಮುಕ್ತವಾಗಿ ಹೇಳಿಕೊಂಡ ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ
TV9 Web
| Edited By: |

Updated on:Sep 23, 2021 | 12:18 PM

Share

ಮಲಯಾಳಂನಲ್ಲಿ ಮಿಂಚಿ ಇದೀಗ ಟಾಲಿವುಡ್​ನಲ್ಲಿ ನೆಲೆಯೂರಿರುವ ಸಾಯಿ ಪಲ್ಲವಿ, ಪ್ರಸ್ತುತ ತಮ್ಮ ಹೊಸ ಚಿತ್ರ ‘ಲವ್ ಸ್ಟೋರಿ’ಯ ಬಿಡುಗಡೆಗೆ ಕಾಯುತ್ತಿದ್ದಾರೆ. ತೆಲುಗಿನ ಖ್ಯಾತ ನಟ ನಾಗ ಚೈತನ್ಯ ಅವರೊಂದಿಗೆ ಈ ಚಿತ್ರದಲ್ಲಿ ಅವರು ತೆರೆ ಹಂಚಿಕೊಂಡಿದ್ದು, ಈಗಾಗಲೇ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದು, ಹಲವು ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಜೊತೆಗೆ ಇತ್ತೀಚೆಗಷ್ಟೇ ಮೆಗಾಸ್ಟಾರ್ ಚಿರಂಜೀವಿ ಜೊತೆಗಿನ ನಟನೆಯ ಅವಕಾಶವನ್ನು ತಿರಸ್ಕರಿಸಿದ ಕುರಿತೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಾಯಿ ಪಲ್ಲವಿ ಆಫರ್ ತಿರಸ್ಕರಿಸಿದ್ದಕ್ಕೆ ಮೆಗಾಸ್ಟಾರ್ ಹೇಳಿದ್ದೇನು? ‘ಲವ್​ ಸ್ಟೋರಿ’ ಚಿತ್ರತಂಡವು ಬಿಡುಗಡೆಗೆ ಮುಂಚಿತವಾಗಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅದರಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ಅಮೀರ್ ಖಾನ್ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಚಿರಂಜೀವಿ, ತಮ್ಮ ಹೊಸ ಚಿತ್ರ ‘ಭೋಲಾ ಶಂಕರ್‌’ನಲ್ಲಿ ಸಾಯಿ ಪಲ್ಲವಿ ನಟಿಸಲು ನಿರಾಕರಿಸಿರುವುದನ್ನು ಸ್ವಾಗತಿಸಿದರು. ಇದಕ್ಕೆ ಕಾರಣವನ್ನು ತೆರೆದಿಟ್ಟ ಮೆಗಾಸ್ಟಾರ್, “ಭೋಲಾ ಶಂಕರ್​ನಲ್ಲಿ ನನ್ನ ತಂಗಿಯಾಗಿ ಸಾಯಿ ಪಲ್ಲವಿ ನಟಿಸಲು ಆಫರ್ ನೀಡಲಾಗಿತ್ತು. ಅದನ್ನು ಅವರು ತಿರಸ್ಕರಿಸಿದ್ದು, ಬಹಳ ಸಂತೋಷ ನೀಡಿದೆ. ಕಾರಣ, ನಾನು ಅವರೊಂದಿಗೆ ರೊಮ್ಯಾಂಟಿಕ್ ಚಿತ್ರದಲ್ಲಿ ಕಾಣಿಸಿಕೊಳ್ಳಲು ಕಾತರನಾಗಿದ್ದೇನೆ. ಆದರೆ ಭೋಲಾ ಶಂಕರ್​ನಲ್ಲಿ ಅವರಿಗೆ ನೀಡಿದ್ದು, ನನ್ನ ತಂಗಿಯ ಪಾತ್ರ. ಒಂದು ವೇಳೆ ಅವರು ನಟಿಸಿದ್ದರೆ, ನನಗೆ ಅವರು ನಾಯಕಿಯಾಗುವ ಅವಕಾಶ ತಪ್ಪುತ್ತಿತ್ತು. ಆದ್ದರಿಂದಲೇ ಅವರು ಆಫರ್ ತಿರಸ್ಕರಿಸಿದ್ದು ಸಂತೋಷವಾಗಿದೆ’’ ಎಂದಿದ್ದರು.

ಅಂತಹ ಚಿತ್ರಗಳಲ್ಲಿ ನಟಿಸೋಕೆ ಭಯ ಎಂದು ಕಾರಣ ಹೇಳಿದ ಸಾಯಿ ಪಲ್ಲವಿ: ಚಿರಂಜೀವಿ ಮಾತು ಕೇಳಿದ ಸಾಯಿ ಪಲ್ಲವಿ ಅದಕ್ಕೆ ನಗುತ್ತಲೇ ಉತ್ತರಿಸಿ, ‘ಭೋಲಾ ಶಂಕರ್’ ಚಿತ್ರ ನಿರಾಕರಿಸಿದ ಕಾರಣವನ್ನು ಹೇಳಿಕೊಂಡರು. “ನಾನು ಸಾಮಾನ್ಯವಾಗಿ ರೀಮೇಕ್‌ ಚಿತ್ರಗಳಲ್ಲಿ ನಟಿಸಲು ಭಯಪಡುತ್ತೇನೆ. ಆದ್ದರಿಂದಲೇ ಭೋಲಾ ಶಂಕರ್​ಗೆ ನೋ ಎಂದೆ. ಇಲ್ಲದಿದ್ದರೆ, ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶವನ್ನು ನಾನೇಕೆ ಕಳೆದುಕೊಳ್ಳುತ್ತಿದ್ದೆ?. ನಾನು ಎಲ್ಲಿ ಹೋದರೂ, ಮೆಗಾಸ್ಟಾರ್ ಅವರನ್ನು ಭೇಟಿಯಾಗಿದ್ದೀರಾ? ಎಂದು ಜನ ಪ್ರಶ್ನಿಸುತ್ತಾರೆ. ಕೆಲ ದಿನಗಳ ಹಿಂದೆ, ನಾನು ರಾಮ್​ ಚರಣ್ ಅವರನ್ನು ಭೇಟಿಯಾಗಿದ್ದೆ. ಆಗ ನಿಮ್ಮ ಭೇಟಿ ಯಾವಾಗ ಆಗಬಹುದು ಎಂದು ಯೋಚಿಸುತ್ತಿದ್ದೆ. ನಿಮ್ಮೊಂದಿಗೆ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದು ನನಗೆ ಬಹಳ ಗೌರವಯುತ ವಿಚಾರ’’ ಎಂದು ಸಾಯಿ ಪಲ್ಲವಿ ತಮ್ಮ ಮನಸ್ಸನ್ನು ತೆರೆದಿಟ್ಟಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಮಾತಿನ ಮೂಲಕ ಸಾಯಿ ಪಲ್ಲವಿ ಇನ್ನು ಮುಂದೆಯೂ ರಿಮೇಕ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದು, ಕೇವಲ ಒರಿಜಿನಲ್ ಚಿತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದೇನೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ‘ಭೋಲಾ ಶಂಕರ್’ ಚಿತ್ರವು ತಮಿಳಿನ ಹಿಟ್ ಚಿತ್ರ ‘ವೇದಾಲಂ’ ಚಿತ್ರದ ರಿಮೇಕ್ ಆಗಿದೆ. ವೇದಾಲಂನಲ್ಲಿ ಅಜಿತ್ ಕಾಣಿಸಿಕೊಂಡಿದ್ದರು. ಪ್ರಸ್ತುತ ಚಿರಂಜೀವಿ ಮಲಯಾಳಂನ ‘ಲೂಸಿಫರ್’ ಚಿತ್ರದ ರಿಮೇಕ್​ನಲ್ಲೂ ನಟಿಸುತ್ತಿದ್ದಾರೆ.

ಟಾಲಿವುಡ್​ನ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ‘ಲವ್ ಸ್ಟೋರಿ’ ಚಿತ್ರ ಸೆಪ್ಟೆಂಬರ್ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ನಾಗ ಚೈತನ್ಯ, ಸಾಯಿ ಪಲ್ಲವಿ ಸೇರಿದಂತೆ ಖ್ಯಾತ ನಟರ ದಂಡೇ ಕಾಣಿಸಿಕೊಳ್ಳುತ್ತಿದೆ. ಬಾಲಿವುಡ್​ನ ಖ್ಯಾತ ನಟ ಅಮೀರ್ ಖಾನ್ ಕೂಡ ‘ಲವ್ ಸ್ಟೋರಿ’ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ನಾಗ ಚೈತನ್ಯ ಅಮೀರ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Dookudu: ‘ದೂಕುಡು’ ಚಿತ್ರಕ್ಕೆ 10 ವರ್ಷದ ಸಂಭ್ರಮ; ಫ್ಯಾನ್ಸ್​ಗೆ ವಿಶೇಷ ಗಿಫ್ಟ್ ನೀಡಿದ ಚಿತ್ರತಂಡ

‘ನೆನಪಿರಲಿ’ ಪ್ರೇಮ್​ ಮುಂದಿನ ಚಿತ್ರಕ್ಕೆ 400 ಕೋಟಿ ರೂ. ಬಜೆಟ್​; ಹಾಲಿವುಡ್​ ಹಾದಿಯತ್ತ ‘ಲವ್ಲಿ ಸ್ಟಾರ್​’

(Sai Pallavi says she is very scared of remakes that’s why she rejects Chiranjeevi’s Bhola Shankar)

Published On - 11:34 am, Thu, 23 September 21