ಅನಿರುದ್ಧ್ ಜತೆ ನಮಗೆ ಭಿನ್ನಾಭಿಪ್ರಾಯ ಇದ್ದಿದ್ದು ನಿಜ: ವೀರಕಪುತ್ರ ಶ್ರೀನಿವಾಸ್
ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ಮಾಡಬೇಕು ಎಂಬ ವಿಚಾರದಲ್ಲಿ ಫ್ಯಾನ್ಸ್ ಮತ್ತು ಫ್ಯಾಮಿಲಿ ನಡುವೆ ಗೊಂದಲ ಮೂಡಿತ್ತು. ಹಾಗಾಗಿ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಮತ್ತು ವಿಷ್ಣುಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ನಡುವೆ ಭಿನ್ನಾಭಿಪ್ರಾಯವಿತ್ತು. ಆ ಬಗ್ಗೆ ಈಗ ವೀರಕಪುತ್ರ ಶ್ರೀನಿವಾಸ್ ಅವರು ಟಿವಿ9 ಜೊತೆ ಮಾತಾಡಿದ್ದಾರೆ. ಪೂರ್ತಿ ವಿವರ ಇಲ್ಲಿದೆ..

ಅಭಿಮಾನ್ ಸ್ಟುಡಿಯೋ ಆವರಣದಲ್ಲೇ ವಿಷ್ಣುವರ್ಧನ್ ಅವರ ಸ್ಮಾರಕ (Vishnuvardhan Smaraka) ಇರಬೇಕು ಎಂಬುದು ಅಭಿಮಾನಿಗಳ ಹಲವು ವರ್ಷಗಳ ಬೇಡಿಕೆ. ಆದರೆ ಆ ಜಾಗದಲ್ಲಿ ಕಾನೂನಿನ ತೊಡಕು ಇದ್ದಿದ್ದರಿಂದ ಈವರೆಗೂ ಸ್ಮಾರಕ ನಿರ್ಮಾಣ ಆಗಲಿಲ್ಲ. ಅಲ್ಲಿದ್ದ ವಿಷ್ಣುವರ್ಧನ್ ಸಮಾಧಿಯನ್ನು ಇತ್ತೀಚೆಗೆ ನೆಲಸಮ ಮಾಡಲಾಗಿತ್ತು. ಆ ಬಳಿಕ ಆ ಜಾಗ ಎಲ್ಲರ ಕೇಂದ್ರಬಿಂದು ಆಯಿತು. ಈಗ ಅಭಿಮಾನ್ ಸ್ಟುಡಿಯೋ (Abhiman Studio) ಜಾಗವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಅರಣ್ಯಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೆ ಅಭಿಮಾನಿಗಳಿಗೆ ವಿಷ್ಣು ಪುಣ್ಯಭೂಮಿ ಸಿಗಲಿದೆ ಎಂಬ ಭರವಸೆ ಮೂಡಿದೆ. ಈ ಬಗ್ಗೆ ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ (Veerakaputra Srinivas) ಅವರು ಮಾತನಾಡಿದ್ದಾರೆ.
‘ಈ ಕ್ಷಣಕ್ಕೆ ಖುಷಿ ಆಗುತ್ತಿದೆ. ಅಭಿಮಾನ್ ಸ್ಟುಡಿಯೋದಲ್ಲಿ ಅವ್ಯವಹಾರ ನಡೆದಿದೆ ಎಂದು ನಾವು, ಕುಟುಂಬದವರು ಹಾಗೂ ಸಮಸ್ತ ಅಭಿಮಾನಿಗಳು ಹೇಳುತ್ತಲೇ ಬಂದಿದ್ದೇವೆ. ಸ್ಟುಡಿಯೋಗೆ ಕೊಟ್ಟ ಜಾಗವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ನ್ಯಾಯಾಂಗ ತನಿಖೆ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ ಆಗಲೇ ಇಲ್ಲ. ವಿಷ್ಣುವರ್ಧನ್ ಸಮಾಧಿ ನೆಲಸಮ ಆದ ತಕ್ಷಣ, ಈ ರೀತಿಯ ಒಂದು ಹಗರಣ ಬಯಲಿಗೆ ಬರುವಂತೆ ಆಗಿದೆ’ ಎಂದಿದ್ದಾರೆ ವೀರಕಪುತ್ರ ಶ್ರೀನಿವಾಸ್.
‘ಅರಣ್ಯ ಉಪ ಸಂರಕ್ಷಣಾಧಿಕಾರಿ ರವಿಕುಮಾರ್ ಅವರು ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ. ಒಂದು ಎಕರೆಯನ್ನು 14 ಕೋಟಿ 37 ಲಕ್ಷಕ್ಕೆ ಸೇಲ್ ಅಗ್ರಿಮೆಂಟ್ ಮಾಡಿದ್ದಾರೆ. ಅಂದರೆ, 10 ಎಕರೆಗೆ 144 ಕೋಟಿ ರೂಪಾಯಿ. ಸರ್ಕಾರದ ಮೂಗಿನ ಅಡಿಯಲ್ಲಿ ಒಂದು ದೊಡ್ಡ ಹಗರಣ ಆಗುತ್ತಿತ್ತು. ಅದು ಯಜಮಾನರ (ವಿಷ್ಣುವರ್ಧನ್) ಪುಣ್ಯಭೂಮಿಯ ಕಾರಣಕ್ಕೆ ಬಹಿರಂಗ ಆಗಿದೆ’ ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.
‘ಜೊತೆಗೆ ಒಂದು ಆತಂಕ ಕೂಡ ಇದೆ. ಅದನ್ನು ಅರಣ್ಯ ಭೂಮಿ ಎಂದು ಸರ್ಕಾರ ಘೋಷಣೆ ಮಾಡಿದೆ. ಹಾಗಾದರೆ ಅಲ್ಲಿ ವಿಷ್ಣುವರ್ಧನ್ ಪುಣ್ಯಭೂಮಿ ಮಾಡುವ ಉದ್ದೇಶ ಇದೆಯೋ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಹಾಗಾಗಿ ನಾವು ಮಿಶ್ರ ಭಾವನೆಯಲ್ಲಿ ಇದ್ದೇವೆ. ಅರಣ್ಯ ಭೂಮಿ ಕಾಯ್ದೆಗೆ ತೊಂದರೆ ಆಗದಂತೆ ಸರಳವಾಗಿ ವಿಷ್ಣುವರ್ಧನ್ ವಿಶ್ರಾಂತಿ ವನ ಎಂಬ ರೀತಿಯಲ್ಲಿ ಅವರ ನೆನಪನ್ನು ಉಳಿಸುವಂತಹ ಪ್ರಯತ್ನ ಮಾಡಬೇಕು ಅಂತ ಒತ್ತಾಯಿಸುತ್ತೇನೆ’ ಎಂದಿದ್ದಾರೆ ಶ್ರೀನಿವಾಸ್.
ಇದನ್ನೂ ಓದಿ: ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪುತ್ರ ಶ್ರೀನಿವಾಸ್
‘ಈ ಹಿಂದೆ ಅನಿರುದ್ಧ್ ಮತ್ತು ಭಾರತಿ ಮೇಡಂ ಅವರು ಒತ್ತಾಯಿಸಿದ್ದರು. ಡಿಸಿ ಶಂಕರ್ ಅವರು ಮುಟ್ಟಗೋಲು ಪ್ರಯತ್ನ ಆರಂಭಿಸಿದ್ದರು. ಆದರೆ ಕೆಲವು ರಾಜಕೀಯ ಒತ್ತಡಗಳಿಂದ ಅದು ನಿಂತು ಹೋಗಿತ್ತು. ಈಗಲೂ ಹಾಗೆ ಆಗಬಾರದು ಎಂಬುದು ನಮ್ಮ ಉದ್ದೇಶ. ಈಗ ಅನಿರುದ್ಧ್ ಅವರು ನನಗೆ ಒಂದು ಮೆಸೇಜ್ ಕಳಿಸುತ್ತಾರೆ ಅಂತ ಕಾದೆ. ಅವರು ಮಾಡಿಲ್ಲ. ನಾನೇ ಅವರನ್ನು ಹೋಗಿ ಭೇಟಿ ಆಗುತ್ತೇನೆ. ಎಲ್ಲರೂ ಸೇರಿ ಅಮೃತ ಮಹೋತ್ಸವ ಮಾಡುತ್ತೇನೆ. ಅನಿರುದ್ಧ್ ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯ ಇದ್ದಿದ್ದು ನಿಜ. ಅವರು ಮೈಸೂರಿಗೆ ಹೋದಾಗ ಅಭಿಮಾನಿಗಳಿಗೆ ಬೇಸರ ಆಗಿತ್ತು. ಈಗ ಒಟ್ಟಿಗೆ ಕೂಡಿ ಹೋಗುತ್ತೇವೆ’ ಎಂಬುದು ವೀರಕಪುತ್ರ ಶ್ರೀನಿವಾಸ್ ಅವರ ಮಾತುಗಳು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







