ನಡುಬೆಟ್ಟು ಅಪ್ಪಣ್ಣ: ಕೊಲ್ಕತ್ತಾ ಚಿತ್ರೋತ್ಸವದಲ್ಲಿ ಮೆಚ್ಚುಗೆ ಪಡೆದ ಅರೆ ಭಾಷೆ ಸಿನಿಮಾ
ಅರೆಭಾಷೆಯಲ್ಲಿ ಸಿದ್ಧವಾದ ‘ನಡುಬೆಟ್ಟು ಅಪ್ಪಣ್ಣ’ ಸಿನಿಮಾಗೆ ಅನುಪಮ ಶರಧಿ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಟರಾಜ್ ಹೊನ್ನವಳ್ಳಿ ಅವರು ನಡುಬೆಟ್ಟು ಅಪ್ಪಣ್ಣನ ಪಾತ್ರವನ್ನು ನಿಭಾಯಸಿದ್ದಾರೆ. ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಪೂರ್ತಿ ಅರೆಭಾಷೆಯಲ್ಲಿ (Arebhashe) ಮೂಡಿಬಂದ ‘ನಡುಬೆಟ್ಟು ಅಪ್ಪಣ್ಣ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅನುಪಮ ಶರಧಿ ಅವರು ನಿರ್ದೇಶಕಿಯಾಗಿ ಕಾಲಿಟ್ಟಿದ್ದಾರೆ. ‘ಭವಿಷ್ಯ ಸಿನಿಮಾಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಈ ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ. ಬಿಡುಗಡೆಗೂ ಮೊದಲೇ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 2 ದಿನ ಮತ್ತು ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಅಲ್ಲಿ ಈ ಸಿನಿಮಾ ವೀಕ್ಷಿಸಿದವರು ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ‘ನಡುಬೆಟ್ಟು ಅಪ್ಪಣ್ಣ’ (Nadubettu Appanna) ಚಿತ್ರತಂಡಕ್ಕೆ ಖುಷಿ ಆಗಿದೆ.
ಮೂಲತಃ ಗಾಯಕಿ ಆಗಿರುವ ಅನುಪಮ ಶರಧಿ ಅವರು ‘ನಡುಬೆಟ್ಟು ಅಪ್ಪಣ್ಣ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆ ಇದೆ. ಸ್ಯಾಂಡಲ್ವುಡ್ ನಿರ್ದೇಶಕಿಯರ ಸಾಲಿಗೆ ಈಗ ಅನುಪಮ ಶರಧಿ ಕೂಡ ಸೇರ್ಪಡೆ ಆಗಿದ್ದಾರೆ. ಇದಕ್ಕೂ ಮುನ್ನ ಕೆಲವು ಸರ್ಕಾರಿ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿದ ಅನುಭವ ಅವರಿಗೆ ಇದೆ. ‘ನಡುಬೆಟ್ಟು ಅಪ್ಪಣ್ಣ’ ಸಿನಿಮಾಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಲ್ಲದೇ ನಿರ್ಮಾಪಕಿಯೂ ಆಗಿದ್ದಾರೆ.
ಈ ಸಿನಿಮಾದಲ್ಲಿ ನಟರಾಜ್ ಹೊನ್ನವಳ್ಳಿ ಅವರು ನಡುಬೆಟ್ಟು ಅಪ್ಪಣ್ಣನ ಪಾತ್ರವನ್ನು ಮಾಡಿದ್ದಾರೆ. ಸುಮತಿ, ಜಗನ್ನಾಥ್, ನಿಶಾಂತ್, ಭವಾನಿ ಶಂಕರ್ ಅಡ್ತಲೆ, ಆಡೂರ್ ಬಾಲಕೃಷ್ಣ ಕಾಸರಗೋಡು, ಲಾಲಿತ್ಯ, ಜೀವನ್ ಸುಳ್ಯ ಕೆರೆಮೂಲೆ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಅಭಿಷೇಕ್ ಅಣಗಲ್ಲಿ ಹಾಗೂ ಧನುಷ್ ಮೈಸೂರು ಅವರು ಛಾಯಾಗ್ರಹಣ ಮಾಡಿದ್ದಾರೆ. ಕುಮಾರ್ ಈಶ್ವರ್ ಅವರು ಸಂಗೀತ ನೀಡಿದ್ದಾರೆ.
ಇದನ್ನೂ ಓದಿ: ಒಂದು ರಾಜ್ಯ, ಹಲವು ಭಾಷೆ; ಕರುನಾಡಿನ ಕನ್ನಡ ನುಡಿಗಳಿವು
‘ನಡುಬೆಟ್ಟು ಅಪ್ಪಣ್ಣ’ ಸಿನಿಮಾ ಕಥೆ:
ಈ ಸಿನಿಮಾದ ಕಥೆಯು ದಬ್ಬಡ್ಕ ಎಂಬ ದೂರದ ಹಳ್ಳಿಯಲ್ಲಿ ವಾಸಿಸುವ ಅಪ್ಪಣ್ಣ ಎಂಬ ಜಿಪುಣ ಹಾಗೂ ಸ್ವಾರ್ಥಿ ವ್ಯಕ್ತಿ ಮತ್ತು ಅವನ ಕುಟುಂಬದ ಸುತ್ತ ಸುತ್ತುತ್ತದೆ. ಅವನು ಹಳ್ಳಿಯ ಕಷ್ಟಗಳ ಬಗ್ಗೆಯಾಗಲಿ ಅಥವಾ ಅವನ ಕುಟುಂಬದ ಅಗತ್ಯಗಳ ಬಗ್ಗೆಯಾಗಲಿ ಕಾಳಜಿ ವಹಿಸುವುದಿಲ್ಲ. ಅವನು ಸೇರಿದಂತೆ ಗ್ರಾಮಸ್ಥರು ಆಗಾಗ್ಗೆ ತಮ್ಮ ಮೇಲೆ ಮತ್ತು ತಮ್ಮ ತೋಟಗಳ ಮೇಲೆ ಆನೆ ದಾಳಿಯಿಂದ ಬಳಲುತ್ತಾರೆ. ಹತ್ತಿರದ ಪಟ್ಟಣಗಳು, ರಸ್ತೆಗಳು, ಆಸ್ಪತ್ರೆ, ಶಾಲೆಗಳು ಮುಂತಾದ ಮೂಲಭೂತ ಅವಶ್ಯಕತೆಗಳು ಇಲ್ಲದ ಗ್ರಾಮವದು.
ಹತ್ತಿರದ ಪಟ್ಟಣಗಳಿಗೆ ಹೋಗಲು ಅವರು ತೆಪ್ಪವನ್ನು ಬಳಸಬೇಕಾಗುತ್ತದೆ. ಇದರಿಂದಾಗಿ ಅವರು ಹಲವಾರು ಸಾವುಗಳನ್ನು ಅನುಭವಿಸಬೇಕಾಗುತ್ತದೆ. ಆನೆಯೊಂದು ತನ್ನ ತೋಟಗಳ ಮೇಲೆ ದಾಳಿ ಮಾಡಿದಾಗ ಅಪ್ಪಣ್ಣ ಥಟ್ಟನೆ ಚೇತರಿಸಿಕೊಳ್ಳುತ್ತಾನೆ. ಅದರಲ್ಲಿ ಅವನು ತನ್ನ ಹೆಂಡತಿ ಹಾಗೂ ಮಗನನ್ನು ಕಳೆದುಕೊಳ್ಳುತ್ತಾನೆ. ಈ ಘಟನೆಯ ನಂತರ, ಅಪ್ಪಣ್ಣ ಸಂಪೂರ್ಣವಾಗಿ ರೂಪಾಂತರಗೊಳ್ಳುತ್ತಾನೆ. ಮನೆ ಹಾಗೂ ತನ್ನ ತೋಟಗಳಿಗೆ ಸರಿಯಾದ ಸುರಕ್ಷತೆಯನ್ನು ಒದಗಿಸದೆ ಹಣವನ್ನು ಉಳಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅರಿತುಕೊಂಡ ಅಪ್ಪಣ್ಣ, ಸ್ವಾರ್ಥಿಯಾಗಿರುವುದಕ್ಕೆ ವಿಷಾದಿಸುತ್ತಾನೆ. ನಂತರ ಒಂದು ಟ್ರಸ್ಟ್ ರಚಿಸುತ್ತಾನೆ. ತನ್ನ ಇಡೀ ಆಸ್ತಿಯನ್ನು ತನ್ನ ಹಳ್ಳಿಯ ಕಲ್ಯಾಣಕ್ಕಾಗಿ ಸರ್ಕಾರಕ್ಕೆ ದಾನ ಮಾಡುತ್ತಾನೆ. ಇದು ಈ ಸಿನಿಮಾದ ಕಥಾಸಾರಾಂಶ ಎಂದು ಚಿತ್ರತಂಡ ಹೇಳಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




