ಹೀರೋ ಆದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ; ಕೈ ಜೋಡಿಸಿದ ‘ಕೆವಿಎನ್ ಪ್ರೊಡಕ್ಷನ್ಸ್’

ಗಿಲ್ಲಿ ನಟ ಅವರಿಂದ ದೊಡ್ಡ ಸುದ್ದಿ ಸಿಕ್ಕಿದೆ. ಅವರು ಹೀರೋ ಆಗಿ ನಟಿಸುತ್ತಿರುವ ಸಿನಿಮಾಗೆ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ಸಾಥ್ ನೀಡಿದೆ. ಚಂದ್ರಮೋಹನ್ ನಿರ್ದೇಶನ ಮಾಡಲಿರುವ ಈ ಸಿನಿಮಾಗೆ ಗಿಲ್ಲಿ ಜನ್ಮದಿನದಂದೇ ಮುಹೂರ್ತ ನಡೆಯಲಿದೆ. ಗಿಲ್ಲಿ ನಟ ಅವರನ್ನು ಹೀರೋ ಆಗಿ ದೊಡ್ಡ ಪರದೆಯಲ್ಲಿ ನೋಡಲು ಅಭಿಮಾನಿಗಳು ಕಾದಿದ್ದಾರೆ.

ಹೀರೋ ಆದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ; ಕೈ ಜೋಡಿಸಿದ ‘ಕೆವಿಎನ್ ಪ್ರೊಡಕ್ಷನ್ಸ್’
Gilli Nata New Movie Announcement

Updated on: Jun 16, 2026 | 7:09 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಟ್ರೋಫಿ ಗೆದ್ದ ಗಿಲ್ಲಿ ನಟ (Gilli Nata) ಅವರಿಗೆ ಸಿನಿಮಾಗಳಿಂದ ಸಖತ್ ಆಫರ್ ಬರುತ್ತಿವೆ. ಈಗಾಗಲೇ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ವಿಶೇಷ ಏನೆಂದರೆ ಅವರು ಈಗ ಹೀರೋ ಆಗುತ್ತಿದ್ದಾರೆ. ಅವರು ನಾಯಕ ನಟನಾಗಿ ಅಭಿನಯಿಸಲಿರುವ ಹೊಸ ಸಿನಿಮಾಗೆ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಬೆಂಬಲ ಸಿಕ್ಕಿದೆ. ‘ಜನ ನಾಯಗನ್’, ‘ಟಾಕ್ಸಿಕ್’ ರೀತಿಯ ದೈತ್ಯ ಸಿನಿಮಾಗಳನ್ನು ನಿರ್ಮಿಸಿದ ಈ ಸಂಸ್ಥೆಯು ಗಿಲ್ಲಿ ನಟನ ಸಿನಿಮಾಗೆ ಸಾಥ್ ನೀಡುತ್ತಿರುವುದು ವಿಶೇಷ.

ಗಿಲ್ಲಿ ನಟ ಅವರ ಈ ಹೊಸ ಸಿನಿಮಾಗೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಈ ಚಿತ್ರವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ಅರ್ಪಿಸಲಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ನ ಕಾರ್ಯಕಾರಿ ನಿರ್ಮಾಪಕರಾದ ನವೀನ್ ಮತ್ತು ಹರೀಶ್ ಅವರು ಚೊಚ್ಚಲ ಬಾರಿಗೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ವಿಷಯವನ್ನು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

ಸಿನಿಮಾದಲ್ಲಿ ಗಿಲ್ಲಿ ನಟ ಹೀರೋ ಎಂದಮೇಲೆ ಕಾಮಿಡಿ ಇರಲೇಬೇಕು. ಹೌದು, ಇದು ಅಪ್ಪಟ ಕಾಮಿಡಿ ಸಿನಿಮಾ. ಹಾಸ್ಯಮಯ ಸಿನಿಮಾಗಳಿಂದ ಖ್ಯಾತರಾದ ನಿರ್ದೇಶಕ ಚಂದ್ರಮೋಹನ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥಾಪಕ ಕೆ. ವೆಂಕಟ ನಾರಾಯಣ ಮತ್ತು ಬಿಸ್ನೆಸ್ ಹೆಡ್ ಸುಪ್ರಿತ್ ಅವರು ಹರೀಶ್ ಹಾಗೂ ನವೀನ್ಗೆ ಸಾಥ್ ನೀಡುತ್ತಿದ್ದಾರೆ.

ಗಿಲ್ಲಿ ನಟನ ಹೊಸ ಸಿನಿಮಾದ ಅನೌನ್ಸ್​ಮೆಂಟ್ ವಿಡಿಯೋ:

ಜೂನ್ 21ರಂದು ಈ ಚಿತ್ರ ಸೆಟ್ಟೇರಲಿದೆ. ಈ ವಿಷಯವನ್ನು ತಿಳಿಸಲು ವಿಭಿನ್ನವಾದ ಪ್ರೋಮೋ ಮಾಡಿ ಚಿತ್ರತಂಡ ಗಮನ ಸೆಳೆಯುತ್ತಿದೆ. ಗಿಲ್ಲಿ ನಟ ಅವರ ಜನ್ಮದಿನವಾದ ಜೂನ್ 21ರಂದೇ ಈ ಸಿನಿಮಾಗೆ ಮುಹೂರ್ತ ನೆರವೇರಿಸಲಿರುವುದು ವಿಶೇಷ. ಗಿಲ್ಲಿ ಜೊತೆ ಸಿನಿಮಾದ ಪಾತ್ರವರ್ಗದಲ್ಲಿ ಇನ್ನೂ ಯಾರೆಲ್ಲ ಇರಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟನ ಹೊಸ ಸಿನಿಮಾ ‘ಸರ್ವೇ ನಂಬರ್ 45’

ಸಿನಿಮಾ ಘೋಷಣೆ ಮಾಡುವ ಸಲುವಾಗಿ ಗಿಲ್ಲಿ, ಚಂದ್ರಮೋಹನ್, ನವೀನ್ ಮತ್ತು ಹರೀಶ್ ಅವರು ಕೆ. ವೆಂಕಟ ನಾರಾಯಣ ಅವರನ್ನು ಭೇಟಿ ಮಾಡಿದ್ದಾರೆ. ‘ಹೀರೋ ಆಗಿ ನಟಿಸುತ್ತಿರುವ ಗಿಲ್ಲಿಯವರೇ ನಿಮಗೆ ಅಭಿನಂದನೆಗಳು. ನಾನು ಮೊದಲೇ ಈ ಕಥೆ ಕೇಳಿದ್ದೇನೆ. ನಿಮಗೆ ಈ ಕಥೆ ಹೊಂದಿಕೆ ಆಗುತ್ತದೆ. ಪ್ರತಿಭೆ ಇರುವವರಿಗೆಲ್ಲ ಕೆವಿಎನ್ ಪ್ರೊಡಕ್ಷನ್ಸ್ ಬೆಂಬಲ ಯಾವಾಗಲೂ ಇರುತ್ತದೆ’ ಎಂದು ಕೆ. ವೆಂಕಟ ನಾರಾಯಣ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us