ಶಾಲೆಯ ಪರೀಕ್ಷೆಯಲ್ಲಿ ಪುನೀತ್​ ಬಗ್ಗೆ ಪ್ರಶ್ನೆ; ಸಖತ್​ ವೈರಲ್​ ಆಗಿದೆ ಪ್ರಶ್ನೆಪತ್ರಿಕೆಯ ಫೋಟೋ

| Updated By: ಮದನ್​ ಕುಮಾರ್​

Updated on: Mar 26, 2022 | 9:08 AM

Puneeth Rajkumar: ಸೋಶಿಯಲ್ ಮೀಡಿಯಾದಲ್ಲಿ ಈ ಪ್ರಶ್ನೆ ಪತ್ರಿಕೆಯ ಫೋಟೋ ವೈರಲ್​ ಆಗುತ್ತಿದೆ. ಮಕ್ಕಳಿಗೆ ಪುನೀತ್ ರಾಜ್​ಕುಮಾರ್​​ ಕುರಿತು ತಿಳಿಸಲು ಶಾಲೆಯವರು ಮಾಡಿರುವ ಪ್ರಯತ್ನಕ್ಕೆ ಎಲ್ಲರೂ ಭೇಷ್​ ಎನ್ನುತ್ತಿದ್ದಾರೆ.

ಶಾಲೆಯ ಪರೀಕ್ಷೆಯಲ್ಲಿ ಪುನೀತ್​ ಬಗ್ಗೆ ಪ್ರಶ್ನೆ; ಸಖತ್​ ವೈರಲ್​ ಆಗಿದೆ ಪ್ರಶ್ನೆಪತ್ರಿಕೆಯ ಫೋಟೋ
ಶಾಲೆಯ ಪರೀಕ್ಷೆಯಲ್ಲಿ ಪುನೀತ್​ ಬಗ್ಗೆ ಪ್ರಶ್ನೆ
Follow us on

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರದ್ದು ಎಲ್ಲರಿಗೂ ಮಾದರಿ ಆಗುವಂತಹ ವ್ಯಕ್ತಿತ್ವ. ಕೇವಲ ಸಿನಿಮಾ ನಟನಾಗಿ ಮಾತ್ರ ಅವರು ಸಾಧನೆ ಮಾಡಿರಲಿಲ್ಲ. ಅದರ ಜೊತೆ ಸಾಮಾಜಿಕ ಕೆಲಸಗಳ ಮೂಲಕವೂ ಅಭಿಮಾನಿಗಳ (Puneeth Rajkumar Fans) ಮನ ಗೆದ್ದಿದ್ದರು. ಆದರೆ ತಮ್ಮ ಕಾರ್ಯಗಳ ಬಗ್ಗೆ ಅವರು ಎಲ್ಲಿಯೂ ಪ್ರಚಾರ ಪಡೆದಿರಲಿಲ್ಲ. ‘ಕನ್ನಡದ ಕೋಟ್ಯಧಿಪತಿ’ ಶೋ ನಿರೂಪಣೆ ಮಾಡಿದ್ದಕ್ಕಾಗಿ ಸಿಕ್ಕ ಕೋಟ್ಯಂತರ ರೂಪಾಯಿ ಸಂಭಾವನೆಯನ್ನು ಅವರು ಬಡ ಹೆಣ್ಣು ಮಕ್ಕಳ ಶಾಲೆ ನಿರ್ಮಾಣಕ್ಕಾಗಿ ಮೀಸಲಿಟ್ಟರು. ಆ ಶಾಲೆಯಲ್ಲಿ ಯಾವುದೇ ತಾರತಮ್ಯ ಇಲ್ಲದೇ ಎಲ್ಲರಿಗೂ ಶಿಕ್ಷಣ ಸಿಗಬೇಕು ಅಂತ ಬಯಸಿದರು. ಅದರ ಫಲವಾಗಿ ಮೈಸೂರಿನ ಶಕ್ತಿಧಾಮದಲ್ಲಿ ಇಂದು ಶಾಲೆಯ ಕಟ್ಟಡ ನಿರ್ಮಾಣ ಆಗಿದೆ. ಶೀಘ್ರದಲ್ಲೇ ಅದು ಕಾರ್ಯಾರಂಭ ಮಾಡಲಿದೆ. ಇಂಥ ಚಿನ್ನದ ಹೃದಯದ ವ್ಯಕ್ತಿ ಬಗ್ಗೆ ಎಲ್ಲ ಮಕ್ಕಳು ತಿಳಿದುಕೊಳ್ಳಲೇ ಬೇಕು. ಆ ನಿಟ್ಟಿನಲ್ಲಿ ಹಲವು ಶಾಲೆಗಳು ಕೂಡ ಪ್ರಯತ್ನ ಮಾಡುತ್ತಿವೆ. ಅದಕ್ಕೆ ಬೆಸ್ಟ್​ ಉದಾಹರಣೆ ಎಂದರೆ ಈಗ ವೈರಲ್​ ಆಗಿರುವ ಪ್ರಶ್ನೆ ಪತ್ರಿಕೆ. ಬೆಂಗಳೂರಿನ ಖಾಸಗಿ ಶಾಲೆಯೊಂದರ (Bengaluru schools) ಪರೀಕ್ಷೆಯಲ್ಲಿ ಮಕ್ಕಳಿಗೆ ಪುನೀತ್​ ರಾಜ್​ಕುಮಾರ್​ ಕುರಿತು ಪ್ರಶ್ನೆ ಕೇಳಲಾಗಿದೆ.

ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ವಿಷಯದ ಪರೀಕ್ಷೆ ನಡೆಸಲಾಗಿದ್ದು, ಅದರ ಪ್ರಶ್ನೆ ಪತ್ರಿಕೆಯಲ್ಲಿ ಪುನೀತ್​ ರಾಜ್​ಕುಮಾರ್​ ಕುರಿತು ಪ್ರಶ್ನೆ ಕೇಳಲಾಗಿದೆ. ಅದರ ಫೋಟೋ ವೈರಲ್​ ಆಗಿದೆ. ‘ಕೆಳಗೆ ಕೊಟ್ಟಿರುವ ಗದ್ಯ ಭಾಗವನ್ನು ಓದಿ, ಪ್ರಶ್ನೆಗಳಿಗೆ ಉತ್ತರಿಸಿ’ ಎಂಬ ವಿಭಾಗದಲ್ಲಿ ಪುನೀತ್ ರಾಜ್​ಕುಮಾರ್​ ಅವರ ಕಿರು ಪರಿಚಯ ಮತ್ತು ಸಾಧನೆ ಬಗ್ಗೆ ಮಾಹಿತಿ ನೀಡಲಾಗಿದೆ. ಅದನ್ನು ಓದಿಕೊಂಡು, ಮುಂದಿನ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ಬರೆಯಬೇಕು.

ಸೋಶಿಯಲ್ ಮೀಡಿಯಾದಲ್ಲಿ ಈ ಪ್ರಶ್ನೆ ಪತ್ರಿಕೆಯ ಫೋಟೋ ವೈರಲ್​ ಆಗುತ್ತಿದೆ. ಮಕ್ಕಳಿಗೆ ಪುನೀತ್​ ಕುರಿತು ತಿಳಿಸಲು ಶಾಲೆಯವರು ಮಾಡಿರುವ ಪ್ರಯತ್ನಕ್ಕೆ ಎಲ್ಲರೂ ಭೇಷ್​ ಎನ್ನುತ್ತಿದ್ದಾರೆ. ಶಾಲೆಯ ಪಠ್ಯದಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಸಾಧನೆ ಮತ್ತು ಜನಪರ ಕಾರ್ಯಗಳ ಬಗ್ಗೆ ಪಾಠ ಅಳವಡಿಸಬೇಕು ಎಂಬ ಅಭಿಪ್ರಾಯ ಕೂಡ ಅನೇಕರಿಂದ ವ್ಯಕ್ತವಾಗುತ್ತಿದೆ.

ಕನ್ನಡ ಚಿತ್ರರಂಗಕ್ಕೆ ಪುನೀತ್​ ರಾಜ್​ಕುಮಾರ್ ಅವರು ನೀಡಿದ ಕೊಡುಗೆ ಅಪಾರ. ಬಾಲನಟನಾಗಿಯೇ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಅನೇಕ ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಿದರು. ‘ಅಪ್ಪು’ ಸಿನಿಮಾ ಮೂಲಕ ಹೀರೋ ಆದರು. ಡಾ. ರಾಜ್​ಕುಮಾರ್ ಪುತ್ರ ಆಗಿದ್ದರೂ ಕೂಡ ನಟನೆ ಮೂಲಕ ಸ್ವಂತ ಐಡೆಂಟಿಟಿ ಬೆಳೆಸಿಕೊಂಡರು. ಗಾಯಕನಾಗಿ, ನಿರ್ಮಾಪಕನಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿದರು. ‘ಪಿಆರ್​ಕೆ ಪ್ರೊಡಕ್ಷನ್ಸ್​’ ಸಂಸ್ಥೆ ಮೂಲಕ ಅನೇಕ ಹೊಸ ಪ್ರತಿಭೆಗಳಿಗೆ ಅವರು ಅವಕಾಶ ನೀಡಿದರು. ಮಾಡಬೇಕಾದ ಕೆಲಸಗಳು ಇನ್ನೂ ಸಾಕಷ್ಟು ಇದ್ದವು. ಆದರೆ ಅಷ್ಟರಲ್ಲೇ ಅವರು ಇಹಲೋಕ ತ್ಯಜಿಸುವಂತಾಗಿದ್ದು ನೋವಿನ ಸಂಗತಿ.

ಪುನೀತ್​ ರಾಜ್​ಕುಮಾರ್​ ಅವರನ್ನು ಜನರು ದೇವರಂತೆ ನೋಡುತ್ತಾರೆ. ಅನೇಕ ಕಡೆಗಳಲ್ಲಿ ದೇವರ ಪಕ್ಕದಲ್ಲಿ ಅವರ ಫೋಟೋ ಇಟ್ಟು ಪೂಜೆ ಮಾಡಲಾಗುತ್ತಿದೆ. ಜಾತ್ರೆ, ಉತ್ಸವ, ಹಬ್ಬ-ಹರಿದಿನಗಳಲ್ಲಿ ಅಪ್ಪು ಫೋಟೋ ರಾರಾಜಿಸುತ್ತಿದೆ. ಜನರ ಮನಸ್ಸಿನಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೆ ಯಾವ ಸ್ಥಾನ ಇದೆ ಎಂಬುದಕ್ಕೆ ಈ ಎಲ್ಲ ಘಟನೆಗಳೇ ಸಾಕ್ಷಿ. ಪುನೀತ್​ ರಾಜ್​ಕುಮಾರ್​ ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ‘ಜೇಮ್ಸ್​’ ಮಾ.17ರಂದು ಅವರ ಜನ್ಮದಿನದ ಪ್ರಯುಕ್ತ ತೆರೆಕಂಡಿತು. ಈ ಸಿನಿಮಾ ನಾಲ್ಕು ದಿನಕ್ಕೆ 100 ಕೋಟಿ ರೂಪಾಯಿ ಗಳಿಸಿದೆ ಎಂಬ ಬಗ್ಗೆ ವರದಿ ಆಗಿದೆ.

ಇದನ್ನೂ ಓದಿ:

‘RRR​’ ನೋಡಲು ಬಂದರು, ಪುನೀತ್​ಗೆ ಜೈಕಾರ ಹಾಕಿದರು; ಅಪ್ಪು ಮೇಲಿನ ಅಭಿಮಾನ ನಿರಂತರ

3 ದಿನ ಸಾರಿ ಕೇಳಿದ್ರು ಪುನೀತ್​; ಅದಕ್ಕೆ ಕಾರಣ ಆಗಿದ್ದ ಆ ಘಟನೆ ಬಗ್ಗೆ ವಿವರಿಸಿದ ‘ಜೇಮ್ಸ್​’ ವಿಲನ್​