ಬ್ರೆಡ್, ಚಿಪ್ಸ್, ಖಾರ ಬನ್ ತಿಂದ ಪ್ರಕರಣ ಇದು: ಪ್ರಥಮ್ ಆರೋಪಕ್ಕೆ ದರ್ಶನ್ ಫ್ಯಾನ್ಸ್ ತಿರುಗೇಟು
ದರ್ಶನ್ ಅಭಿಮಾನಿಗಳು ನಟ ಪ್ರಥಮ್ ಮೇಲೆ ಹಲ್ಲೆ ಯತ್ನ ಮಾಡಿದರು ಎಂಬ ಆರೋಪ ಇದೆ. ಆದರ ಬಗ್ಗೆ ಈಗ ದರ್ಶನ್ ಅಭಿಮಾನಿಗಳ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರತಿಕ್ರಿಯೆ ನೀಡಲಾಗಿದೆ. ಪ್ರಥಮ್ ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಈ ಮೂಲಕ ಕೇಳಲಾಗಿದೆ. ಅದಕ್ಕೆ ಪ್ರಥಮ್ ಕೂಡ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ನಟ ಪ್ರಥಮ್ ಅವರ ಮೇಲೆ ದರ್ಶನ್ (Darshan) ಅಭಿಮಾನಿಗಳಿಂದ ಹಲ್ಲೆ ಯತ್ನ ಮಾಡಲಾಯಿತು ಎಂಬ ಆರೋಪ ಕೇಳಿಬಂದಿದೆ. ಅದರಿಂದಾಗಿ ವಿವಾದ ಸೃಷ್ಟಿ ಆಗಿದೆ. ಈ ಕುರಿತು ದರ್ಶನ್ ಅಭಿಮಾನಿಗಳ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಿರುಗೇಟು ನೀಡಲಾಗಿದೆ. ಪ್ರಥಮ್ (Pratham) ಅವರಿಗೆ ಕೆಲವು ಪ್ರಶ್ನೆಗಳನ್ನು ದರ್ಶನ್ ಅಭಿಮಾನಿಗಳು ಕೇಳಿದ್ದಾರೆ. ‘ಪ್ರಥಮ್ ಮೇಲೆ ಹಲ್ಲೆ ಪ್ರಕರಣದ ಸತ್ಯ ಹೊರ ಬಂದಿದೆ. ರೌಡಿಗಳ ಜೊತೆ ಹೋಗಿ ಅವರ ಕಾರ್ಯಕ್ರಮದಲ್ಲಿ ಅವರ ಹತ್ತಿರನೇ ತಿಂದು ಅವರಿಗೆ ರೇಗಿಸಿ ಬ್ರೆಡ್ ಚಿಪ್ಸ್ ಕೇಳಿ ಖಾರ ಬನ್ ತಿಂದ ಪ್ರಕರಣವಿದು’ ಎಂದು ದರ್ಶನ್ ಫ್ಯಾನ್ಸ್ (Darshan Fans) ಬರೆದುಕೊಂಡಿದ್ದಾರೆ.
‘ನಮ್ಮ ಪ್ರಶ್ನೆ, ದರ್ಶನ್ ಅವರು ಜೈಲಲ್ಲಿ ಇದ್ದಾಗ ಅಭಿಮಾನಿಗಳಿಗೆ ಪ್ರಚೋದನೆ ಹೇಳಿಕೆ ನೀಡಿ ಕಾಮೆಂಟ್ ಮಾಡಿದವರ ವಿರುದ್ಧ ಸಾಲು ಸಾಲು ದೂರು ದಾಖಲಿಸಿದ ಕುತಂತ್ರಿಗೆ ಹಲ್ಲೆ ನಡೆದರೂ ದೂರು ನೀಡಿದಷ್ಟು ಒಳ್ಳೆ ಮನಸ್ಸು ಇದೆಯಾ? ಕಾರಣ ಇಷ್ಟೇ, ಅಂದು ಪೊಲೀಸ್ ದೂರು ನೀಡಲು ವೈದ್ಯರ ವರದಿ ಬೇಕು. ಸರ್ಕಾರಿ ಆಸ್ಪತ್ರೆಗೆ ಹೋದರೆ ವೈದ್ಯರ ಪರೀಕ್ಷೆಯಲ್ಲಿ ಕುಡಿದಿರುವುದು ಬೆಳಕಿಗೆ ಬರುತ್ತದೆ. ಕುಡುಕರ ಗಲಾಟೆ ಎಂದು ವರದಿ ನೀಡುತ್ತಾರೆ. ಎರಡು ಮೂರು ದಿನ ಕಳೆದರೆ ಸತ್ಯ ಯಾರಿಗೂ ತಿಳಿಯುವುದಿಲ್ಲ. ಇದು ನಿಮ್ಮ ಗೇಮ್ ಹಾಗೂ ನಿಮಗೆ ಪ್ರೋತ್ಸಾಹ ಧನ ಸಹಾಯ ಮಾಡುವವರ ಹುನ್ನಾರ. ಹೇಗಿದ್ರೂ ನೀವು ನಿರ್ದೇಶಕರು ಅಲ್ಲವೇ ಸ್ವಾಮಿ. ಕಥೆ ಚಿತ್ರಕಥೆ ಸಂಭಾಷಣೆ ಚೆನ್ನಾಗಿ ರಚನೆ ಮಾಡಿದ್ದೀರಿ’ ಎಂದಿದ್ದಾರೆ ದರ್ಶನ್ ಅಭಿಮಾನಿಗಳು.
‘ರೌಡಿಗಳ ಕಾರ್ಯಕ್ರಮದಲ್ಲಿ ನಿಮಗೆ ಏನು ಕೆಲಸ? ನೀವು ಸಭ್ಯರು ತಾನೆ? ರೌಡಿಗಳು ಅಂತ ತಿಳಿದ ಕೂಡಲೇ ಕಾರು ಹತ್ತಿ ಹೋಗಬೇಕಿತ್ತು. ಅವರ ಜೊತೆ ಸಮಯ ಕಳೆದು ಮತ್ತಿನಲ್ಲಿ ಮಾಡಿಕೊಂಡ ಎಡವಟ್ಟಿಗೆ ಬಾಸ್ ಹೆಸರು ತಳುಕು ಯಾಕೆ? ದರ್ಶನ್ ಅವರ ಅಧಿಕೃತ ಸಂಘಟನೆಗಳು ನೂರಾರಿವೆ. ರಿಜಿಸ್ಟರ್ ಪಟ್ಟಿ ನಮ್ಮತ್ರ ಇದೆ. ನಮ್ಮ ಸಂಘದ ಸದಸ್ಯರು, ಪದಾಧಿಕಾರಿಗಳು ಯಾರಾದ್ರೂ ಬೆದರಿಕೆ ಹಾಕಿದರೆ ಹೇಳಿ ಸ್ವಾಮಿ. ಪ್ರೈವೇಟ್ ತೋಟದಲ್ಲಿ ಅಮಲಿನಲ್ಲಿ ನಡೆದ ಜಗಳಕ್ಕೆ ನಮ್ಮ ನಟ ಆಗಲಿ, ನಮ್ಮ ಅಭಿಮಾನಿಗಳು ಆಗಲಿ ಹೊಣೆ ಯಾಕೆ ಸ್ವಾಮಿ? ಗೂಂಡಾಗಳನ್ನು ಸಾಕಬೇಡಿ ಮನೆಯಲ್ಲಿ ನಾಯಿ ಸಾಕಿ ಅಂದ ನಟನಿಗೆ ಸಿನಿಮಾ ಪ್ರಚಾರಕ್ಕೆ ದುಡಿಲ್ಲ ಅಂದರೆ ಹೇಳಿ. ದರ್ಶನ್ ಅಣ್ಣ ಪ್ಲೀಸ್ ನಿಮ್ಮ ಮನೆ ನಾಯಿಗೆ ಹಾಕುವ ಊಟದಲ್ಲಿ ಚೂರು ಹಾಕಿ’ ಎಂದು ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ದರ್ಶನ್ ಅಭಿಮಾನಿಗಳ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ರಮ್ಯಾ
ಈ ಬಗ್ಗೆ ನಟ ಪ್ರಥಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ನೋಡ್ರಪ್ಪ ರಾಷ್ಟ್ರೀಯ ತನಿಖಾ ಸಂಸ್ಥೆ NIA, interpoleಗಿಂತಲೂ ದೊಡ್ಡ ತನಿಖಾ ಸಂಸ್ಥೆ ಈ ಬೇವರ್ಸಿಗಳ D company. ಥೂ ನಿನ್ third classಜನ್ಮಕ್ಕಿಷ್ಟು! ಚಿಪ್ಸು, ಪಪ್ಸು ತಿನ್ನೋಕೆ ರೌಡಿ ಹತ್ತಿರ ಹೋಗಿದ್ನಂತೆ ನಾನು. Enquiry ಮಾಡೋರಂತೆ, Education important. ನಾಳೆ SP ನಿಮಗೆ ಅಧಿಕೃತ ಕಾರಣ ಏನಾಯ್ತು ಅಂತ ಹೇಳ್ತಾರೆ! ಕಾಯಿರಿ’ ಎಂದು ಪ್ರಥಮ್ ಉತ್ತರ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








