ದರ್ಶನ್ ಹೊಸ ಸಿನಿಮಾದ ಮುಹೂರ್ತ: ಹೆಸರೇನು ಗೊತ್ತೆ?

|

Updated on: Nov 02, 2023 | 6:54 PM

Darshan Thugudeepa: ದರ್ಶನ್ ನಟಿಸಲಿರುವ ಹೊಸ ಸಿನಿಮಾದ ಮುಹೂರ್ತ ಸದ್ದಿಲ್ಲದೆ ಬೆಂಗಳೂರಿನಲ್ಲಿ ಇಂದು (ನವೆಂಬರ್ 2) ನೆರವೇರಿದೆ. ಆರು ವರ್ಷಗಳ ಬಳಿಕ ಮಿಲನಾ ಪ್ರಕಾಶ್ ನಿರ್ದೇಶನಕ್ಕಿಳಿದಿದ್ದು, ದರ್ಶನ್​ರ ಸಿನಿಮಾ ಮೂಲಕ ಕಮ್​ಬ್ಯಾಕ್ ಮಾಡುತ್ತಿದ್ದಾರೆ.

ದರ್ಶನ್ ಹೊಸ ಸಿನಿಮಾದ ಮುಹೂರ್ತ: ಹೆಸರೇನು ಗೊತ್ತೆ?
ದರ್ಶನ್
Follow us on

ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎನ್ನಲಾಗಿದೆ. ಸಿನಿಮಾದ ಪ್ರಚಾರ ಕಾರ್ಯಗಳು ಈ ತಿಂಗಳ ಅಂತ್ಯದಿಂದ ಆರಂಭವಾಗುವ ಸಾಧ್ಯತೆ ಇದೆ. ಇದರ ನಡುವೆ ದರ್ಶನ್ ತಮ್ಮ ಹೊಸ ಸಿನಿಮಾದ ಮುಹೂರ್ತವನ್ನು ನೆರವೇರಿಸಿದ್ದಾರೆ. ಸಿನಿಮಾದ ಹೆಸರು ಸಹ ಘೋಷಣೆ ಆಗಿದೆ. ನಿನ್ನೆ (ನವೆಂಬರ್ 01) ರಂದು ರಾಣೆಬೆನ್ನೂರಿನಲ್ಲಿ ಯಶಸ್ ಸೂರ್ಯ ನಾಯಕ ನಟನಾಗಿ ನಟಿಸಿರುವ ‘ಗರಡಿ’ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದರ್ಶನ್, ಇಂದು (ನವೆಂಬರ್ 02) ಬೆಂಗಳೂರಿನಲ್ಲಿ ತಮ್ಮ ಹೊಸ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿದ್ದರು. ದರ್ಶನ್​ರ ಹೊಸ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದು ಸಿನಿಮಾಕ್ಕೆ ‘ಡೆವಿಲ್: ದಿ ಹೀರೋ’ ಎಂದು ಹೆಸರಿಡಲಾಗಿದೆ. ಇದು ದರ್ಶನ್ ಅವರ 57ನೇ ಸಿನಿಮಾ.

ಬೆಂಗಳೂರಿನ ದೊಡ್ಡ ಗಣಪತಿ ದೇವಾಲಯದಲ್ಲಿ ಸಿನಿಮಾದ ಮುಹೂರ್ತ ಕಾರ್ಯ ನೆರವೇರಿತು. ಮುಹೂರ್ತ ಸಮಾರಂಭದಲ್ಲಿ ನಿರ್ದೇಶಕ ಮಿಲನ ಪ್ರಕಾಶ್, ನಿರ್ಮಾಪಕ ಚಿನ್ನಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮುಹೂರ್ತ ಕಾರ್ಯಕ್ರಮಕ್ಕೆ ಪಂಚೆ ಉಟ್ಟು ಬಂದ ದರ್ಶನ್ ಗಮನ ಸೆಳೆದರು. ಸಿನಿಮಾದ ಮುಹೂರ್ತ ನಡೆದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿರ್ದೇಶಕ ಪ್ರಕಾಶ್, ”ಸದ್ದಿಲ್ಲದೆ ಸೆಟ್ಟೇರಿದ ನನ್ನ ಮತ್ತು ಡಿ ಬಾಸ್ ರವರ D-57 ಹೊಸ ಸಿನಿಮಾ. ಜೈ ಮಾತಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನನ್ನ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರ ಹೊಸ ಸಿನೆಮಾದ ಮುಹೂರ್ತ ಇಂದು ಬೆಂಗಳೂರಿನ ದೊಡ್ಡ ಮಹಾ ಗಣಪತಿ ದೇವಸ್ಥಾನದಲ್ಲಿ ನೆಡೆಯಿತು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಮೈಸೂರು ಹುಲಿ ದಾಳಿ ಪ್ರಕರಣ: ಶೀಘ್ರದಲ್ಲೇ ಕೂಂಬಿಂಗ್ ಆಪರೇಷನ್ ಮಾಡಿಸುವುದಾಗಿ ಭರವಸೆ ಕೊಟ್ಟ ಶಾಸಕ ದರ್ಶನ್ ಧ್ರುವನಾರಾಯಣ್

ಇನ್ನು ಮಿಲನಾ ಪ್ರಕಾಶ್ ಹಾಗೂ ದರ್ಶನ್ ಕಾಂಬಿನೇಷನ್​ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿರಲಿದೆ. 2017ರಲ್ಲಿ ಬಿಡುಗಡೆ ಆಗಿದ್ದ ‘ತಾರಕ್’ ಸಿನಿಮಾವನ್ನು ಮಿಲನಾ ಪ್ರಕಾಶ್ ನಿರ್ದೇಶನ ಮಾಡಿದ್ದರು. ಆ ಸಿನಿಮಾದ ಬಳಿಕ ಪ್ರಕಾಶ್ ಇನ್ಯಾವುದೇ ಸಿನಿಮಾವನ್ನು ನಿರ್ದೇಶನ ಮಾಡಿರಲಿಲ್ಲ. ಬರೋಬ್ಬರಿ ಆರು ವರ್ಷದ ಗ್ಯಾಪ್ ಬಳಿಕ ಮತ್ತೆ ನಿರ್ದೇಶಕನ ಟೊಪ್ಪಿ ತೊಡುತ್ತಿದ್ದಾರೆ ಪ್ರಕಾಶ್.

ಪ್ರಕಾಶ್ ಕನ್ನಡದ ಯಶಸ್ವೀ ನಿರ್ದೇಶಕರಲ್ಲಿ ಒಬ್ಬರು. 2003 ರಲ್ಲಿ ‘ಖುಷಿ’ ಸಿನಿಮಾ ಮೂಲಕ ನಿರ್ದೇಶನ ಆರಂಭಿಸಿದ ಪ್ರಕಾಶ್, ಹಲವು ಅತ್ಯುತ್ತಮ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಆದರೆ ಏಕೋ ‘ತಾರಕ್’ ಸಿನಿಮಾದ ಬಳಿಕ ನಿರ್ದೇಶನದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ದರ್ಶನ್ ಸಿನಿಮಾ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.

ದರ್ಶನ್ ನಟಿಸಿರುವ ‘ಕಾಟೇರ’ ಸಿನಿಮಾ ಇದೇ ತಿಂಗಳು ಬಿಡುಗಡೆ ಆಗುವ ಸಾಧ್ಯತೆ ಇದೆ. ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ಹಳ್ಳಿ ಹಿನ್ನೆಲೆಯಲ್ಲಿ ನಡೆಯುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ರಾಧನಾ ರಾಮ್ ನಾಯಕಿಯಾಗಿ ನಟಿಸಿದ್ದು, ಹಿರಿಯ ನಟರಾದ ಕುಮಾರ್ ಗೋವಿಂದು, ಬಿರಾದರ ಇನ್ನೂ ಹಲವರು ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ