ಕಿರಿಕ್​ ಪಾರ್ಟಿ, ಬ್ಯಾಚುಲರ್​ ಪಾರ್ಟಿ ಆಯ್ತು.. ಈಗ ‘ಎಣ್ಣೆ ಪಾರ್ಟಿ’; ಸೆಟ್ಟೇರಿತು ಹೊಸಬರ ಕಾಮಿಡಿ ಸಿನಿಮಾ

ಈ ಸಿನಿಮಾಗೆ ಭರತ್ ಎಲ್. ಹಾಗೂ ಧನಂಜಯ್‌ ನಾಗರಾಜು ನಿರ್ದೇಶನ ಮಾಡುತ್ತಿದ್ದಾರೆ. ಬಹುತೇಕ ಹೊಸ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಮಾಡಲಾಗಿದೆ. ಪ್ರದೀಪ್ ಕುಮಾರ್ ಕೆ. ಅವರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬರಲಿದೆ. ಚಿತ್ರತಂಡ ಮತ್ತು ಸಿನಿಮಾದ ಥೀಮ್​ ಬಗ್ಗೆ ಇಲ್ಲಿದೆ ಮಾಹಿತಿ..

ಕಿರಿಕ್​ ಪಾರ್ಟಿ, ಬ್ಯಾಚುಲರ್​ ಪಾರ್ಟಿ ಆಯ್ತು.. ಈಗ ‘ಎಣ್ಣೆ ಪಾರ್ಟಿ’; ಸೆಟ್ಟೇರಿತು ಹೊಸಬರ ಕಾಮಿಡಿ ಸಿನಿಮಾ
‘ಎಣ್ಣೆ ಪಾರ್ಟಿ’ ಸಿನಿಮಾ ತಂಡ

Updated on: Jun 18, 2024 | 10:28 PM

ಗಾಂಧಿನಗರಕ್ಕೆ ಬರುವ ಪ್ರತಿ ಹೊಸಬರ ತಂಡ ಕೂಡ ಏನಾದರೂ ಡಿಫರೆಂಟ್​ ಆಗಿ ಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡಿರುತ್ತದೆ. ಈಗ ಹೊಸ ಕಲಾವಿದರು ಮತ್ತು ತಂತ್ರಜ್ಞರ ತಂಡವೊಂದು ಕುಡಿತದ ಕುರಿತಾದ ಸಿನಿಮಾ (Kannada Movie) ಮಾಡಿದೆ. ಈ ಮೊದಲು ‘ದ್ವಂದ್ವ’ ಸಿನಿಮಾ ಮಾಡಿದ್ದ ತಂಡದವರು ಈಗ ‘ಎಣ್ಣೆ ಪಾರ್ಟಿ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಆರಂಭಿಸಿದ್ದಾರೆ. ಕನ್ನಡದಲ್ಲಿ ಈಗಾಗಲೇ ‘ಕಿರಿಕ್​ ಪಾರ್ಟಿ’, ‘ಬ್ಯಾಚುಲರ್​ ಪಾರ್ಟಿ’ ಶೀರ್ಷಿಕೆಯಲ್ಲಿ ಸಿನಿಮಾಗಳು ಬಂದಿವೆ. ಈಗ ‘ಎಣ್ಣೆ ಪಾರ್ಟಿ’ ಸಿನಿಮಾ (Enne Party Movie) ಸೆಟ್ಟೇರಿದೆ. ಬೆಂಗಳೂರಿನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಈ ಸಿನಿಮಾಗೆ ಅದ್ದೂರಿ ಮುಹೂರ್ತ ಸಮಾರಂಭ ಮಾಡಲಾಯಿತು. ಸಿನಿಮಾ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

‘ಕಾಮನ್ ಮ್ಯಾನ್ ಪ್ರೊಡಕ್ಷನ್’ ಬ್ಯಾನರ್​ ಮೂಲಕ ಪ್ರದೀಪ್ ಕುಮಾರ್ ಕೆ. ಅವರು ‘ಎಣ್ಣೆ ಪಾರ್ಟಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದಿನ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡ ಧನಂಜಯ್‌ ನಾಗರಾಜು ಅವರ ಕೆಲಸವನ್ನು ಮೆಚ್ಚಿದ ನಿರ್ದೇಶಕ ಭರತ್ ಎಲ್. ಅವರು ಈ ಬಾರಿ ತಮ್ಮ ಜೊತೆ ಆ್ಯಕ್ಷನ್-ಕಟ್ ಹೇಳಲು ಧನಂಜಯ್‌ ನಾಗರಾಜು ಅವರನ್ನು ಸೇರಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರು ನಟಿಸಿದ್ದಾರೆ.

ಹೊಸ ಕಲಾವಿದರಾದ ಸಂತೋಷ್, ಶೋಭನ್, ಪ್ರೀತಿ, ವರುಣ್, ಮಂಜುಳಾ, ಮಂಜು ಸುವರ್ಣ, ಅಪ್ಪು ರಾಜ್, ರಾಮು ಕೊನ್ನಾರ್, ರಶ್ಮಿ, ಗ್ರೀಷ್ಮಾ, ದಿವ್ಯಾ, ವೈಶಾಖ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಶೀರ್ಷಿಕೆ ಮತ್ತು ಥೀಮ್​ಗೆ ತಕ್ಕಂತೆ 4 ಎಣ್ಣೆ ಸಾಂಗ್​ ಇರಲಿವೆ. ಇವುಗಳಿಗೆ ಆಕಾಶ್ ಪರ್ವ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಇದನ್ನೂ ಓದಿ: ಅಕ್ಷತಾ ಪಾಂಡವಪುರ ನಟನೆಯ ಹೊಸ ಸಿನಿಮಾ ‘ಕೌಮುದಿ’; ಸರಳವಾಗಿ ನಡೆಯಿತು ಮುಹೂರ್ತ

ಬೆಂಗಳೂರು ಸುತ್ತಮುತ್ತ 2 ಹಂತದಲ್ಲಿ ಈ ಸಿನಿಮಾಗೆ ಚಿತ್ರೀಕರಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್‌ಕಾಂತ್ ಕೆ. ಛಾಯಾಗ್ರಹಣ ಮಾಡಲಿದ್ದಾರೆ. ಸಿನಿಮಾದ ಥೀಮ್​ ಏನು ಎಂಬುದನ್ನು ನಿರ್ದೇಶಕರು ವಿವರಿಸಿದ್ದಾರೆ. ‘ಪ್ರೀತಿ ಎಂಬುದು ವಿಶ್ವದಾದ್ಯಂತ ಇದೆ. ಹಾಗೆಯೇ ಎಣ್ಣೆ ಕೂಡ ಯೂನಿವರ್ಸಲ್. 4 ಯುವ ಜೋಡಿಗಳ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಶ್ರೀಮಂತರು, ಬಡವರು ಎಲ್ಲರೂ ಕುಡಿಯುತ್ತಾರೆ. ಅದು ಒಳ್ಳೆಯದೋ ಅಥವಾ ಕೆಟ್ಟದ್ದೋ ಅಂತ ವಿಶ್ಲೇಷಣೆ ಮಾಡಲ್ಲ. ಕುಡಿತ ಮಿತಿ ಮೀರಿದರೆ ಏನಾಗುತ್ತದೆ ಎಂಬುದನ್ನು ಹಾಸ್ಯ ಮತ್ತು ಥ್ರಿಲ್ಲರ್ ಶೈಲಿಯಲ್ಲಿ ಮನರಂಜನಾತ್ಮಕವಾಗಿ ತೋರಿಸುವ ಪ್ರಯತ್ನ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us