Dollu Movie: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಡೊಳ್ಳು’ ಚಿತ್ರ ವೀಕ್ಷಿಸಿ, ಮೆಚ್ಚುಗೆ ಸೂಚಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ

Siddaramaiah: ‘ಡೊಳ್ಳು’ ಚಿತ್ರವನ್ನು ಸಿದ್ದರಾಮಯ್ಯ ಮೆಚ್ಚಿಕೊಂಡಿದ್ದಾರೆ. ‘ಡೊಳ್ಳು ಬಾರಿಸುವ ಕಲೆಯನ್ನು ಪ್ರಧಾನವಾಗಿ ಇರಿಸಿಕೊಂಡು ನಿರ್ಮಿಸಿದ ಈ ಸಿನಿಮಾ ಅತ್ಯಂತ ಸೊಗಸಾಗಿ ಮೂಡಿಬಂದಿದೆ’ ಎಂದು ಅವರು ಹೊಗಳಿದ್ದಾರೆ.

Dollu Movie: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಡೊಳ್ಳು’ ಚಿತ್ರ ವೀಕ್ಷಿಸಿ, ಮೆಚ್ಚುಗೆ ಸೂಚಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ಸಿದ್ದರಾಮಯ್ಯ ಜೊತೆ ‘ಡೊಳ್ಳು’ ಸಿನಿಮಾ ತಂಡ
Edited By:

Updated on: Aug 24, 2022 | 7:23 AM

ಒಳ್ಳೆಯ ಸಿನಿಮಾಗಳಿಗೆ ರಾಜಕಾರಣಿಗಳು ಕೂಡ ಬೆಂಬಲ ನೀಡುತ್ತಾರೆ. ಮಂಗಳವಾರ (ಆಗಸ್ಟ್​ 23) ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಬೆಂಗಳೂರಿನಲ್ಲಿ ಕನ್ನಡದ ‘ಡೊಳ್ಳು’ ಸಿನಿಮಾವನ್ನು ವೀಕ್ಷಿಸಿದರು. ರಾಜಕೀಯದ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಅವರು ಸಿನಿಮಾ ನೋಡಿದರು. ಈ ಚಿತ್ರ ಅವರಿಗೆ ತುಂಬ ಇಷ್ಟ ಆಗಿದೆ. ಹಲವು ಕಾರಣಗಳಿಂದಾಗಿ ‘ಡೊಳ್ಳು’ (Dollu Movie) ಚಿತ್ರ ಗಮನ ಸೆಳೆಯುತ್ತಿದೆ. ಈ ಸಿನಿಮಾಗೆ ಸಾಗರ್​ ಪುರಾಣಿಕ್​ ನಿರ್ದೇಶನ ಮಾಡಿದ್ದು, ಖ್ಯಾತ ನಿರ್ದೇಶಕ ಪವನ್​ ಒಡೆಯರ್​ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾ ರಾಷ್ಟ್ರ ಪ್ರಶಸ್ತಿಗೆ (National Award) ಭಾಜನವಾಗಿರುವುದು ವಿಶೇಷ. ಅಲ್ಲದೇ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮನ್ನಣೆ ಪಡೆದುಕೊಂಡಿದೆ. ಹೆಸರೇ ಹೇಳುವಂತೆ ಕರುನಾಡಿನ ಜನಪದ ಕಲೆಗಳಲ್ಲಿ ಒಂದಾದ ಡೊಳ್ಳು ಕುಣಿತದ ಬಗ್ಗೆ ಈ ಸಿನಿಮಾ ಕಥೆ ಇದೆ.

ಸಿನಿಮಾ ವೀಕ್ಷಿಸಿದ ಬಳಿಕ ಸಿದ್ದರಾಮಯ್ಯ ಅವರು ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಒರಾಯನ್ ಮಾಲ್​ನ ಚಿತ್ರಮಂದಿರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಡೊಳ್ಳು ಸಿನಿಮಾ ವೀಕ್ಷಿಸಿದೆ. ನಾಡಿನ ಸಾಂಪ್ರದಾಯಿಕ ಡೊಳ್ಳು ಬಾರಿಸುವ ಕಲೆಯನ್ನು ಪ್ರಧಾನವಾಗಿರಿಸಿಕೊಂಡು ನಿರ್ಮಿಸಿದ ಈ ಸಿನಿಮಾ ಅತ್ಯಂತ ಸೊಗಸಾಗಿ ಮೂಡಿಬಂದಿದೆ. ಚಿತ್ರತಂಡಕ್ಕೆ ನನ್ನ ಶುಭ ಹಾರೈಕೆಗಳು’ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ
ಒರಾಯನ್ ಮಾಲ್​ನಲ್ಲಿ ಡೊಳ್ಳು ಸಿನಿಮಾ ನೋಡಲು ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ
Dollu Movie: ‘ಡೊಳ್ಳು’ ಚಿತ್ರ ವೀಕ್ಷಿಸಲು ರಾಜ್ಯಪಾಲರಿಗೆ ವಿಶೇಷ ಆಹ್ವಾನ ನೀಡಿದ ಚಿತ್ರತಂಡ
‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತ ‘ಡೊಳ್ಳು’ ಚಿತ್ರದ ಮೊದಲ ಹಾಡು ರಿಲೀಸ್​ ಮಾಡಿದ ಡಾಲಿ ಧನಂಜಯ್​
68th National Film Awards: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ‘ಡೊಳ್ಳು’ ಕನ್ನಡದ ಅತ್ಯುತ್ತಮ ಚಿತ್ರ

‘ನಾಡಿನ ಜಾನಪದ ಕಲೆಯನ್ನು ಜಗತ್ತಿನ ಮುಂದೆ ತೆರೆದಿಡುವಂತಹ ಚಿತ್ರ ನಿರ್ಮಾಣ ಮಾಡಿರುವ ಚಿತ್ರದ ನಿರ್ದೇಶಕ ಸಾಗರ್ ಪುರಾಣಿಕ್ ಹಾಗೂ ನಿರ್ಮಾಪಕರಾದ ಪವನ್ ಒಡೆಯರ್, ಅಪೇಕ್ಷಾ ಒಡೆಯರ್ ಅವರಿಗೆ ಅಭಿನಂದನೆಗಳು. ನಾಯಕ ನಟ ಕಾರ್ತಿಕ್ ಮಹೇಶ್, ನಾಯಕಿ ನಿಧಿ ಹೆಗಡೆ ಹಾಗೂ ಮಾಜಿ ಸಚಿವರಾದ ಜಮೀರ್​ ಅಹ್ಮದ್ ಅವರು ನನ್ನೊಂದಿಗೆ ಚಿತ್ರ ವೀಕ್ಷಿಸಿದರು’ ಎಂದು ಸಿದ್ದರಾಮಯ್ಯ ಪೋಸ್ಟ್​ ಮಾಡಿದ್ದಾರೆ. ಜೊತೆಗೆ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ನೋಡುವಂತೆ ರಾಜ್ಯಪಾಲರಾದ ಥಾವರ್ ಚಂದ್​ ಗೆಹ್ಲೋಟ್ ಅವರಿಗೂ ಚಿತ್ರತಂಡ ಇತ್ತೀಚೆಗೆ ಆಮಂತ್ರಣ ನೀಡಿತ್ತು.

ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗಡೆ ಜೊತೆಗೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್​ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆಗಸ್ಟ್​ 26ರಂದು ‘ಡೊಳ್ಳು’ ಚಿತ್ರ ರಾಜ್ಯಾದ್ಯಂತ ರಿಲೀಸ್​ ಆಗಲಿದೆ. ಸಂಭಾಷಣೆ ಮತ್ತು ಚಿತ್ರಕಥೆಯನ್ನು ಶ್ರೀನಿಧಿ ಬರೆದಿದ್ದಾರೆ. ಅನಂತ್ ಕಾಮತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಭಿಲಾಷ್ ಕಲಾಥಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಹೆಚ್ಚಿನ ಜನರಿಗೆ ಸಿನಿಮಾವನ್ನು ತಲುಪಿಸಬೇಕು ಎಂದು ಚಿತ್ರತಂಡ ಪ್ರಯತ್ನಿಸುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:23 am, Wed, 24 August 22