
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ. ಈಗಾಗಲೇ ಹಲವು ಸಾಕ್ಷ್ಯಗಳ ವಿಚಾರಣೆ ನಡೆಸಲಾಗಿದೆ. ಇದೀಗ ಪ್ರಕರಣದ ಆರೋಪಿ ಆಗಿರುವ ಪ್ರದೋಶ್, ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಮಾಫಿ ಸಾಕ್ಷಿ ದಾಖಲಿಸಲು ಅರ್ಜಿ ಹಾಕಿದ್ದಾರೆ. ಮಾಫಿ ಸಾಕ್ಷಿಗೆ ದರ್ಶನ್ ವಿರೋಧ ವ್ಯಕ್ತಪಡಿಸಿದ್ದಾರಾದರೂ ದರ್ಶನ್ ಅರ್ಜಿಯನ್ನು ಕೋರ್ಟ್ ತಳ್ಳಿ ಹಾಕಿದೆ. ಆದರೆ ದರ್ಶನ್ ಸಲ್ಲಿಸಿದ್ದ ಮತ್ತೊಂದು ಅರ್ಜಿಯಲ್ಲಿ ದರ್ಶನ್ಗೆ ಮುನ್ನಡೆ ದೊರೆತಿದೆ. ಸಾಕ್ಷ್ಯಗಳ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಖುದ್ದು ಹಾಜರಿರಲು ದರ್ಶನ್ ಒಪ್ಪಿಗೆ ಕೇಳಿದ್ದರು. ದರ್ಶನ್ ಪರ ವಕೀಲರು ಸಹ ಈ ಬಗ್ಗೆ ಒತ್ತಾಯಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಷರತ್ತುಗಳ ಮೇರೆಗೆ ದರ್ಶನ್, ಖುದ್ದು ಹಾಜರಿಗೆ ಸಮ್ಮತಿ ನೀಡಿದೆ.
ನ್ಯಾಯಮೂರ್ತಿ ವಿ ಶ್ರೀಶಾನಂದ ಅವರಿದ್ದ ಹೈಕೋರ್ಟ್ ಪೀಠವು ಅರ್ಜಿಯ ವಿಚಾರಣೆ ನಡೆಸಿ ಆದೇಶ ನೀಡಿದ್ದು, ಮುಖ್ಯವಾದ ಸಾಕ್ಷ್ಯಗಳ ವಿಚಾರಣೆ ಇರುವ ದಿನಗಳು ದರ್ಶನ್ ಖುದ್ದು ನ್ಯಾಯಾಲಯಕ್ಕೆ ಹಾಜರಾಗಲು ಒಪ್ಪಿಗೆ ನೀಡಿದೆ. ಅಲ್ಲದೆ ಒಂದು ವರ್ಷದಲ್ಲಿ 60 ಸಾಕ್ಷ್ಯಗಳ ವಿಚಾರಣೆ ನಡೆಯಬೇಕು ಎಂದು ಸಹ ಹೈಕೋರ್ಟ್ ಹೇಳಿದೆ. ಮುಖ್ಯ ಸಾಕ್ಷ್ಯಗಳ ವಿಚಾರಣೆಗೆ ನಿಗದಿತ ದಿನಾಂಕವನ್ನು ಎರಡೂ ಕಡೆಯವರು ಚರ್ಚಿಸಿ ನಿಗದಿ ಪಡಿಸಬೇಕು ಎಂದು ಸಹ ನ್ಯಾಯಾಲಯವೂ ಸೂಚಿಸಿದೆ.
‘ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯೂ ಇರುವುದರಿಂದ ವಿಶಿಷ್ಟ ಪ್ರಕರಣ ಎಂದು ಪರಿಗಣಿಸಲಾಗುತ್ತಿದೆ. ಆದರೆ ಇದನ್ನು ಇತರೆ ಪ್ರಕರಣಗಳಿಗೆ ಉದಾಹರಣೆಯಾಗಿ ಪರಿಗಣಿಸಬಾರದು’ ಎಂದ ನ್ಯಾಯಾಲಯವು, ಭದ್ರತೆಯ ಬಗ್ಗೆ ಎತ್ತಲಾದ ಪ್ರಶ್ನೆಗೆ, ‘ಸೂಕ್ತ ಭದ್ರತೆ ಕೊಟ್ಟು ಕರೆತರುವುದು ಸರ್ಕಾರದ ಹೊಣೆ, ಈಗ ಆತ (ದರ್ಶನ್) ಆರೋಪಿ ಮಾತ್ರ, ಅಪರಾಧಿಯಾಗುವವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ ಕೋರ್ಟ್ಗಳದ್ದೂ ಭದ್ರತೆಯ ಹೊಣೆ ಇರುತ್ತದೆ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ನಟ ದರ್ಶನ್ ಖುದ್ದು ಹಾಜರಿ ಕೋರಿ ವಕೀಲರ ಅರ್ಜಿ
‘ಪ್ರಾಸಿಕ್ಯೂಷನ್ ಎಗ್ಸಾಮಿನೇಷನ್ ಇನ್ ಚೀಫ್ ಅನ್ನು ವಿಸಿಯಲ್ಲಿ ನಡೆಸಬೇಕು, ಆದರೆ ಮುಖ್ಯ ಸಾಕ್ಷಿಗಳ ಕ್ರಾಸ್ ಎಗ್ಸಾಮಿನೇಷನ್ಗೆ ದಿನಾಂಕ ನಿಗದಿಪಡಿಸಬೇಕು, ಎರಡೂ ಕಡೆಯವರ ಸಮ್ಮತಿ ಮೇರೆಗೆ ದಿನಾಂಕ ನಿಗದಿಪಡಿಸಬೇಕು
ಆ ದಿನಗಳಂದು ದರ್ಶನ್ರನ್ನು ಖುದ್ದು ಹಾಜರುಪಡಿಸಬೇಕು, ಖುದ್ದಾಗಿ ಹಾಜರುಪಡಿಸಿದಾಗ ದಿನಾಂಕ ಮುಂದೂಡಿಕೆ ಕೇಳಬಾರದು, ಪ್ರಾಸಿಕ್ಯೂಷನ್ ಒಂದು ವರ್ಷದಲ್ಲಿ 60 ಸಾಕ್ಷಿಗಳ ವಿಚಾರಣೆ ನಡೆಸಬೇಕು. ಏಳು ಮುಖ್ಯ ಸಾಕ್ಷಿಗಳ ವಿಚಾರಣೆ ಇದರಲ್ಲಿ ಸೇರಿಸಬೇಕು. ಮುಖ್ಯ ವಿಚಾರಣೆ ಮತ್ತು ಕ್ರಾಸ್ ಎಗ್ಸಾಮಿನೇಷನ್ಗೆ ಪ್ರತ್ಯೇಕ ದಿನಾಂಕಗಳು ಇರಬೇಕು’ ಎಂದು ನ್ಯಾಯಾಲಯವು ಆದೇಶಿಸಿದೆ.
ಹೈಕೋರ್ಟ್ನ ಆದೇಶದಿಂದಾಗಿ ದರ್ಶನ್, ಕೋರ್ಟ್ಗೆ ಬರುವಂತಾಗಿದೆ. ಈ ಮೊದಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ದರ್ಶನ್ ಪರ ವಕೀಲರು, ಸಾಕ್ಷಿಗಳ ವಿಚಾರಣೆ ನಡೆಸುವಾಗ ದರ್ಶನ್ ಖುದ್ದು ಹಾಜರಿರಬೇಕು ಎಂದು ಕೇಳಿದ್ದರು. ಖುದ್ದು ಹಾಜರಿದ್ದರೆ ಕಕ್ಷಿದಾರರೊಡನೆ ಚರ್ಚಿಸುವುದು ಸುಲಭವಾಗುತ್ತದೆ. ಈಗ ವಿಡಿಯೋ ಕಾನ್ಫರೆನ್ಸ್ನಲ್ಲಿ ಅದು ಸಾಧ್ಯವಾಗುವುದಿಲ್ಲ. ವಿಡಿಯೋ ಕಾನ್ಫರೆನ್ಸ್ನಲ್ಲಿ ಖಾಸಗಿತನ ಇರುವುದಿಲ್ಲ. ಎಲ್ಲರ ಎದುರೇ ಕಕ್ಷಿದಾರರೊಟ್ಟಿಗೆ ಚರ್ಚಿಸಬೇಕಾಗುತ್ತದೆ. ಅದು ಸಾಕ್ಷಿಯ ಹೇಳಿಕೆ ಮೇಲೆ ಪ್ರಭಾವ ಬೀರುತ್ತದೆ’ ಎಂದಿದ್ದರು. ಇದೀಗ ಅರ್ಜಿಯನ್ನು ಮನ್ನಿಸಿರುವ ಹೈಕೋರ್ಟ್, ದರ್ಶನ್ ಖುದ್ದುಯ ಹಾಜರಿಗೆ ಅನುಮತಿ ನೀಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ