ಶಿವಣ್ಣ ಮನೆಯಲ್ಲಿ ಗೌಪ್ಯ ಸಭೆ, ಚರ್ಚೆಯಾದ ವಿಷಯಗಳೇನು?
Shiva Rajkumar House: ನಟ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಇಂದು ಕನ್ನಡ ಚಿತ್ರರಂಗದ ಹಲವು ಗಣ್ಯರು ಸಭೆ ಸೇರಿದ್ದರು. ಹಠಾತ್ತನೆ ಏರ್ಪಾಡಾಗಿದ್ದ ಈ ಸಭೆಯಲ್ಲಿ ಕೆಲ ಮಹತ್ವದ ವಿಷಯಗಳನ್ನು ಚರ್ಚೆ ಮಾಡಲಾಗಿದೆ. ಅಷ್ಟಕ್ಕೂ ಈ ಸಭೆ ಸೇರಲು ಕಾರಣ ಏನು? ಸಭೆಯಲ್ಲಿ ಚರ್ಚೆ ಮಾಡಲಾದ ವಿಷಯಗಳು ಯಾವುವು? ಸಭೆಯಲ್ಲಿ ಅಂತಿಮವಾಗಿ ತೆಗೆದುಕೊಂಡ ತೀರ್ಮಾನ ಏನು? ಇಲ್ಲಿದೆ ಮಾಹಿತಿ...

ಚಿತ್ರರಂಗ ಸಂಕಷ್ಟದಲ್ಲಿದೆ. ಸ್ಟಾರ್ ನಟರ ಸಿನಿಮಾ ಬಿಡುಗಡೆ ಆಗಿ ಕಾಲವೇ ಆಯ್ತು. ಚಿತ್ರಮಂದಿರದಲ್ಲಿ (Theater) ಕನ್ನಡ ಸಿನಿಮಾ ಒಂದು ಹಿಟ್ ಎನಿಸಿಕೊಂಡು ಸಾಕಷ್ಟು ಸಮಯವಾಯ್ತು. ಪ್ಯಾನ್ ಇಂಡಿಯಾ ಆಸೆಯಲ್ಲಿ ದೊಡ್ಡ ನಟರೆಲ್ಲ ಎರಡು-ಮೂರು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಕೆಲವು ಸ್ಟಾರ್ ನಟರಂತೂ ಕನ್ನಡಕ್ಕಿಂತಲೂ ಪರಭಾಷೆ ಸಿನಿಮಾ ಅವಕಾಶಗಳ ಮೇಲೆ ಆಸಕ್ತಿ ತೋರುತ್ತಿದ್ದಾರೆ. ಪರಭಾಷೆ ಸಿನಿಮಾಗಳಿಗೆ ಕರ್ನಾಟಕದಲ್ಲಿ ಹೆಚ್ಚು ಚಿತ್ರಮಂದಿರಗಳು ಸಿಗುತ್ತಿವೆ. ಕನ್ನಡ ಸಿನಿಮಾಗಳು ಪರಭಾಷೆ ಸಿನಿಮಾಗಳ ವಿರುದ್ಧ ಸೋಲುತ್ತಿವೆ. ಇನ್ನೂ ಸಾಕಷ್ಟು ಸಮಸ್ಯೆಗಳು ಚಿತ್ರರಂಗದಲ್ಲಿವೆ. ಇದೇ ಕಾರಣಕ್ಕೆ ಇದೀಗ ಚಿತ್ರರಂಗದ ಕೆಲ ಹಿರಿಯರು ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಸಭೆ ನಡೆಸಿ ಚಿತ್ರರಂಗದ ಬಗ್ಗೆ ಚರ್ಚೆ ಮಾಡಿದ್ದಾರೆ.
ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಇಂದು (ಮೇ 17) ಚಿತ್ರರಂಗದ ಕೆಲ ಗಣ್ಯರು ಸಭೆ ಸೇರಿದ್ದರು. ಸಭೆಯಲ್ಲಿ ನಟರಾದ ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್, ಧ್ರುವ ಸರ್ಜಾ ಸೇರಿದಂತೆ ಇನ್ನೂ ಕೆಲ ನಟರು ಭಾಗಿ ಆಗಿದ್ದರು. ಸಭೆಯಲ್ಲಿ ಕೆಲ ಸಿನಿಮಾ ನಿರ್ಮಾಪಕರು, ಸಿನಿಮಾ ಪ್ರದರ್ಶಕರು, ವಿತರಕರುಗಳು ಸಹ ಭಾಗಿ ಆಗಿದ್ದರು. ಎಲ್ಲರೂ ಸಹ ತಮ್ಮ ತಮ್ಮ ವಿಭಾಗಗಳಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು.
ಸಭೆಯು ಶಿವರಾಜ್ ಕುಮಾರ್ ಅವರ ನೇತೃತ್ವದಲ್ಲಿ ನಡೆದಿದ್ದು, ಕನ್ನಡ ಚಿತ್ರರಂಗ ಎದುರಿಸ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಚಿತ್ರಮಂದಿರಗಳಿಗೆ ಜನ ಬರದೇ ಇರುವುದು, ಕನ್ನಡ ಸಿನಿಮಾಗಳಿಗೆ ಥಿಯೇಟರ್ ಕೊರತೆ, ಟಿಕೆಟ್ ದರ ವಿಚಾರ, ದಿನೇ-ದಿನೆ ಕಡಿಮೆಯಾಗುತ್ತಿರುವ ಕನ್ನಡ ಸಿನಿಮಾಗಳು, ಪರಭಾಷೆ ಸಿನಿಮಾಗಳ ಹಾವಳಿ, ನಿರ್ಮಾಪಕರ ಸಂಕಷ್ಟ, ವಿತರಕರು ಮತ್ತು ಪ್ರದರ್ಶಕರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಿಗುಸವಂತೆ ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗುವ ನಿರ್ಧಾರವನ್ನು ಎಲ್ಲರೂ ಸೇರಿ ತೆಗೆದುಕೊಂಡಿದ್ದಾರೆ. ಇದೇ ತಿಂಗಳ ಕೊನೆಯ ವಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗುವ ಬಗ್ಗೆ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ:ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ
ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ, ಹೀರೋಗಳು ಐದು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿರುವ ಬಗ್ಗೆ ಚರ್ಚಿಸಲಾಗಿದೆ. ಥಿಯೇಟರ್ ಮುಚ್ಚುತ್ತಿರೋದರ ಕುರಿತು ಬಹುಮುಖ್ಯವಾಗಿ ಚರ್ಚೆ ಮಾಡಲಾಗಿದೆ. ಥಿಯೇಟರ್ಗಳನ್ನು ಉಳಿಸಿಕೊಳ್ಳುವ ಬಗೆ, ಚಿತ್ರಮಂದಿರಗಳಿಗೆ ಲ್ಯಾಂಡ್ ಟ್ಯಾಕ್ಸ್, ಸಬ್ಸಿಡಿ, ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವಂತೆ ಸಿ.ಎಂ ಬಳಿ ಬೇಡಿಕೆ ಇಡುವಂತೆಯೂ ನಿರ್ಧರಿಸಲಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗುವುದಕ್ಕೆ ಮುಂಚೆ ಚಿತ್ರರಂಗದ ಎಲ್ಲ ವಿಭಾಗದ ಪ್ರಮುಖರನ್ನು ಕರೆಸಿ ಉನ್ನತ ಮಟ್ಟದ ಸಭೆಯೊಂದನ್ನು ಮಾಡುವ ಬಗ್ಗೆಯೂ ಸಹ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




