ಬೆಳಗ್ಗೆ ಮಗನ ‘ಕಥೆಗೆ ಸಾವಿಲ್ಲ’ ಕೃತಿ ಬಿಡುಗಡೆ, ಸಂಜೆ ಕೊರೊನಾದಿಂದ ತಂದೆಯ ಸಾವು

Coronavirus: ಹಂಸಲೇಖ ಅವರಿಂದ ‘ಕಥೆಗೆ ಸಾವಿಲ್ಲ’ ಕೃತಿ ಏ.24ರ ಬೆಳಗ್ಗೆ ಬಿಡುಗಡೆ ಆಯಿತು.  ಅದೇ ಖುಷಿಯಲ್ಲಿದ್ದ ನಿರ್ದೇಶಕ ಬಿಎಂ ಗಿರಿರಾಜ್​ ಅವರು ರಾತ್ರಿ ಆಗುವುದರೊಳಗೆ ತಂದೆಯ ಸಾವನ್ನು ನೋಡುವಂತಾಗಿದೆ.

  • TV9 Web Team
  • Publish Date - 9:02 am, Sun, 25 April 21

ಕೊರೊನಾ ವೈರಸ್​ನಿಂದಾಗಿ ಪರಿಸ್ಥಿತಿ ಕೈ ಮೀರುತ್ತಿದೆ. ಯಾವ ಆಸ್ಪತ್ರೆಯತ್ತ ಕಣ್ಣು ಹಾಯಿಸಿದರೂ ಜನರು ಕಣ್ಣೀರು ಹಾಕುತ್ತಿರುವ ದೃಶ್ಯವೇ ಕಾಣುತ್ತಿದೆ. ಮಹಾಮಾರಿಗೆ ಸೂಕ್ತ ಚಿಕಿತ್ಸೆ ಸಿಗದೇ ಸಾವಿರಾರು ಜನರು ನಿಧನರಾಗುತ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ಸಾಲು ಸಾಲಾಗಿ ತಮ್ಮವರನ್ನು ಕಳೆದುಕೊಳ್ಳುತ್ತಿದ್ದಾರೆ. ಈಗ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಬಿ.ಎಂ. ಗಿರಿರಾಜ್​ ಅವರ ತಂದೆ ಕೂಡ ಕೊರೊನಾ ವೈರಸ್​ನಿಂದಾಗಿ ನಿಧನರಾಗಿದ್ದಾರೆ.

ಸಂವೇದನಾಶೀಲ ಸಿನಿಮಾಗಳ ಮೂಲಕ, ಬರಹಗಳ ಮೂಲಕ ಬಿಎಂ ಗಿರಿರಾಜ್​ ಅವರು ಗುರುತಿಸಿಕೊಂಡಿದ್ದಾರೆ. ಶನಿವಾರ (ಏ.24) ಅವರ ಹೊಸ ಪುಸ್ತಕವೊಂದು ಬಿಡುಗಡೆ ಆಯಿತು. ಆ ಕೃತಿ ಹೆಸರು ‘ಕಥೆಗೆ ಸಾವಿಲ್ಲ’. ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಅದನ್ನು ಆನ್​ಲೈನ್​ ಮೂಲಕ ಬಿಡುಗಡೆ ಮಾಡಿದರು. ವಿಪರ್ಯಾಸ ಏನೆಂದರೆ ‘ಕಥೆಗೆ ಸಾವಿಲ್ಲ’ ಕೃತಿ ಬೆಳಗ್ಗೆ ಬಿಡುಗಡೆ ಆಯಿತು ಎಂಬ ಖುಷಿಯಲ್ಲಿದ್ದ ಬಿಎಂ ಗಿರಿರಾಜ್​ ಅವರು ರಾತ್ರಿ ಆಗುವುದರೊಳಗೆ ತಂದೆಯ ಸಾವನ್ನು ನೋಡುವಂತಾಗಿದೆ.

ಈ ಬಗ್ಗೆ ನಿರ್ದೇಶಕ ಜಯತೀರ್ಥ ಅವರು ಸೋಶಿಯಲ್​ ಮೀಡಿಯಾ ಮೂಲಕ ನೋವು ತೋಡಿಕೊಂಡಿದ್ದಾರೆ. ‘ಚಲನಚಿತ್ರ ನಿರ್ದೇಶಕ ಬಿಎಂ ಗಿರಿರಾಜ್ ಬರೆದಿರುವ ಕಥೆಗೆ ಸಾವಿಲ್ಲ ಕಥಾ ಸಂಕಲನ ಇವತ್ತು ಬೆಳಿಗ್ಗೆ ಹಂಸಲೇಖಾರ ಕಡೆಯಿಂದ ಲೋಕಾರ್ಪಣೆಗೊಳ್ಳುತ್ತದೆ. ಸಂಜೆ 8 ಗಂಟೆ ಹೊತ್ತಿಗೆ ಗಿರಿರಾಜ್ ಅವರ ತಂದೆ ಕೊರೊನಾದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪ್ಪ ಮನೆಗೆ ಬಂದು ಮಗನ ಪುಸ್ತಕವನ್ನು ಓದಿ ಏನು ಹೇಳುತ್ತಾರೋ ಎಂದು ಕುತೂಹಲದಿಂದ ಕಾಯುತ್ತಿದ್ದ ಗಿರಿರಾಜ್​ಗೆ ಇದು ದೊಡ್ಡ ಆಘಾತ. ಅವರ ಕುಟುಂಬಸ್ಥರು ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಲಿ. ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಜಯತೀರ್ಥ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಕಿಶೋರ್​ ನಟನೆಯ ಜಟ್ಟ, ಪುನೀತ್​ ರಾಜ್​ಕುಮಾರ್​ – ಮೋಹನ್​ ಲಾಲ್​ ನಟನೆಯ ಮೈತ್ರಿ, ಅಚ್ಯುತ್​ ಕುಮಾರ್​ ಅಭಿನಯದ ಅಮರಾವತಿ ಮುಂತಾದ ಸಿನಮಾಗಳಿಗೆ ಗಿರಿರಾಜ್​ ನಿರ್ದೇಶನ ಮಾಡಿದ್ದಾರೆ. ಸೂಕ್ಷ್ಮವಾದ ಕಥೆಗಳನ್ನು ಜನರ ಮುಂದಿಡುವ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಅವರು ರವಿಚಂದ್ರನ್​ ನಟನೆಯ ಕನ್ನಡಿಗ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ನಡುವೆ ಅವರಿಗೆ ತಂದೆಯ ನಿಧನದ ಶೋಕ ಆವರಿಸಿದೆ.

ಜನಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳಿಗೂ ಈ ಪರಿಸ್ಥಿತಿ ಕಷ್ಟವನ್ನು ತಂದೊಡ್ಡಿದೆ. ನಟ ಅನಿರುದ್ಧ ಅವರು ಇತ್ತೀಚೆಗೆ ಸೋಶಿಯಲ್​ ಮೀಡಿಯಾ ಮೂಲಕ ನೋವು ತೋಡಿಕೊಂಡಿದ್ದರು. ಸಹೋದರಿಯನ್ನು ಕಳೆದುಕೊಂಡ ನಟಿ ಸುನೇತ್ರಾ ಪಂಡಿತ್​ ಅವರು ಮಾಧ್ಯಮಗಳ ಕ್ಯಾಮರಾ ಮುಂದೆ ಅತ್ತಿದ್ದರು. ಗಟ್ಟಿಮೇಳ ಧಾರಾವಾಹಿ ನಟ ಪವನ್​ ಕುಮಾರ್​ ಅವರು ಕಣ್ಣೀರು ಹಾಕುತ್ತ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ. ಆದಷ್ಟು ಜಾಗೃತರಾಗಿರಿ ಎಂಬ ಮಾತು ಎಲ್ಲರಿಂದಲೂ ಕೇಳಿಬರುತ್ತಿದೆ.

ಇದನ್ನೂ ಓದಿ: ಕೊರೊನಾದಿಂದ ತನ್ನವರನ್ನು ಕಳೆದುಕೊಂಡ ಯುವ ನಟ; ವಿಡಿಯೋ ನೋಡಿ ಸಿದ್ದರಾಮಯ್ಯ ಹೇಳಿದ್ದೇನು?

ಸ್ಯಾಂಡಲ್​ವುಡ್​ ಯುವ ನಟ, ನಿರ್ಮಾಪಕ ಕೊರೊನಾಗೆ ಬಲಿ

(Kannadiga film director BM Giriraj father dies due to coronavirus complications)

Ads By Adgebra

Guidelines for Ganesh Chaturthi and Moharrum 2021: ಕೊವಿಡ್ ಕಾಲದಲ್ಲಿ ಗಣೇಶ ಚತುರ್ಥಿ ಮತ್ತು ಮೊಹರಂ ಆಚರಣೆಗೆ ಸರ್ಕಾರ ನಿಯಮಾವಳಿ ಬಿಡುಗಡೆಗೊಳಿಸಿದೆ.