‘ರಿಷಬ್ ಶೆಟ್ಟಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡಬೇಕು’: ಕಾಂತಾರ ಪ್ರೇಕ್ಷಕರ ಭಾವುಕ ಮಾತು

ರಿಷಬ್ ಶೆಟ್ಟಿ ಅವರು ದೈವದ ಕಥೆಯನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ತೋರಿಸಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರಮಂದಿರಗಳ ಎದುರು ಎಮೋಷನಲ್ ಆಗಿ ಮಾತನಾಡುತ್ತಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ದೇವಸ್ಥಾನ ಕಟ್ಟಬೇಕು ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ರಿಷಬ್ ಶೆಟ್ಟಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡಬೇಕು’: ಕಾಂತಾರ ಪ್ರೇಕ್ಷಕರ ಭಾವುಕ ಮಾತು
Rishab Shetty

Updated on: Oct 05, 2025 | 2:02 PM

ಅಕ್ಟೋಬರ್ 2ರಂದು ಬಿಡುಗಡೆ ಆದ ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಸತತ 4ನೇ ದಿನವೂ ಎಲ್ಲ ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಗೆ ಜನರು ಫಿದಾ ಆಗಿದ್ದಾರೆ. ಕನ್ನಡ ಮಾತ್ರವಲ್ಲದೇ ಒಟ್ಟು 7 ಭಾಷೆಗಳಲ್ಲಿ ಈ ಸಿನಿಮಾ ತೆರೆಕಂಡಿದೆ. ತಮಿಳು, ತೆಲುಗು, ಹಿಂದಿ, ಮಲಯಾಳಂ ಪ್ರೇಕ್ಷಕರು ಕೂಡ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಪಾಸಿಟಿವ್ ವಿಮರ್ಶೆ ತಿಳಿಸಿದ್ದಾರೆ. ಜನರ ಪ್ರತಿಕ್ರಿಯೆಯನ್ನು ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರಬರುವ ಬಹುತೇಕರು ರಿಷಬ್ ಶೆಟ್ಟಿ (Rishab Shetty) ಬಗ್ಗೆ  ಭಾವುಕರಾಗಿ ಮಾತನಾಡುತ್ತಿದ್ದಾರೆ.

‘ರಿಷಬ್ ಶೆಟ್ಟಿಗೆ ದೇವಸ್ಥಾನ ಕಟ್ಟಿಸಿ ಪೂಜೆ ಮಾಡಬೇಕು’ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಆ ವಿಡಿಯೋವನ್ನು ‘ಹೊಂಬಾಳೆ ಫಿಲ್ಮ್ಸ್’ ಹಂಚಿಕೊಂಡಿದೆ. ‘ಏನೂ ಹೇಳಲು ಆಗುತ್ತಿಲ್ಲ. ನೋಡಿತ್ತಾ ಅಳು ಬರುತ್ತಿದೆ’ ಎಂದು ಪ್ರೇಕ್ಷಕರೊಬ್ಬರು ಎಮೋಷನಲ್ ಆಗಿದ್ದಾರೆ. ‘ದೇವರಾಣೆಗೂ ಮಾತು ಬರುತ್ತಿಲ್ಲ. ಗಂಟಲು ಹೋಗಿದೆ’ ಎಂದು ಮತ್ತೋರ್ವ ಅಭಿಮಾನಿ ಹೇಳಿದ್ದಾರೆ.

‘ತುಂಬಾ ಎಮೋಷನಲ್ ಆದೆ. ಕೊನೆಯಲ್ಲಿ ಅಳಲು ಆರಂಭಿಸಿದೆ’ ಎಂದು ಹಿಂದಿ ಪ್ರೇಕ್ಷಕರೊಬ್ಬರು ಹೇಳಿದ್ದಾರೆ. ‘ಇದು ದೇವರ ಕೆಲಸ’ ಎಂದೆಲ್ಲ ಅಭಿಮಾನಿಗಳು ಬಣ್ಣಿಸುತ್ತಿದ್ದಾರೆ. ನಟನೆಗಾಗಿ ರಿಷಬ್ ಶೆಟ್ಟಿ ಅವರಿಗೆ ಆಸ್ಕರ್ ಪ್ರಶಸ್ತಿ ಸಿಗಬೇಕು ಎಂದು ಕೂಡ ಅಭಿಮಾನಿಗಳು ಹೇಳಲು ಆರಂಭಿಸಿದ್ದಾರೆ. ಈ ಪರಿ ರೆಸ್ಪಾನ್ಸ್ ಸಿಗುತ್ತಿರುವುದಕ್ಕೆ ‘ಕಾಂತಾರ: ಚಾಪ್ಟರ್ 1’ ಚಿತ್ರತಂಡಕ್ಕೆ ಖುಷಿ ಆಗಿದೆ.

ರಿಷಬ್ ಶೆಟ್ಟಿ ಜೊತೆ ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಹಾಗೆಯೇ, ಗುಲ್ಶನ್ ದೇವಯ್ಯ, ಜಯರಾಮ್ ಕೂಡ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ತುಳುನಾಡಿನ ದೈವದ ಕತೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಬೆರ್ಮೆ ಎಂಬ ಪಾತ್ರಕ್ಕೆ ರಿಷಬ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಸಿನಿಮಾದ ಮೇಕಿಂಗ್ ಗುಣಮಟ್ಟಕ್ಕೆ ಫ್​ಯಾನ್ಸ್ ಫಿದಾ ಆಗಿದ್ದಾರೆ.

ಇದನ್ನೂ ಓದಿ: ದೈವದ ವೇಷ ಧರಿಸಿ ಚಿತ್ರಮಂದಿರದ ಒಳಗೆ ಕುಣಿದಾಡಿದ ಕಾಂತಾರ ಪ್ರೇಕ್ಷಕ

‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ಜನರು ಮುಗಿಬಿದ್ದು ನೋಡುತ್ತಿರುವುದರಿಂದ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಕೇವಲ ಮೂರು ದಿನಕ್ಕೆ ಈ ಸಿನಿಮಾ 163 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. 4ನೇ ದಿನವಾದ ಭಾನುವಾರ (ಅಕ್ಟೋಬರ್ 5) ಕೂಡ ಎಲ್ಲ ಕಡೆಗಳಲ್ಲಿ ಹೌಸ್​ಫುಲ್ ಆಗಿದೆ. ಇನ್ನೂ ಹಲವು ದಿನಗಳ ಕಾಲ ಸಿನಿಮಾದ ಅಬ್ಬರ ಇದೇ ರೀತಿ ಮುಂದುವರಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us