ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಕರ್ನಾಟಕದ ಕೊಡಗಿನವರು. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಕನ್ನಡ ಚಿತ್ರರಂಗದಿಂದ. ನಂತರ ಅವರಿಗೆ ತೆಲುಗು, ತಮಿಳು ಹಾಗು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಹೆಚ್ಚಾಯಿತು. ಕೆಲವೇ ದಿನಗಳ ಹಿಂದೆ ಅವರು ‘ಛಾವ’ ಸಿನಿಮಾದ ಇವೆಂಟ್ನನಲ್ಲಿ ‘ನಾನು ಹೈದರಾಬಾದ್ ಮೂಲದವಳು’ ಎಂದು ಹೇಳಿದ್ದರು. ಆ ವಿಚಾರವನ್ನು ಇಟ್ಟುಕೊಂಡು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಈಗ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡ ಕೂಡ ಆ ಕುರಿತು ಮಾತನಾಡಿದ್ದಾರೆ. ರಶ್ಮಿಕಾ ಅವರ ಹೇಳಿಕೆಯನ್ನು ಅವರು ತೀವ್ರಗಾಗಿ ಖಂಡಿಸಿದ್ದಾರೆ.
‘ನಾನು ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ನಡೆದ ಒಂದು ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಿದೆ. ಅದು ಚಲನಚಿತ್ರಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮ. ಅದರಲ್ಲಿ ಕೊಡಗಿನ ಹೆಣ್ಣುಮಗಳು, ಕನ್ನಡದಿಂದ ಪರಿಚಯವಾಗಿ ರಾಷ್ಟ್ರದ ಬೇರೆ ಬೇರೆ ಭಾಷೆಯಲ್ಲಿ ಸಿನಿಮಾ ಮಾಡುತ್ತಿರುವವಳು, ಅಪ್ಪಟ ಕನ್ನಡದ ಹೆಣ್ಮಗಳು ರಶ್ಮಿಕಾ ಮಂದಣ್ಣ ತಾನು ಆಂಧ್ರಪ್ರದೇಶದವಳು ಅಂತ ಹೇಳಿಕೆ ನೀಡದಳು. ನೀವು ಒಂದಷ್ಟು ಚಿಗುರಿದ ಬಳಿಕ, ನಿಮಗೆ ಬೇರೆ ಬೇರೆ ಭಾಷೆಯಲ್ಲಿ ಒಂದಷ್ಟು ಅವಕಾಶ ಸಿಕ್ಕ ಕೂಡಲೇ ಕನ್ನಡದ ನಾಡನ್ನು ಮರೆಯುತ್ತೀರಿ’ ಎಂದು ನಾರಾಯಣ ಗೌಡ ಹೇಳಿದ್ದಾರೆ.
‘ಈ ನೆಲದ ಭಾಷೆ, ಸಂಸ್ಕೃತಿ ಬಗ್ಗೆ ನಿಮಗೆ ಗೌರವ ಇರಬೇಕು. ನೀವು ಎಷ್ಟೇ ದೊಡ್ಡ ವ್ಯಕ್ತಿಗಳಾಗಿ ಬೆಳೆದರೂ ಸಹ ಈ ನೆಲದ ಋಣವನ್ನು ತೀರಿಸಬೇಕು. ಕುವೆಂಪು ಹೇಳಿದ ಹಾಗೆ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬುದನ್ನು ಇನ್ಮೇಲಾದರೂ ಚೆನ್ನಾಗಿ ಅರ್ಥ ಮಾಡಿಕೊಳ್ಳಿ’ ಎಂದು ನಾರಾಯಣ ಗೌಡ ಹೇಳಿದ್ದಾರೆ.
ಕನ್ನಡ ಚಿತ್ರರಂಗದವರು ಜನಪರ ಹೋರಾಟಗಳಲ್ಲಿ ಭಾಗಿ ಆಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಫಿಲ್ಮ್ ಫೆಸ್ಟಿವಲ್ನಲ್ಲಿ ಡಿಕೆ ಶಿವಕುಮಾರ್ ಅವರು ಈ ಬಗ್ಗೆ ಮಾತನಾಡಿದ ಬಳಿಕ ಚರ್ಚೆ ಶುರುವಾಗಿದೆ. ಈ ಕುರಿತು ಕೂಡ ನಾರಾಯಣ ಗೌಡ ಮಾತನಾಡಿದ್ದಾರೆ. ‘ಸಿನಿಮಾಗಳು ಓಡಲ್ಲ ಅಂತ ಹೇಳುತ್ತೀರಿ. ಯಾವ ಕಾಳಜಿ ಇಟ್ಟುಕೊಂಡು ಕನ್ನಡಿಗರು ನಿಮ್ಮ ಸಿನಿಮಾ ನೋಡಬೇಕು? ನೀವು ಬೀದಿಗೆ ಬಂದು ಕನ್ನಡಿಗರ ಪರವಾಗಿ ಹೋರಾಟ ಮಾಡಿದರೆ ಮಾತ್ರ ಜನರು ನಿಮ್ಮ ಸಿನಿಮಾ ನೋಡುತ್ತಾರೆ’ ಎಂದಿದ್ದಾರೆ ನಾರಾಯಣ ಗೌಡ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.