ಕರ್ನಾಟಕದಲ್ಲಿ ಸುಸಜ್ಜಿತ, ಅತ್ಯಾಧುನಿಕ ಸೌಕರ್ಯಗಳುಳ್ಳ ಫಿಲಂ ಸಿಟಿ (Film City) ನಿರ್ಮಾಣ ಆಗಬೇಕು ಎಂಬುದು ದಶಕಗಳ ಕೂಗಾಗಿದೆ. ಈ ವರೆಗೆ ಬಂದ ಎಲ್ಲ ಸರ್ಕಾರಗಳನ್ನು ಈ ಬಗ್ಗೆ ಚಿತ್ರರಂಗ ಮನವಿ ಮಾಡಿದೆ. ಕೆಲ ಸರ್ಕಾರಗಳು ಭರವಸೆಯನ್ನೂ ನೀಡಿದ್ದವು. ಆದರೆ ಈ ವರೆಗೆ ಫಿಲಂ ಸಿಟಿ ನಿರ್ಮಾಣ ಆಗಿಲ್ಲ. ಈ ಬಾರಿ ಮತ್ತೊಮ್ಮೆ ಸಿದ್ದರಾಮಯ್ಯ (Siddaramaiah) ಅವರು ಬಜೆಟ್ನಲ್ಲಿ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ ಹಣವನ್ನು ಮೀಸಲಿಟ್ಟಿದ್ದಾರೆ. ಜೊತೆಗೆ 150 ಎಕರೆ ಜಾಗವನ್ನು ಸಹ ಕಾಯ್ದಿರಿಸಿರುವುದಾಗಿ ಘೋಷಣೆ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ನಡೆದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಸಹ ಈ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರ ಫಿಲಂ ಸಿಟಿ ನಿರ್ಮಾಣಕ್ಕೆ ಬದ್ಧವಾಗಿದೆ ಎಂದು ಹೇಳಿದ್ದರು. ಅದರಂತೆ ಇಂದು ಬಜೆಟ್ನಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಅಸಲಿಗೆ ಈ ಹಿಂದೆ ಸಹ ಕೆಲ ಸರ್ಕಾರಗಳು ಫಿಲಂ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದವು. ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗಲಾದರೂ ಇದು ಕಾರ್ಯರೂಪಕ್ಕೆ ಬರಲಿದೆಯೇ ಕಾದು ನೋಡಬೇಕಿದೆ.
ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಭಾರತದ ಪ್ರಸಿದ್ಧ ಫಿಲಂ ಸಿಟಿಗಳಲ್ಲಿ ಪ್ರಮುಖವಾಗಿರುವ ರಾಮೋಜಿ ರಾವ್ ಫಿಲಂ ಸಿಟಿ ನಿರ್ಮಾಣವಾಗಿರುವುದು 1600 ಎಕರೆ ಪ್ರದೇಶದಲ್ಲಿ. ಆದರೆ ಈಗ ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ ಸರ್ಕಾರ ಮೀಸಲಿಟ್ಟಿರುವುದು 150 ಎಕರೆ. ಫಿಲಂ ಸಿಟಿ ನಿರ್ಮಾಣಕ್ಕೆ ಇಷ್ಟು ಸ್ಥಳ ಸಾಕಾಗುತ್ತದೆಯೇ, ಇಷ್ಟು ಜಾಗದಲ್ಲಿ ಸೂಕ್ತವಾದ ಫಿಲಂ ಸಿಟಿ ನಿರ್ಮಾಣ ಸಾಧ್ಯವೇ ಎಂಬುದು ಸಹ ವಿಶ್ಲೇಷಣೆಗೆ ಒಳಗಾಗಬೇಕಿದೆ.
ಇದನ್ನೂ ಓದಿ:ರಾಜಮೌಳಿ ಮುಂದಿನ ಸಿನಿಮಾ ಬಜೆಟ್ ಕೇಳಿದ್ರೆ ನೀವು ಹೌಹಾರ್ತೀರಾ
ಇದರ ಜೊತೆಗೆ ನಂದಿನಿ ಲೇಔಟ್ನಲ್ಲಿರುವ ಚಲನಚಿತ್ರ ಅಕಾಡೆಮಿ ಅಭಿವೃದ್ಧಿ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಇಂದಿನ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಚಲನಚಿತ್ರ ಅಕಾಡೆಮಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:24 am, Fri, 7 March 25