ರವಿಚಂದ್ರನ್​ ಸದಾ ಕಪ್ಪು ಬಟ್ಟೆ ಹಾಕೋದು ಯಾಕೆ? ಎಲ್ಲರ ಎದುರು ಗುಟ್ಟು ರಟ್ಟು ಮಾಡಿದ ಸುದೀಪ್​!

‘ಕ್ರೇಜಿ ಸ್ಟಾರ್​’ ರವಿಚಂದ್ರನ್​ ಜೊತೆ ನಟ ಸುದೀಪ್​ ಉತ್ತಮ ಒಡನಾಟ ಹೊಂದಿದ್ದಾರೆ. ಅದೇ ಆತ್ಮೀಯತೆಯ ಕಾರಣದಿಂದ ಕಿಚ್ಚ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ.

ರವಿಚಂದ್ರನ್​ ಸದಾ ಕಪ್ಪು ಬಟ್ಟೆ ಹಾಕೋದು ಯಾಕೆ? ಎಲ್ಲರ ಎದುರು ಗುಟ್ಟು ರಟ್ಟು ಮಾಡಿದ ಸುದೀಪ್​!
ಸುದೀಪ್​ - ರವಿಚಂದ್ರನ್​

Updated on: Mar 16, 2021 | 11:48 AM

ಕಿಚ್ಚ ಸುದೀಪ್​ ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ‘ಕೋಟಿಗೊಬ್ಬ 3’ ಚಿತ್ರತಂಡ ದೊಡ್ಡ ಕಾರ್ಯಕ್ರಮ ನಡೆಸಿದೆ. ಇದರಲ್ಲಿ ಸ್ಯಾಂಡಲ್​ವುಡ್​ನ ಅನೇಕರು ಪಾಲ್ಗೊಂಡಿದ್ದರು. ವೇದಿಕೆ ಮೇಲೆ ‘ಕ್ರೇಜಿ ಸ್ಟಾರ್​’ ರವಿಚಂದ್ರನ್​ ಕೂಡ ಇದ್ದರು. ಈ ಸಂದರ್ಭದಲ್ಲಿ ಅವರ ಬಗ್ಗೆ ಸುದೀಪ್​ ಮಾತನಾಡಿದರು. ರವಿಚಂದ್ರನ್​ ಯಾವಾಗಲೂ ಕಪ್ಪು ಬಟ್ಟೆ ಧರಿಸೋದು ಯಾಕೆ ಎಂಬುದನ್ನು ಸುದೀಪ್ ಬಹಿರಂಗ ಪಡಿಸಿದರು.

‘ರವಿಚಂದ್ರನ್​ ಅವರ ಸಿನಿಮಾಗಳನ್ನು ನೋಡಿಕೊಂಡು, ನಾನು ಕೂಡ ಅವರ ರೀತಿಯೇ ಆಗಬೇಕು ಎಂದು ಕಪ್ಪು ಬಟ್ಟೆ ಹಾಕುತ್ತಿದ್ದೆ. ನಾನು ಬ್ಲಾಕ್​ ಬಟ್ಟೆ ಹಾಕಲು ಕಾರಣವೇ ರವಿ ಸರ್​. ನೀವು ಯಾವಾಗಲೂ ಬ್ಲಾಕ್​ ಹಾಕುತ್ತೀರಿ ಎಂದು ಅವರನ್ನು ಒಮ್ಮೆ ನಾನು ಕೇಳಿದ್ದೆ. ಅದಕ್ಕೆ ಎರಡು ಕಾರಣ ಇದೆ ಅಂದರು. ಒಂದು- ನಾವು ಬೆಳ್ಳಗೆ ಕಾಣುತ್ತೇವೆ. ಎರಡನೆಯದು- ನಾವು ತೆಳ್ಳಗೆ ಕಾಣುತ್ತೇವೆ ಅಂತ ರವಿಚಂದ್ರನ್​ ಹೇಳಿದ್ದರು’ ಎಂದಿದ್ದಾರೆ ಸುದೀಪ್​.

ರವಿಚಂದ್ರನ್​ ಬಗ್ಗೆ ಬಹಳ ಗೌರವದ ಮಾತುಗಳನ್ನು ಸುದೀಪ್​ ಹೇಳಿದ್ದಾರೆ. ‘ರವಿಚಂದ್ರನ್​ ರೀತಿಯ ದೊಡ್ಡ ಕಲಾವಿದರು ಈ ವೇದಿಕೆಯಲ್ಲಿ ನಿಂತುಕೊಂಡು ಸುದೀಪ್​ ನನ್ನ ದೊಡ್ಡ ಮಗ ಎಂದಾಗ ನನಗೆ ಎಲ್ಲಿಲ್ಲದ ಖುಷಿ ಆಗತ್ತೆ. ಒಬ್ಬ ಕಲಾವಿದನಾಗಿ ನನ್ನ ಬಗ್ಗೆ ಹೊಗಳುವುದು ಬೇರೆ. ಮನಪೂರ್ವಕವಾಗಿ ನನ್ನನ್ನು ದೊಡ್ಮಗ ಎನ್ನುವುದೇ ಬೇರೆ. ಆ ಸ್ಥಾನ ಕೊಟ್ಟಿದ್ದಾಗಿ ಥ್ಯಾಂಕ್​ ಯೂ ಸೋ ಮಚ್​’ ಎಂದು ‘ಕ್ರೇಜಿ ಸ್ಟಾರ್​’ಗೆ ಕಿಚ್ಚ ಧನ್ಯವಾದ ಸಲ್ಲಿಸಿದರು.

ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್​ನ ಅನೇಕ ಸ್ಟಾರ್​ಗಳ ಭಾಗವಹಿಸಿದ್ದರು. ಶಿವರಾಜ್​ ಕುಮಾರ್​, ರಮೇಶ್​ ಅರವಿಂದ್​, ಸುನೀಲ್​ ಕುಮಾರ್​ ದೇಸಾಯಿ, ರಾಕ್​ಲೈನ್​ ವೆಂಕಟೇಶ್​ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸುದೀಪ್​ ಅವರ 25 ವರ್ಷಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಸಾವಿರಾರು ಅಭಿಮಾನಿಗಳು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದನ್ನೂ ಓದಿ: ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಕನ್ನಡ ಚಿತ್ರರಂಗದ ಪರವಾಗಿ ವಿಶೇಷ ಬೇಡಿಕೆ ಇಟ್ಟ ಕಿಚ್ಚ ಸುದೀಪ್​

Kichcha Sudeep: ನೀವು ಕೊಟ್ಟ ಪ್ರೀತಿ ಎದುರು ಬಾಕ್ಸ್​ ಆಫೀಸ್​ ಗಳಿಕೆ ಏನೂ ಅಲ್ಲ; ಕಿಚ್ಚ ಸುದೀಪ್​

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us