
ಮಾಲಾಶ್ರೀ ಪುತ್ರಿ ಆರಾಧನಾ ರಾಮ್ (Aradhana Ram) ಅವರು ‘ಕಾಟೇರ’ ಸಿನಿಮಾ ಮೂಲಕ ಭರ್ಜರಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಈಗ ಅವರು ಎರಡನೇ ಸಿನಿಮಾಗೆ ಸಹಿ ಮಾಡಿದ್ದಾರೆ. ‘ತರುಣ್ ಸ್ಟುಡಿಯೋಸ್’ ಬ್ಯಾನರ್ ಮೂಲಕ ತರುಣ್ ಶಿವಪ್ಪ ಅವರು ‘ನೆಕ್ಸ್ಟ್ ಲೆವೆಲ್’ (Next Level) ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಸಿನಿಮಾಗೆ ‘ರಿಯಲ್ ಸ್ಟಾರ್’ ಉಪೇಂದ್ರ (Upendra) ಅವರು ಹೀರೋ. ಅರವಿಂದ್ ಕೌಶಿಕ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ಆರಾಧನಾ ರಾಮ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದು ಪ್ಯಾನ್ ಇಂಡಿಯಾ ಸಿನಿಮಾ ಎಂಬುದು ವಿಶೇಷ. ಆರಾಧನಾ ಅವರು ‘ಕಾಟೇರ’ ಸಿನಿಮಾದಲ್ಲಿ ನಟನೆಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಈಗ ಅವರಿಗೆ ‘ನೆಕ್ಸ್ಟ್ ಲೆವೆಲ್’ ಅವಕಾಶ ಸಿಕ್ಕಿದೆ. ಮೊದಲ ಸಿನಿಮಾದಲ್ಲಿಯೇ ದರ್ಶನ್ ಅವರಂತಹ ಸ್ಟಾರ್ ಹೀರೋಗೆ ಜೋಡಿಯಾಗಿ ನಟಿಸಿದ ಅವರು ಈಗ 2ನೇ ಸಿನಿಮಾದಲ್ಲಿಯೂ ಸ್ಟಾರ್ ಹೀರೋಗೆ ಜೋಡಿ ಆಗುತ್ತಿರುವುದು ವಿಶೇಷ.
‘ನೆಕ್ಸ್ಟ್ ಲೆವೆಲ್’ ಸಿನಿಮಾ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಬೆಂಗಳೂರಿನಲ್ಲಿಯೇ ಈ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನಡೆಯಲಿದೆ. ಬಳಿಕ ಬೆಂಗಳೂರು, ಹೈದರಾಬಾದ್ ಮುಂಬೈ ಮುಂತಾದ ಕಡೆಗಳಲ್ಲಿ ಶೂಟಿಂಗ್ ನಡೆಯಲಿದೆ. ಸಿನಿಮಾದ ಹೆಚ್ಚಿನ ದೃಶ್ಯಗಳು ವಿಎಫ್ಎಕ್ಸ್ನಿಂದ ಕೂಡಿರಲಿವೆ. ಇದಕ್ಕಾಗಿ ಕೆನಡಾ ಸೇರಿದಂತೆ ಅನೇಕ ವಿದೇಶಿ ಗ್ರಾಫಿಕ್ಸ್ ಸ್ಟುಡಿಯೋಗಳು ಮತ್ತು ಭಾರತದ ಪ್ರತಿಷ್ಠಿತ ಗ್ರಾಫಿಕ್ಸ್ ನಿರ್ಮಾಣ ಸಂಸ್ಥೆಗಳು ಕೆಲಸ ಮಾಡಲಿವೆ.
ಈ ಸಿನಿಮಾ ಭಿನ್ನವಾಗಿರಲಿದೆ ಎಂದು ಚಿತ್ರತಂಡ ಹೇಳಿದೆ. ‘ಎ’, ‘ಉಪೇಂದ್ರ’, ‘ರಕ್ತ ಕಣ್ಣೀರು’ ಚಿತ್ರಗಳ ಶೈಲಿಯಲ್ಲಿ ‘ನೆಕ್ಸ್ಟ್ ಲೆವೆಲ್’ ಸಿನಿಮಾ ಮೂಡಿಬರಲಿದೆಯಂತೆ. ‘ಛೂ ಮಂತರ್’ ಸಿನಿಮಾದ ಛಾಯಾಗ್ರಾಹಕ ಅನೂಪ್ ಕಟ್ಟುಕರನ್ ಅವರು ‘ನೆಕ್ಸ್ಟ್ ಲೆವೆಲ್’ ಸಿನಿಮಾಗೆ ಕ್ಯಾಮೆರಾ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ಉಪೇಂದ್ರ ಹೀರೋ ಆಗಲು ಕಾರಣವಾಗಿದ್ದೇ ಬಿ. ಸರೋಜಾದೇವಿ; ಆ ಘಟನೆ ನೆನೆದ ರಿಯಲ್ ಸ್ಟಾರ್
ನಿರ್ಮಾಪಕ ತರುಣ್ ಶಿವಪ್ಪ ಅವರು ಈಗಾಗಲೇ 5 ಸಿನಿಮಾಗಳನ್ನು ಮಾಡಿದ್ದಾರೆ. ‘ರೋಸ್’ ಸಿನಿಮಾದ ಮೂಲಕ ನಿರ್ಮಾಪಕರಾದ ಅವರು ನಂತರ ಶಿವರಾಜ್ಕುಮಾರ್ ನಟನೆಯ ‘ಮಾಸ್ ಲೀಡರ್’ ಸಿನಿಮಾಗೆ ಬಂಡವಾಳ ಹೂಡಿದರು. ಬಳಿಕ ‘ವಿಕ್ಟರಿ 2’, ‘ಖಾಕಿ’, ‘ಛೂ ಮಂತರ್’ ಸಿನಿಮಾಗಳನ್ನು ಮಾಡಿದರು. ಈಗ ‘ನೆಕ್ಸ್ಟ್
ಲೆವೆಲ್’ ಸಿನಿಮಾದ ನಿರ್ಮಾಣಕ್ಕೆ ಮುಂತಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.