ರಾಬರ್ಟ್​ ಚಿತ್ರವನ್ನು ಹಾಡಿ ಹೊಗಳಿದ ಮಂಗಳಮುಖಿ ‘ಪದ್ಮಶ್ರೀ’ ಮಂಜಮ್ಮ ಜೋಗತಿ

| Updated By: Praveen Sahu

Updated on: Mar 26, 2021 | 5:35 PM

ರಾಬರ್ಟ್​ ಸಿನಿಮಾದಲ್ಲಿ ಮಂಗಳಮುಖಿಯರೂ ನಮ್ಮಂತೆ ಸಮಾಜದಲ್ಲಿ ಒಬ್ಬರು ಎಂಬುದನ್ನು ತೋರಿಸುವ ಕೆಲಸ ಮಾಡಲಾಗಿದೆ. ಇದು ಮಾತಾ ಬಿ. ಮಂಜಮ್ಮ ಜೋಗತಿ ಅವರ ಮನ ಗೆದ್ದಿದೆ.

ರಾಬರ್ಟ್​ ಚಿತ್ರವನ್ನು ಹಾಡಿ ಹೊಗಳಿದ ಮಂಗಳಮುಖಿ ಪದ್ಮಶ್ರೀ ಮಂಜಮ್ಮ ಜೋಗತಿ
ಮಾತಮ್ಮ ಜೋಗತಿ ಮತ್ತು ದರ್ಶನ್​
Follow us on

ದರ್ಶನ್​ ನಟನೆಯ ರಾಬರ್ಟ್​ ಸಿನಿಮಾವನ್ನು ಇಡೀ ಕನ್ನಡ ಚಿತ್ರರಂಗ ಹಾಡಿ ಹೊಗಳುತ್ತಿದೆ. ಚಿತ್ರಕ್ಕೆ ಎಲ್ಲಾ ಕಡೆಗಳಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಲೂ ಜನರು ಸಿನಿಮಾ ಮಂದಿರಕ್ಕೆ ತೆರಳಿ ಚಿತ್ರ ವೀಕ್ಷಣೆ ಮಾಡುತ್ತಿರುವುದು ನಿಂತಿಲ್ಲ. ಸಿನಿಮಾದ ಕಲೆಕ್ಷನ್ ಕೂಡ ದೊಡ್ಡ ಮಟ್ಟದಲ್ಲೇ ಆಗಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಈ ಮಧ್ಯೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಅಕಾಡೆಮಿ ಅಧ್ಯಕ್ಷೆ ಹಾಗೂ ಮಂಗಳಮುಖಿ ಮಾತಾ ಬಿ. ಮಂಜಮ್ಮ ಜೋಗತಿ ರಾಬರ್ಟ್​ ಚಿತ್ರವನ್ನು ಹಾಡಿ ಹೊಗಳಿದ್ದಾರೆ.

ರಾಬರ್ಟ್​ ಸಿನಿಮಾದಲ್ಲಿ ಶಿವರಾಜ್​ ಕೆ.ಆರ್​ ಪೇಟೆ ಮಂಗಳಮುಖಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮಂಗಳಮುಖಿಯರೂ ನಮ್ಮಂತೆ ಸಮಾಜದಲ್ಲಿ ಒಬ್ಬರು ಎಂಬುದನ್ನು ತೋರಿಸುವ ಕೆಲಸ ಮಾಡಲಾಗಿದೆ. ಇದು ಮಾತಾ ಬಿ. ಮಂಜಮ್ಮ ಜೋಗತಿ ಅವರ ಮನ ಗೆದ್ದಿದೆ. ಹೀಗಾಗಿ, ರಾಬರ್ಟ್​ ಸಿನಿಮಾ ಪ್ರಯತ್ನದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ರಾಬರ್ಟ್​ ಸಿನಿಮಾ ತೆರೆಕಂಡ ತುಂಬಾ ಜನರು ನನಗೆ ಕರೆ ಮಾಡಿ ಸಿನಿಮಾ ನೋಡಿ ಎಂದಿದ್ದರು. ಅಂಥ ವಿಶೇಷತೆ ಏನಿದೆ ಎಂದು ನಾನು ಕೇಳಿದ್ದೆ. ದರ್ಶನ್​ ಅವರು ಚೆನ್ನಾಗಿ ಮಾಡಿದ್ದಾರೆ. ಮಂಗಳಮುಖಿಯರು ಬಗ್ಗೆ ಮೆಚ್ಚುಗೆ ಬರುವಂತೆ ತೋರಿಸಲಾಗಿದೆ ಎಂದಿದ್ದರು. ಹೀಗಾಗಿ, ನಾನು ಕೂಡ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡಿದೆ ಎಂದಿದ್ದಾರೆ ಮಾತಾ ಬಿ. ಮಂಜಮ್ಮ ಜೋಗತಿ.

ಅಕಾಡೆಮಿ ಸಿಬ್ಬಂದಿ ಜತೆ ನಾನು ಸಿನಿಮಾ ನೋಡಿದ್ದೇನೆ. ಆರಂಭದಲ್ಲಿ ಅಯೋಧ್ಯೆಯನ್ನೇ ನೋಡಿದ ರೀತಿ ಆಯ್ತು. ಸಿನಿಮಾದಲ್ಲಿ ನನ್ನ ಸಮುದಾಯದವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ನಮ್ಮ ಸಮಾಜವನ್ನು ನೋಡಿದ್ರೆ ಎಲ್ಲರೂ ಗೌರವ ಕೊಡುವಂತೆ ಮಾಡುವ ಕೆಲಸ ಸಿನಿಮಾದಲ್ಲಿ ನಡೆದಿದೆ. ದರ್ಶನ್​ ಅವರಿಂದ ಇದೇ ಮಾದರಿಯ ಮತ್ತೊಂದಷ್ಟು ಸಿನಿಮಾ ಬರಲಿ ಎಂದು ಮಾತಾ ಬಿ. ಮಂಜಮ್ಮ ಜೋಗತಿ ಹಾರೈಸಿದ್ದಾರೆ.

ಇನ್ನು, ಸಿನಿಮಾ ಗೆದ್ದಿರುವ ಖುಷಿಗೆ ಚಿತ್ರತಂಡ ಕೂಡ ವಿಜಯ ಯಾತ್ರೆ ಹಮ್ಮಿಕೊಂಡಿದೆ. ಈ ಬಗ್ಗೆ ನಿರ್ದೇಶಕ ತರುಣ್​ ಸುಧೀರ್​ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ‘ಮದಗಜ’ ನಿರ್ದೇಶಕ ಮಹೇಶ್​ಗೆ ‘ರಾಬರ್ಟ್’​ ನಿರ್ಮಾಪಕ ಉಮಾಪತಿಯಿಂದ ದುಬಾರಿ ಕಾರ್ ಗಿಫ್ಟ್​!

Published On - 6:46 pm, Thu, 25 March 21