ಮಗಳಿದ್ದಾಳೆ, ಜಾಮೀನು ರದ್ದು ಮಾಡಬೇಡಿ: ಸುಪ್ರೀಂಗೆ ಪವಿತ್ರಾ ಗೌಡ ಮನವಿ

Pavithra Gowda Bail: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡ ಸೇರಿದಂತೆ ಇನ್ನೂ ಕೆಲವು ಆರೋಪಿಗಳ ಜಾಮೀನು ರದ್ದಾಗುವ ಭೀತಿ ಎದುರಾಗಿದೆ. ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ಇದೀಗ ಆರೋಪಿಗಳು ತಮ್ಮ ಜಾಮೀನು ರದ್ದು ಮಾಡಬಾರದೆಂದು ಸುಪ್ರೀಂಕೋರ್ಟ್​ಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಪವಿತ್ರಾ ಗೌಡ ಸಲ್ಲಿಸಿರುವ ಮನವಿಯಲ್ಲೇನಿದೆ? ಇಲ್ಲಿದೆ ಮಾಹಿತಿ..

ಮಗಳಿದ್ದಾಳೆ, ಜಾಮೀನು ರದ್ದು ಮಾಡಬೇಡಿ: ಸುಪ್ರೀಂಗೆ ಪವಿತ್ರಾ ಗೌಡ ಮನವಿ
Pavithra Gowda

Updated on: Aug 06, 2025 | 12:46 PM

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕುತೂಹಲಕಾರಿ ಘಟ್ಟ ತಲುಪಿದೆ. ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನಿನ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಆರೋಪಿಗಳ ಜಾಮೀನು ರದ್ದಾಗುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ಪ್ರಮುಖ ಆರೋಪಿಗಳಾದ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಪರ ವಕೀಲರು ಆರೋಪಿಗಳ ಜಾಮೀನು ಯಾವ ಕಾರಣಕ್ಕೆ ರದ್ದಾಗಬಾರದೆಂದು ಕಾರಣಗಳನ್ನು ಲಿಖಿತ ರೂಪದಲ್ಲಿ ಸುಪ್ರೀಂಕೋರ್ಟ್​ಗೆ ನೀಡಿದ್ದಾರೆ.

ಪವಿತ್ರಾ ಗೌಡ ಅವರು ಪ್ರಕರಣದ ಮೊದಲ ಆರೋಪಿ ಆಗಿದ್ದು, ಪವಿತ್ರಾ ಗೌಡ ಅವರು ರೇಣುಕಾ ಸ್ವಾಮಿ ಅಪಹರಣ ಮತ್ತು ಕೊಲೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂದು ರಾಜ್ಯ ಸರ್ಕಾರದ ಪರ ವಕೀಲರು ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಿದ್ದಾರೆ. ಪವಿತ್ರಾ ಗೌಡ ಪರ ವಕೀಲರು ಸುಪ್ರೀಂಕೋರ್ಟ್​ಗೆ ನೀಡಿರುವ ಕಾರಣಗಳಲ್ಲಿ, ಪ್ರಮುಖವಾಗಿ, ಪವಿತ್ರಾ ಗೌಡ, ಮೃತ ರೇಣುಕಾಸ್ವಾಮಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು. ಘಟನೆ ನಡೆದ ದಿನ ಇತರೆ ಆರೋಪಿಗಳೊಟ್ಟಿಗೆ ಪವಿತ್ರಾ ಗೌಡ ಅವರಿಗೆ ಯಾವುದೇ ಸಂವಹನ ನಡೆದಿಲ್ಲ, ಪವಿತ್ರಾ ಗೌಡ, ರೇಣುಕಾ ಸ್ವಾಮಿಯ ಅಪಹರಣ ಮತ್ತು ಕೊಲೆಯ ಸಂಚಿನಲ್ಲಿ ಭಾಗಿ ಆಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಜಾಮೀನು ರದ್ದುಗೊಳಿಸದಿರಲು ಸುಪ್ರೀಂಗೆ ಲಿಖಿತ ಕಾರಣಗಳನ್ನು ನೀಡಿದ ದರ್ಶನ್

ರೇಣುಕಾ ಸ್ವಾಮಿ ಕೊಲೆಗೂ ತಮಗೂ ಸಂಬಂಧ ಇಲ್ಲ. ರೇಣುಕಾ ಸ್ವಾಮಿಯ ಮೃತ ದೇಹದ ಮೇಲಿನ ಗಾಯಗಳ ಪವಿತ್ರಾಗೌಡ ರಿಂದ ಆಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ‘ನಾನು ಒಬ್ಬಂಟಿ ಪೋಷಕಳಾಗಿದ್ದು ನನಗೆ 10ನೇ ತರಗತಿಯಲ್ಲಿ ಓದುತ್ತಿರುವ ಮಗಳನ್ನು ನೋಡಿಕೊಳ್ಳಬೇಕಿದೆ. ಜೊತೆಗೆ ವಯಸ್ಸಾದ ಪೋಷಕರು ಇದ್ದು, ಅವರಿಗೆ ನಾನೇ ಆಧಾರವಾಗಿದ್ದೇನೆ. ನನಗೆ ಯಾವುದೇ ಕ್ರಿಮಿನಲ್ ಹಿನ್ನಲೆ ಇಲ್ಲ, ನನ್ನ ಬಂಧನಕ್ಕೆ ಕಾರಣಗಳನ್ನು ಪೊಲೀಸರು ಲಿಖಿತವಾಗಿ ನೀಡಲಾಗಿಲ್ಲ , ಮಹಿಳೆಯಾಗಿರುವುದರಿಂದ, ಜಾಮೀನು ರದ್ದು ಮಾಡುವುದು ಕಠಿಣ ಕ್ರಮವಾಗಲಿದೆ’ ಎಂದು ಪವಿತ್ರಾ ಗೌಡ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಇನ್ನೂ ಹಲವಾರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ, ಹಲವು ತಿಂಗಳುಕಾಲ ಜೈಲಿನಲ್ಲಿ ಕಳೆದರು. ಜೈಲಿಂದ ಹೊರಬಂದ ಬಳಿಕ ಮತ್ತೆ ತಮ್ಮ ಫ್ಯಾಷನ್ ಡಿಸೈನ್ ಸ್ಟುಡಿಯೋ ಅನ್ನು ರೀಲಾಂಚ್ ಮಾಡಿದ್ದು, ಫ್ಯಾಷನ್ ಡಿಸೈನಿಂಗ್ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಪವಿತ್ರಾ ಗೌಡ. ಆದರೆ ಈಗ ಮತ್ತೆ ಜಾಮೀನು ರದ್ದಾಗುವ ಭೀತಿ ಅವರಿಗೆ ಎದುರಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Wed, 6 August 25