
ಪುಷ್ಕರ್ ಮಲ್ಲಿಕಾರ್ಜುನಯ್ಯ (Pushkarah Mallikarjunaiah) ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಸಾಹಸಕ್ಕೆ ಕೈ ಹಾಕುತ್ತಾರೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕಿರಿಕ್ ಪಾರ್ಟಿ’, ‘ಅವನೇ ಶ್ರೀಮನ್ನಾರಾಯಣ’, ‘ಅವತಾರ ಪುರುಷ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿರುವ ಅವರು ಈಗ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಾಯಕನಟ ಆಗಲು ಅವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಈಗ ಅವರು ‘ವಿಜಯನಗರ ಸಾಮ್ರಾಜ್ಯ’ (Vijayanagara Samrajya) ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ನೂತನ ತಂತ್ರಜ್ಞಾನ ಬಳಸಲಾಗುತ್ತಿದೆ.
ಹೊಸ ತಂತ್ರಜ್ಞಾನದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈ ಚಿತ್ರವನ್ನು ವರ್ಚುವಲ್ ಪ್ರೊಡಕ್ಷನ್ (ಅನ್ ರಿಯಲ್ ಇಂಜಿನ್ ಬಳಸಿ) ಚಿತ್ರೀಕರಿಸಲಾಗುತ್ತಿದೆ. ಈವರೆಗೆ ಕನ್ನಡ ಚಿತ್ರರಂಗದಲ್ಲಿ ಬಳಕೆ ಆಗದ ತಂತ್ರಜ್ಞಾನ ಇದಾಗಿದೆ. ದುಬೈ, ಮುಂಬೈ ಮೂಲದ ತಂತ್ರಜ್ಞರು ಈ ಸಿನಿಮಾಗಾಗಿ ಕಾರ್ಯ ನಿರ್ವಹಿಸಿದ್ದಾರೆ. ತುಂಬಾ ಮುಂದುವರಿದ ಟೆಕ್ನಾಲಜಿಯನ್ನು ಈ ಸಿನಿಮಾಕ್ಕೆ ಬಳಸಿರುವುದು ಔಟ್ ಪುಟ್ ನೋಡಿದಾಗ ತಿಳಿಯುತ್ತದೆ ಎಂದು ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಹೇಳಿದ್ದಾರೆ.
‘ವಿಜಯನಗರ ಸಾಮ್ರಾಜ್ಯ’ ಸಿನಿಮಾಗೆ ಈಗಾಗಲೇ ಶೇ.70ರಷ್ಟು ಕೆಲಸಗಳು ಪೂರ್ಣಗೊಂಡಿವೆ. ವಿಶೇಷ ಎಂದರೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೇ ಈ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿ ಹಾಗೂ ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತು ಅವರು ಕಾರ್ಯನಿರತರಾಗಿದ್ದಾರೆ.
ಹೀರೋ ಆಗಿ ನಟಿಸುತ್ತಿರುವ ಮೊದಲ ಸಿನಿಮಾದಲ್ಲೇ ಬೃಹತ್ ವೆಚ್ಚದ, ಕರುನಾಡ ಮಹಿಮೆ ಸಾರುವ ವಿಜಯನಗರ ಸಾಮ್ರಾಜ್ಯದ ವೈಭವವನ್ನು ತೆರೆಯ ಮೇಲೆ ಕಟ್ಟಿ ಕೊಡಲು ಪುಷ್ಕರ್ ಮಲ್ಲಿಕಾರ್ಜುನಯ್ಯ ಮುಂದಾಗಿದ್ದಾರೆ. ಎರಡು ಕಾಲಘಟ್ಟದಲ್ಲಿ ಈ ಕಥೆ ಸಾಗಲಿದೆ. ಹಂಪಿ ಸುತ್ತಮುತ್ತ ಹಾಗೂ ಬೃಹತ್ ಸೆಟ್ ನಿರ್ಮಿಸಿ ಚಿತ್ರೀಕರಿಸಲಾಗಿದೆ.
ಇದನ್ನೂ ಓದಿ: ನಾನಿ ವಿರುದ್ಧ ನಿರ್ಮಾಪಕ ಪುಷ್ಕರ್ ಕಿಡಿ; ಹಕ್ಕು ಪಡೆಯದೇ ಸಿನಿಮಾ ರಿಮೇಕ್ ಮಾಡಿದ ಆರೋಪ
ಸಿನಿಮಾ ಕುರಿತು ಪುಷ್ಕರ್ ಮಲ್ಲಿಕಾರ್ಜುನಯ್ಯ ಮಾತನಾಡಿದ್ದಾರೆ. ‘ಹಕ್ಕ ಬುಕ್ಕ ವಿದ್ಯಾರಣ್ಯರಿಂದ ಸ್ಥಾಪನೆಯಾದ ವಿಜಯನಗರ ಸಾಮ್ರಾಜ್ಯದ, 1565ರ ತಾಳಿಕೋಟೆ ಕದನದಲ್ಲಿ ಪತನವಾಗುವವರೆಗೂ ಸುಮಾರು 250 ವರ್ಷ ನಡೆದ ಕೆಲವು ಮಹತ್ತರ ಘಟನೆಗಳನ್ನು ಈ ಚಿತ್ರದಲ್ಲಿ ತೋರಿಸಲಿದ್ದೇನೆ. ದಕ್ಷಿಣ ಭಾರತವನ್ನು 250 ವರ್ಷ ಒಂದು ಸಾಮ್ರಾಜ್ಯ ಹೇಗೆ ಕಾಪಾಡಿಕೊಂಡು ಬಂತು ಎಂಬುದು ಒಂದು ಅಂಶವಾದರೆ, 1770ರಲ್ಲಿ ನಡೆಯುವ ಒಂದು ಘಟನೆ ಪ್ಲಾಶ್ ಬ್ಯಾಕ್ ನಲ್ಲಿ ಬರುತ್ತದೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.