ಕನ್ನಡಾಂಭೆಯ ದಯೆಯಿಂದ ಮಗನಿಗೆ ಖ್ಯಾತಿ ಸಿಕ್ಕಿದೆ: ಕನ್ನಡ ತಾಯಿಗೆ ನಮಿಸಿದ ರಾಜಮೌಳಿ ತಂದೆ ವಿಜಯೇಂದ್ರಪ್ರಸಾದ್

ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್, ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಡಿದ ಮಾತುಗಳು ಮೆಚ್ಚುಗೆಗೆ ಪಾತ್ರವಾದವು. ರಾಜಮೌಳಿ ಗಳಿಸಿರುವ ಖ್ಯಾತಿಗೆ ಕನ್ನಡ ತಾಯಿಯ ದಯೆ ಕಾರಣ ಎಂದರು ವಿಜಯೇಂದ್ರ ಪ್ರಸಾದ್.

ಕನ್ನಡಾಂಭೆಯ ದಯೆಯಿಂದ ಮಗನಿಗೆ ಖ್ಯಾತಿ ಸಿಕ್ಕಿದೆ: ಕನ್ನಡ ತಾಯಿಗೆ ನಮಿಸಿದ ರಾಜಮೌಳಿ ತಂದೆ ವಿಜಯೇಂದ್ರಪ್ರಸಾದ್
ರಾಜಮೌಳಿ-ವಿಜಯೇಂದ್ರಪ್ರಸಾದ್

Updated on: Mar 23, 2023 | 9:15 PM

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಸಮಾರಂಭದಲ್ಲಿ ವಿಶ್ವವಿಖ್ಯಾತ ಸಿನಿಮಾ ನಿರ್ದೇಶಕ ರಾಜಮೌಳಿಯ (Rajamouli) ತಂದೆ ವಿಜಯೇಂದ್ರ ಪ್ರಸಾದ್ (Vijayendraprasad) ಮಾತು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕರ್ನಾಟಕದ ಮೇಲೆ, ಕನ್ನಡ ತಾಯಿಯ ಮೇಲೆ ತಮಗುಳ್ಳ ಪ್ರೇಮವನ್ನು ವಿಜಯೇಂದ್ರ ಪ್ರಸಾದ್ ಕನ್ನಡದಲ್ಲಿಯೇ ವ್ಯಕ್ತಪಡಿಸಿದರು. ನನ್ನ ಮಗ ರಾಜಮೌಳಿಗೆ ವಿಶ್ವವಿಖ್ಯಾತಿ ದೊರಕಿರುವುದು ಕನ್ನಡ ತಾಯಿಯ ದಯೆಯಿಂದಲೇ ಎಂದರು. ವಿಜಯೇಂದ್ರ ಪ್ರಸಾದ್ ಮಾತಿಗೆ ಸಭಿಕರ ಶಿಳ್ಳೆಗಳ ಜೊತೆಗೆ, ಸಿಎಂ ಬೊಮ್ಮಾಯಿ ಇತರ ಸಚಿವರು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು ಎಂದು ಮಾತು ಆರಂಭಿಸಿದ ವಿಜಯೇಂದ್ರ ಪ್ರಸಾದ್, ಕನ್ನಡ ಕಂಠೀರವ ಡಾ ರಾಜ್​ಕುಮಾರ್ ಹೇಳಿರುವ ಈ ಮಾತು ಅಪ್ಪಟ ಸತ್ಯ. ಆದರೆ ಆ ಅದೃಷ್ಟ ನನಗೆ ಇಲ್ಲ. ಆದರೆ ನನಗೆ ಇನ್ನೊಂದು ಅದೃಷ್ಟ ಇದೆ. ನನ್ನ ಮದುವೆ ಆಗಿದ್ದು ಇಲ್ಲಿ, ನನ್ನ ಮಗಳು ಹುಟ್ಟಿದ್ದು ಇಲ್ಲಿ. ನನ್ನ ಮಗ ಹುಟ್ಟಿದ್ದು ಇಲ್ಲಿ. ನನ್ನ ಮಗನಿಗೆ ವಿಶ್ವ ವಿಖ್ಯಾತಿ ದೊರೆಯಲು ಕನ್ನಡ ತಾಯಿಯ ದಯೆ ಕಾರಣ. ಆ ತಾಯಿಯ ದಯೆಯಿಂದಲೇ ನನ್ನ ಮಗನಿಗೆ ಎಲ್ಲವೂ ದೊರಕಿದೆ ಎಂಬುದು ನನ್ನ ನಂಬಿಕೆ ಎಂದರ ವಿಜಯೇಂದ್ರ ಪ್ರಸಾದ್.

”ಆ ತಾಯಿಗೆ ನಾನು ಹೇಗೆ ಧನ್ಯವಾದ ಹೇಳಲಿ. ಆದರೆ ಯಾವ ತಾಯಿ ಮಗನಿಂದ ಏನನ್ನಾದರೂ ನಿರೀಕ್ಷಿಸುತ್ತಾಳೆ. ತಾಯಿಗೆ ತನ್ನ ಮಕ್ಕಳಿಂದ ಯಾವ ನಿರೀಕ್ಷೆಯೂ ಇರುವುದಿಲ್ಲ. ಮಗನಾಗಿ ನಾನು ಏನನ್ನು ಕೊಡಬಲ್ಲೆ, ನಾನು ಕೊಡಬಲ್ಲದು ಇಷ್ಟೆ. ನಾನು ಪ್ರಾರ್ಥಿಸತ್ತೇನೆ, ಅಮ್ಮ ತಾಯೇ ನನ್ನ ಮಗನಿಗೆ ನೀನು ಏನೇನೋ ಕೊಟ್ಟಿದ್ದೀಯೊ ಅದೆಲ್ಲವನ್ನೂ ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಕೊಡು ಎಂದು ಕೇಳಿಕೊಳ್ಳುತ್ತೇನೆ. ನಾನು ಈ ತಾಯಿಗೆ ಕೊಡಬಲ್ಲದು ಒಂದೇ ಅದುವೇ ವಿನಯವಂತ ಪ್ರಣಾಮಗಳು” ಎಂದು ತಲೆಬಾಗಿ ಕೈಮುಗಿದರು ವಿಜಯೇಂದ್ರ ಪ್ರಸಾದ್.

”ನಾನು ಇಲ್ಲಿ ಬಂದಿದ್ದಕ್ಕೆ ಎರಡು ಖುಷಿಯ ಸಂಗತಿಗಳಿವೆ. ಮೊದಲನೆಯದಾಗಿ, ನಾನು ಹತ್ತು ವರ್ಷ ನನ್ನ ಜೀವನ ಸವೆಸಿದ ನಾಡಿಗೆ ಬಂದಿದ್ದೇನೆ. ಮತ್ತೊಂದೆಂದರೆ ಕನ್ನಡ ಚಿತ್ರರಂಗಕ್ಕೆ ಬಹು ವರ್ಷಗಳಿಂದ ಸಂದಾಯವಾಗಬೇಕಿದ್ದ ಗೌರವ-ಆದರಗಳು ಈಗ ಸಲ್ಲಿಕೆಯಾಗುತ್ತಿವೆ. ಕೆಜಿಎಫ್ 1, ಕೆಜಿಎಫ್ 2 ಹಾಗೂ ಕಾಂತಾರ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗ ತನ್ನ ಶಕ್ತಿ, ಪ್ರತಿಭೆ ಪ್ರದರ್ಶಿಸಿದೆ. ಕನ್ನಡ ಚಿತ್ರರಂಗವು ತನ್ನ ಪ್ರತಿಭೆಯನ್ನು ಮತ್ತೆ ಮತ್ತೆ ಜಗತ್ತಿಗೆ ಸಾರುತ್ತಲೇ ಇರಲಿ ಎಂಬುದು ನನ್ನ ಹಾರೈಕೆ” ಎಂದರು ವಿಜಯೇಂದ್ರ ಪ್ರಸಾದ್.

ಸಿಎಂ ಬೊಮ್ಮಾಯಿಯವರಿಗೆ ಧನ್ಯವಾದ ಹೇಳಿದ ವಿಜಯೇಂದ್ರ ಪ್ರಸಾದ್, ಸಿರಿಕನ್ನಡನಾಡನ್ನು ಆಳುತ್ತಿರುವ ನಿಮಗೆ, ನಮ್ಮ ಚಿತ್ರರಂಗಕ್ಕೆ ಹಲವು ಒಳಿತುಗಳನ್ನು ಮಾಡುತ್ತಿರುವ ನಿಮಗೆ, ಆರ್.ಅಶೋಕ್ ಅವರಿಗೆ ನನ್ನ ಪ್ರಣಾಮಗಳು ಎಂದ ವಿಜಯೇಂದ್ರ ಪ್ರಸಾದ್, ಚಲನಚಿತ್ರೋತ್ಸವ ಆಯೋಜಕ ಮಂಡಳಿಯ ಪ್ರಮುಖರಾದ ಅಶೋಕ್ ಕಶ್ಯಪ್ ಅವರನ್ನು ಸಹ ಹೊಗಳಿದರು. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಇಂದು (ಮಾರ್ಚ್ 23) ಉದ್ಘಾಟನೆಗೊಂಡಿದ್ದು, ಮಾರ್ಚ್ 30 ರವರೆಗೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us